ಕರಾವಳಿಯಲ್ಲಿ ಯಶಸ್ವಿಯಾದ SSLC ಪರೀಕ್ಷೆ; ಮುಸ್ಲಿಂ ಧರ್ಮಗುರುಗಳ ಕರೆಗೆ ಓಗೊಟ್ಟ ವಿದ್ಯಾರ್ಥಿಗಳು
ಉಡುಪಿ, ಮಾರ್ಚ್ 28: ಹಿಜಾಬ್ ವಿವಾದ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳು ಸೂಸೂತ್ರವಾಗಿ ಆರಂಭವಾಗಿದೆ. ರಾಜ್ಯದಲ್ಲಿ ಹಿಜಾಬ್ ಕಿಚ್ಚು ಹಚ್ಚಿದ ಊರಿನಲ್ಲಿ ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಮೊದಲ ಪರೀಕ್ಷೆಗೆ ಹಾಜರಾಗಿದ್ದಾರೆ. ಹಿಜಾಬ್ ಗೊಂದಲ ಇಲ್ಲದೇ ಸರ್ಕಾರದ ನಿಯಮಾನುಸಾರವಾಗಿ ಪರೀಕ್ಷೆ ಆರಂಭವಾಗಿದ್ದು, ಉಡುಪಿ ಜಿಲ್ಲಾಡಳಿತ ನಿರಾಳವಾಗಿದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಹಿಜಾಬ್ ವಿಚಾರವಾಗಿ ಸುದ್ದಿಯಾದ ಉಡುಪಿ ಜಿಲ್ಲೆ ಶೈಕ್ಷಣಿಕ ವಿಚಾರದಲ್ಲಿ ಮತ್ತೆ ಮುನ್ನಲೆಗೆ ಬಂದಿದೆ. ಹಿಜಾಬ್ ಹೋರಾಟ ಆರಂಭವಾದ ಉಡುಪಿ ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಹಿಜಾಬ್ ವಿಚಾರದ ಯಾವುದೇ ಗೊಂದಲಗಳಿಗೆ ಕಿವಿಗೊಡದೆ ಮೊದಲನೇ ಪರೀಕ್ಷೆ ಎದುರಿಸಿದ್ದಾರೆ. ವಿವಾದಗಿಂತ ಪರೀಕ್ಷೆ ಮುಖ್ಯ ಎಂದು ಮುಸ್ಲಿಂ ಧರ್ಮಗುರುಗಳು ನೀಡಿದ ಕರೆಯ ಹಿನ್ನಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ.
ರಾಮನಗರ: ಹಿಜಾಬ್ ಗೊಂದಲವಿಲ್ಲದೆ ನಡೆದ SSLC ಪರೀಕ್ಷೆ; 346 ವಿದ್ಯಾರ್ಥಿಗಳು ಗೈರು
ಪರೀಕ್ಷೆಗೂ ಮುನ್ನ ಉಡುಪಿಯ ಮುಸ್ಲಿಂ ಧಾರ್ಮಿಕ ಗುರು ರೆಹಮಾನ್ ರಜ್ವೀ, ಮುಸ್ಲಿಂ ವಿದ್ಯಾರ್ಥಿಗಳಿಗೆ ಪರೀಕ್ಷೆಗಳಿಗೆ ಹಾಜರಾಗುವಂತೆ ಕರೆ ನೀಡಿದ್ದರು. ಮಾನ್ಯ ಪ್ರೀತಿಯ ಸಮಾಜ ಬಾಂಧವರೇ ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಪರೀಕ್ಷೆಗೆ ಕಳುಹಿಸಿ. ಈ ವರ್ಷ ಶೈಕ್ಷಣಿಕ ವರ್ಷ ಮುಗಿದಿದೆ ಪರೀಕ್ಷೆಗಳು ಆರಂಭವಾಗಿದೆ. ಹೆತ್ತವರು ಮಕ್ಕಳ ಭವಿಷ್ಯದ ಬಗ್ಗೆ ಗಮನ ಹರಿಸಬೇಕು. ದೂರದೃಷ್ಟಿಯನ್ನು ಇಟ್ಟುಕೊಂಡು ನಾವು ನಿರ್ಧಾರ ಮಾಡಬೇಕು. ಉಲಾಮಾಗಳು ಖಾಜಿಗಳು ಹೇಳಿದಂತೆ ಶೈಕ್ಷಣಿಕಕ್ಕೂ ಜೀವನಕ್ಕೂ ಮಹತ್ವ ಕೊಡಬೇಕು. ಹಿಜಾಬ್ ವಿಚಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಎಲ್ಲವೂ ಪೂರಕವಾಗುವ ನಿರೀಕ್ಷೆ ಇದೆ ಎಂದು ಧಾರ್ಮಿಕ ಮುಖಂಡ ರೆಹಮಾನ್ ರಜ್ವೀ ಕರೆ ನೀಡಿದ್ದರು.
ಸರ್ಕಾರದ ನಿಯಮದ ಪ್ರಕಾರ ಹಿಜಾಬ್ಗೆ ಅವಕಾಶ ಇಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾರೆ. ಬಹುತೇಕ ವಿದ್ಯಾರ್ಥಿನಿಯರು ಹಿಜಾಬ್ ಇಲ್ಲದೆ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ್ದರು. ಉಡುಪಿ ಜಿಲ್ಲೆಯಲ್ಲಿ ಸಾವಿರದ ಇನ್ನೂರಕ್ಕೂ ಅಧಿಕ ಮುಸ್ಲಿಂ ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಒಟ್ಟು ಹದಿನಾಲ್ಕು ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 58 ಪರೀಕ್ಷಾ ಕೇಂದ್ರಗಳನ್ನು ಮಾಡಲಾಗಿದೆ. ಪ್ರತೀ ಕೊಠಡಿಯಲ್ಲಿ 20 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು.
ಉಡುಪಿಯ ಬೋರ್ಡ್ ಹೈಸ್ಕೂಲ್ಗೆ ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಭೇಟಿ ನೀಡಿದ್ದಾರೆ. ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಡಿಸಿ ಧೈರ್ಯ ತುಂಬಿದ್ದಾರೆ. ಪರೀಕ್ಷೆ ಆರಂಭವಾಗಿದೆ ಏಪ್ರಿಲ್ 11ರವರೆಗೆ ನಡೆಯಲಿದೆ. ಉಡುಪಿಯ 58 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ 14 ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುತ್ತಿದ್ದಾರೆ. ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದರು.
ಕೋವಿಡ್ ಮಾರ್ಗಸೂಚಿಗೆ ಅನ್ವಯವಾಗಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಿದ್ದೇವೆ. ಉತ್ತಮ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಪರೀಕ್ಷಾ ಕೇಂದ್ರಕ್ಕೆ ಭೇಟಿ ಕೊಟ್ಟು ಧೈರ್ಯ ತುಂಬಿದ್ದೇನೆ. ಸರಕಾರದ ಸುತ್ತೋಲೆ ಅನ್ವಯವಾಗಿ ಕ್ರಮವನ್ನು ಕೈಗೊಂಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಗೊಂದಲಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಡಿಸಿ ಕೂರ್ಮರಾವ್ ಹೇಳಿದರು.
ಮುಸಲ್ಮಾನ ಮುಖಂಡರು ಧರ್ಮಗಳಿಂದ ಶಿಕ್ಷಣಕ್ಕೆ ಪ್ರೋತ್ಸಾಹ ವಿಚಾರವಾಗಿಯೂ ಮಾತನಾಡಿದ ಡಿಸಿ ಕೂರ್ಮರಾವ್, ಉಡುಪಿ ಜಿಲ್ಲೆಯಲ್ಲಿ ಉತ್ತಮವಾದ ಬೆಳವಣಿಗೆ ನಡೆದಿದೆ. ಎಲ್ಲಾ ಸಮುದಾಯದ ಮುಖಂಡರು ಶಿಕ್ಷಣಕ್ಕೆ ಮಹತ್ವ ನೀಡಬೇಕು. ಮುಸಲ್ಮಾನ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಲಾಗಿತ್ತು. ಮುಸ್ಲಿಂ ಮುಖಂಡರು ಕೂಡಾ ಪರೀಕ್ಷೆ ಬರೆಯಲು ಪ್ರೋತ್ಸಾಹ ನೀಡುತ್ತಿದ್ದಾರೆ. ಯಾವ ರೀತಿ ಪರೀಕ್ಷೆ ನಡೆಸಬೇಕು ಎಂಬುದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಇದೆ. ಸುತ್ತೋಲೆಯಲ್ಲಿರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಅಂತಾ ಡಿಸಿ ಕೂರ್ಮಾರಾವ್ ಹೇಳಿದ್ದಾರೆ.