ಯುವತಿಯನ್ನು ಆಸ್ಪತ್ರೆಗೆ ಬಿಟ್ಟು ಯುವಕ ಎಸ್ಕೇಪ್: ಯುವತಿಯ ನಿಗೂಢ ಸಾವು
ಉಡುಪಿ, ಅಕ್ಟೋಬರ್ 25: ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಬಿಟ್ಟು ನಾಪತ್ತೆಯಾಗಿದ್ದು, ಬಳಿಕ ಕೆಲ ಹೊತ್ತಿನಲ್ಲೇ ಯುವತಿ ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಡೆದಿದೆ.
ಅ.24ರ ಶನಿವಾರ ಸಂಜೆ ಪ್ರಶಾಂತ್ ಕುಂದರ್ ಎಂಬ ಯುವಕನು ಆಟೋದಲ್ಲಿ ಖಾಸಗಿ ಆಸ್ಪತ್ರೆಗೆ ರಕ್ಷಿತಾ ನಾಯಕ್ ಎಂಬ ಯುವತಿಯನ್ನು ಕರೆತಂದಿದ್ದ. ಆಸ್ಪತ್ರೆಗೆ ದಾಖಲಾದ ಕೆಲವೇ ಹೊತ್ತಿನಲ್ಲಿ ರಕ್ಷಿತಾ ಮೃತಪಟ್ಟಿದ್ದಾಳೆ.
ಈ ಮಧ್ಯೆ ಆಕೆಯನ್ನು ಕರೆತಂದಿದ್ದ ಯುವಕ ನಾಪತ್ತೆಯಾಗಿದ್ದು, ಪೊಲೀಸರು ಯುವಕನ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆಸ್ಪತ್ರೆಗೆ ಸೇರಿಸಿ ಯುವತಿಯ ಮನೆಯವರಿಗೆ ಕರೆ ಮಾಡಿ, ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿರುವ ಯುವಕನ ನಡೆ ಮತ್ತು ಯುವತಿಯ ಸಾವು ಎರಡೂ ನಿಗೂಢವಾಗಿದೆ.
ರಕ್ಷಿತಾ ನಾಯಕ್, ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿ. ಕೆಲಸ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಉಡುಪಿ ನಗರದಲ್ಲಿ ವಾಸವಿದ್ದಳು. ಹದಿನೈದು ದಿನಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದ ರಕ್ಷಿತಾ ನಾಯಕ್ ಅವಳಿಗೆ ಪ್ರಶಾಂತ್ ಕುಂದರ್ ಯಾವ ರೀತಿ ಪರಿಚಯ ಎಂಬ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕಿದೆ.
Recommended Video
ಸದ್ಯ ರಕ್ಷಿತಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಉಡುಪಿ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.