ದೇರ್ ಈಸ್ ನೋ ಕಾಂಪ್ರಮೈಸ್ ಎಂದ ಗೃಹ ಸಚಿವ
ಉಡುಪಿ, ಏಪ್ರಿಲ್ 23: ರಾಜ್ಯದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಪ್ರಕರಣಗಳನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಆರೋಪಿಗಳಿಗ ಕಠಿಣ ಶಿಕ್ಷೆ ಆಗಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ಉಡುಪಿಯಲ್ಲಿ ಕೊರೊನಾ ನಿಯಂತ್ರಣ ಕುರಿತ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಬೊಮ್ಮಾಯಿ, ಹಲ್ಲೆ ಪ್ರಕರಣದಲ್ಲಿ ಯಾರೇ ಎಷ್ಟೇ ದೊಡ್ಡವರಾದರೂ ಕಠಿಣ ಕ್ರಮ ತೆಗದುಕೊಳ್ಳುತ್ತೇವೆ, ದೇರ್ ಈಸ್ ನೋ ಕಾಂಪ್ರಮೈಸ್ ಎಂದು ತಿಳಿಸಿದರು.
ಖಾಸಗಿ ಶಾಲೆ ಶುಲ್ಕ, ಶಿಕ್ಷಕರ ವೇತನದ ಬಗ್ಗೆ ಸರ್ಕಾರದ ಸೂಚನೆ
ಹಲ್ಲೆ ಮಾಡಿರುವ ಆರೋಪಿಗಳಿಗೆ ಜಾಮೀನು ಕೊಡಬಾರದೆಂಬ ವಿಚಾರ ಇದೆ. ಕೇಂದ್ರ ಮತ್ತು ರಾಜ್ಯದ ಸುಗ್ರೀವಾಜ್ಞೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುತ್ತೇವೆ ಎಂದರು. ಉಡುಪಿಯಲ್ಲಿ ಕೊರೊನಾ ನಿರ್ವಹಣೆ ಚೆನ್ನಾಗಿದೆ, ಎಲ್ಲಾ ವೈದ್ಯರಿಗೆ ಹಾಗೂ ಅಧಿಕಾರಿಗಳಿಗೆ ಧನ್ಯವಾದ ತಿಳಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸೆಂಟ್ರಲೈಸ್ಡ್ ಆಕ್ಸಿಜನ್ ಹೊಂದಿರುವ 50 ಬೆಡ್ ವ್ಯವಸ್ಥೆ, ತಾಲ್ಲೂಕಿನಲ್ಲಿ 10 ಬೆಡ್ ವ್ಯವಸ್ಥೆ ಮಾಡಲು ನಿರ್ಧಾರ ಮಾಡಲಾಗಿದ್ದು, ಜಿಲ್ಲೆಗೆ 3500 ಪಿಪಿಇ ಕಿಟ್ ಅಗತ್ಯ ಇದೆ. ಉಡುಪಿಯಲ್ಲಿ ಕೊರೊನಾ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ 27 ಲ್ಯಾಬ್ ಆರಂಭವಾಗಲಿವೆ ಎಮದು ಮಾಹಿತಿ ನೀಡಿದರು.
ಹೊರ ಜಿಲ್ಲೆಯಿಂದ ಬರುವ ಜನರನ್ನು ಸದ್ಯಕ್ಕೆ ಉಡುಪಿಯೊಳಗೆ ಬಿಡಲ್ಲ, ಜಿಲ್ಲೆಯಲ್ಲಿ ನಿರ್ಬಂಧ ಸಡಿಲಿಸುವ ಬಗ್ಗೆ ಬೇಡಿಕೆ ಇದೆ. ಆದರೆ ಅದನ್ನು ಉಡುಪಿ ಗ್ರೀನ್ ಝೋನ್ ವ್ಯಾಪ್ತಿಗೆ ಬಂದಮೇಲೆ ಚಿಂತನೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಆಗಿರುವ ಬಸವರಾಜ ಬೊಮ್ಮಾಯಿ ಹೇಳಿದರು.