ಸಂಪನ್ನಗೊಂಡ ಉಡುಪಿ ಪರ್ಯಾಯ; ಸಾಕ್ಷಿಯಾದ ಭಕ್ತಸಾಗರ
ಉಡುಪಿ, ಜನವರಿ 18: ಉಡುಪಿಯ ಜನತೆಗೆ ನಿನ್ನೆ ರಾತ್ರಿಯಿಡೀ ಹಗಲಾಗಿತ್ತು. ಅದ್ದೂರಿಯಾಗಿ ಪರ್ಯಾಯ ಮಹೋತ್ಸವ ಸಂಪನ್ನಗೊಂಡಿತು. ಒಂದೆಡೆ ಅಷ್ಠಮಠಾಧೀಶರುಗಳು ಪರ್ಯಾಯ ಸಂಪ್ರದಾಯಗಳಲ್ಲಿ ಮುಳುಗಿದ್ದರೆ, ಇನ್ನೊಂದೆಡೆ ಅಲ್ಲಿ ನೆರೆದಿದ್ದ ಸಹಸ್ರ ಸಹಸ್ರ ಭಕ್ತರಿಗೆ ರಾತ್ರಿಯಿಡೀ ಸಡಗರ-ಸಂಭ್ರಮದಲ್ಲಿ ತೇಲಿದರು.
ಅದಮಾರು ಈಶಪ್ರಿಯ ಶ್ರೀಗಳ ಪೀಠಾರೋಹಣದೊಂದಿಗೆ ಉಡುಪಿಯಲ್ಲಿ 250 ನೇ ಪರ್ಯಾಯ ಸಂಪನ್ನಗೊಂಡಿತು. ಉಡುಪಿ ಸಹಿತ ನಾಡಿನ ಮೂಲೆಮೂಲೆಯ ಭಕ್ತರು ಪರ್ಯಾಯದ ಅದ್ದೂರಿತನ ಮತ್ತು ವೈಭವಕ್ಕೆ ಸಾಕ್ಷಿಯಾದರು.
ಚಿತ್ರಗಳು; ಕೃಷ್ಣನಗರಿಯ ಪರ್ಯಾಯೋತ್ಸವ ತಯಾರಿ ನೋಡಲೆಷ್ಟು ಚೆಂದ
ಮುಂಜಾನೆ ಪರ್ಯಾಯದ ಮೆರವಣಿಗೆ, ಸರ್ವಜ್ಞ ಪೀಠಾರೋಹಣ, ಅಕ್ಷಯಪಾತ್ರೆ ಹಸ್ತಾಂತರ ಕಾರ್ಯಕ್ರಮಗಳೊಂದಿಗೆ ಪರ್ಯಾಯದ ಒಂದು ಹಂತ ಮುಗಿಯಿತು.
ಅದಮಾರು ಶ್ರೀಗಳಿಂದ ಪೀಠಾರೋಹಣ
ಅದಮಾರು ಈಶಪ್ರಿಯ ಶ್ರೀಗಳು ಕೃಷ್ಣ ಪೂಜಾ ಅಧಿಕಾರ ಸ್ವೀಕರಿಸುವ ಶುಭಗಳಿಗೆಗೆ ನಾಡಿಗೆ ನಾಡೇ ಸಾಕ್ಷಿಯಾಯಿತು. ನಿನ್ನೆ ಸಂಜೆಯಿಂದ ಇಂದು ಮುಂಜಾನೆಯತನಕ ಉಡುಪಿಯಲ್ಲಿ ಅಕ್ಷರಶಃ ಹಬ್ಬದ ವಾತಾವರಣ ನೆಲೆಸಿತ್ತು.
ಈಶಪ್ರಿಯ ಶ್ರೀಗಳ ಪರ್ಯಾಯ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಅತ್ಯಂತ ವೈಭವದಿಂದ ಜರುಗಿತು. ಉಡುಪಿಯ ಎಲ್ಲ ಬೀದಿಗಳಲ್ಲಿ ದೀಪಾಲಂಕಾರ ಮಾಡಿ ಕಂಗೋಳಿಸುವಂತೆ ಮಾಡಲಾಗಿತ್ತು. ಈ ಪರ್ಯಾಯವನ್ನು ಕಣ್ತುಂಬಿಕೊಳ್ಳಲು ನಾಡಿನ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು.
ಸಹಸ್ರ ಸಹಸ್ರ ಭಕ್ತರು ಸಾಕ್ಷಿಯಾದರು
ಇಂದು ಮುಂಜಾನೆ 5.57 ರ ಸುಮಾರಿಗೆ ಪಲಿಮಾರು ಶ್ರೀಗಳಿಂದ ಅಕ್ಷಯಪಾತ್ರೆ ಪಡೆದುಕೊಳ್ಳುವುದರೊಂದಿಗೆ ಮತ್ತು ಸರ್ವಜ್ನ ಪೀಠಾರೋಹಣಗೈಯುವುದರೊಂದಿಗೆ ಅದಮಾರು ಈಶಪ್ರಿಯ ಶ್ರೀಗಳು ಪ್ರಥಮ ಬಾರಿಗೆ ಪರ್ಯಾಯ ಪೀಠ ಏರಿದಂತಾಯಿತು. ಹಾಗೆಯೇ ಮಠದ ಪರಂಪರೆಯ 250 ನೇ ಪರ್ಯಾಯ ಸಂಪನ್ನಗೊಂಡಿತು.
ನಿನ್ನೆ ರಾತ್ರಿ ಭಕ್ತರು ಸಹಸ್ರೋಪಾದಿಯಲ್ಲಿ ಕೃಷ್ಣಮಠಕ್ಕೆ ಲಗ್ಗೆ ಇಡುವುದರೊಂದಿಗೆ ಪರ್ಯಾಯದ ಸಡಗರ ಮೊದಲುಗೊಂಡು, ಬಳಿಕ ನಿರ್ಗಮನ ಪಲಿಮಾರು ಶ್ರೀಗಳಿಗೆ ಸಂಪ್ರದಾಯದಂತೆ ಪೌರ ಸನ್ಮಾನ ನಡೆಯಿತು.
ಉಡುಪಿ ಕೃಷ್ಣಮಠದ ರಥಬೀದಿಯಲ್ಲೀಗ ಸಪ್ತೋತ್ಸವ ಸಂಭ್ರಮ
ಮೆರವಣಿಗೆಯಲ್ಲಿ ಸ್ತಬ್ಧಚಿತ್ರಗಳು, ಕಲಾಕೃತಿಗಳು
ತದನಂತರ ಕೃಷ್ಣಮಠದ ಸಡಗರ ನಗರದೆಲ್ಲೆಡೆ ಹಬ್ಬಿತ್ತು. ಪ್ರತೀ ಪರ್ಯಾಯ ಮಹೋತ್ಸವದ ಐತಿಹಾಸಿಕ ಮೆರವಣಿಗೆ ಜೋಡುಕಟ್ಟೆಯಿಂದ ಪ್ರಾರಂಭಗೊಂಡು ಕೃಷ್ಣ ಮಠಕ್ಕೆ ಸಾಗಿ ಬರಬೇಕು. ಈ ಸಮಯದಲ್ಲಿ ಮನೆಯಲ್ಲಿ ಕುಳಿತ ಮಠಾಧೀಶರುಗಳು ಪರ್ಯಾಯದ ಮೆರವಣಿಗೆಗೆ ಐತಿಹಾಸಿಕ ಮುದ್ರೆಯೊತ್ತುತ್ತಾರೆ.
ಮುಂಜಾನೆ ನಡೆದ ಮೆರವಣಿಗೆಯನ್ನು ನೋಡಿದವರಿಗೇ ಅದರ ವೈಭವ ಗೊತ್ತಾಗುತ್ತದೆ. ಸ್ತಬ್ಧಚಿತ್ರಗಳು, ವಿವಿಧ ಬಿರುದಾವಳಿಗಳು, ವಿವಿಧ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಕಲಾಕೃತಿಗಳು ಭಕ್ತರನ್ನು ಭಾವಪರವಶರನ್ನಾಗಿಸಿದವು.
ಇಂದು ಮಧ್ಯಾಹ್ನ ಅಧಕೃತವಾಗಿ ಪರ್ಯಾಯ ಸಂಪನ್ನ
ಬೆಳಿಗ್ಗೆ 5 ಗಂಟೆ ಸುಮಾರಿಗೆ ಮೆರವಣಿಗೆ ಕೃಷ್ಣ ಮಠ ತಲುಪಿದ ಬಳಿಕ ಪರ್ಯಾಯ ಶ್ರೀಗಳಿಗೆ ಅಕ್ಷಯಪಾತ್ರೆ ಹಸ್ತಾಂತರ ವಿಧಿ ನಡೆಯಿತು. ಪಲಿಮಾರು ಶ್ರೀಗಳು ಅಕ್ಷಯಪಾತ್ರೆ ಮತ್ತು ಸಟ್ಟುಗವನ್ನು ಅದಮಾರು ಶ್ರೀಗಳಿಗೆ ಹಸ್ತಾಂತರಿಸಿದರು.
ಬಳಿಕ ಸರ್ವಜ್ನ ಪಿಠಾರೋಹಣ ವಿಧಿ ನೆರವೇರಿತು. ಪರ್ಯಾಯದ ಹಲವು ಸಾಂಪ್ರದಾಯಿಕ ವಿಧಿಗಳು ಜರುಗಿದ ಬಳಿಕ ರಾಜಾಂಗಣದಲ್ಲಿ ಇಂದು ಮಧ್ಯಾಹ್ನ ಪರ್ಯಾಯ ದರ್ಬಾರ್ ಕಾರ್ಯಕ್ರಮ ಅಧಿಕೃತವಾಗಿ ಸಂಪನ್ನಗೊಳ್ಳಲಿದೆ.