ಬುದ್ಧಿವಂತರ ಜಿಲ್ಲೆಯಲ್ಲೇ ಅಸ್ಪೃಶ್ಯತೆ! ಪಂಚಾಯತಿ ಮುಂದೆ ಚಟ್ಟ ಕಟ್ಟಿದ ದಲಿತರು
ಉಡುಪಿ, ಜನವರಿ 28: "ಬುದ್ಧಿವಂತರ ಜಿಲ್ಲೆ" ಎಂದು ಕರೆಸಿಕೊಳ್ಳುವ ಉಡುಪಿಯಲ್ಲಿ ಅಸ್ಪೃಶ್ಯತೆ ಈಗಲೂ ಜೀವಂತ ಇದೆ. ಈಗಲೂ ದಲಿತರ ವಿಚಾರದಲ್ಲಿ ಅಸ್ಪೃಶ್ಯತೆ ಎನ್ನುವುದು ಮರೆ ಮಾಚಿಲ್ಲ. ಹೌದು, ಕಾಪು ತಾಲೂಕಿನ ಉಚ್ಚಿಲ ಎಂಬಲ್ಲಿ ದಲಿತರಿಗೆ ಸ್ಮಶಾನ ಎಂಬುದು ಈಗಲೂ ಮರೀಚಿಕೆ. ತಮ್ಮ ಗ್ರಾಮಕ್ಕೊಂದು ಸ್ಮಶಾನ ಬೇಕು ಎನ್ನುವುದು ಇವರ ಬಹಳ ಹಿಂದಿನ ಬೇಡಿಕೆ.
ಇದ್ದ ಸ್ಮಶಾನದಲ್ಲೂ ಶವ ಸಂಸ್ಕಾರ ಮಾಡಲು ಇವರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಗ್ರಾಮ ಪಂಚಾಯಿತಿ ಕಚೇರಿ ಮುಂದೆಯೇ ಚಟ್ಟ ತಯಾರಿಸಿ ದಲಿತರು ಪ್ರತಿಭಟನೆ ನಡೆಸಿದರು.
ವರ್ಷಗಳು ಕಳೆದರೂ ತೆರೆದಿಲ್ಲ ಸ್ಮಶಾನ
ಉಡುಪಿಯ ಉಚ್ಚಿಲ ಬಡಾ ಗ್ರಾ.ಪಂ ವ್ಯಾಪ್ತಿಯಲ್ಲಿನ ಸಾರ್ವಜನಿಕ ಹಿಂದೂ ರುದ್ರಭೂಮಿಯ ವಿವಾದಕ್ಕೆ ಇನ್ನೂ ತೆರೆ ಬಿದ್ದಿಲ್ಲ. ಈ ಗ್ರಾಮದಲ್ಲಿ ಒಂದು ರುದ್ರಭೂಮಿ ಇದ್ದರೂ ಅದರಲ್ಲಿ ದಲಿತರಿಗೆ ಶವ ಸಂಸ್ಕಾರ ಮಾಡಲು ಒಂದು ಸಮುದಾಯ ಬಿಡುತ್ತಿಲ್ಲ. ಹೀಗಾಗಿ ಸ್ಮಶಾನವನ್ನೇ ಬಂದ್ ಮಾಡಿ ವರ್ಷಗಳಾಗಿವೆ. ಯಾರಾದರೂ ಸಾವನ್ನಪ್ಪಿದರೆ ಶವವನ್ನು ಪಕ್ಕದ ಗ್ರಾಮಕ್ಕೆ ಒಯ್ದು ಅಂತ್ಯಸಂಸ್ಕಾರ ನಡೆಸಬೇಕಿದೆ.
ಸೇತುವೆ ಮೇಲಿಂದ ಶವ ಕೆಳಗಿಳಿಸಿದ್ರು, ಘಟನೆ ಹಿಂದಿದೆ ಮನಕಲಕುವ ಕತೆ
ಗ್ರಾಮ ಪಂಚಾಯಿತಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ
ಇಂದು ಗ್ರಾಮದಲ್ಲಿ ಪರಿಶಿಷ್ಟ ಸಮುದಾಯದ ವ್ಯಕ್ತಿಯೊಬ್ಬರು ಸಾವನ್ನಪ್ಪಿದರು. ಯಥಾಪ್ರಕಾರ ಊರಲ್ಲಿರುವ ರುದ್ರಭೂಮಿಯಲ್ಲಿ ಶವ ಸಂಸ್ಕಾರ ಮಾಡಲು ಅನುಮತಿ ಸಿಗಲೇ ಇಲ್ಲ. ಆದರೆ ಸ್ಮಶಾನ ಬಂದ್ ಆಗಿದ್ದ ಕಾರಣ ದಲಿತರ ಸಹನೆ ಕಟ್ಟೆ ಒಡೆಯಿತು. ಸ್ಮಶಾನವಿಲ್ಲದಿರುವುದನ್ನು ಖಂಡಿಸಿ ಪ್ರತಿಭಟಿಸಿ ದಸಂಸ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಗ್ರಾಪಂ ಕಚೇರಿ ಎದುರು ಚಟ್ಟ ನಿರ್ಮಿಸಿ ಪ್ರತಿಭಟನೆ ನಡೆಸಲಾಯಿತು.
ಎರ್ಮಾಳ್ ಬಡ ಎಂಬಲ್ಲಿನ ರುದ್ರಭೂಮಿ
ಎರ್ಮಾಳ್ ಬಡ ಎಂಬಲ್ಲಿರುವ ಸಾರ್ವಜನಿಕ ಹಿಂದೂ ರುದ್ರಭೂಮಿಯಲ್ಲಿ ದಲಿತರಿಗೆ ಶವ ಸಂಸ್ಕಾರ ನಡೆಸಲು ಶತಮಾನಗಳಿಂದ ನಿರಾಕರಿಸಲಾಗುತ್ತಿದೆ ಎಂಬುದು ದಸಂಸ ಆರೋಪ. ಇಂದು ನಿಧನರಾದ ಉಚ್ಚಿಲ ಬಡಾ ಗ್ರಾಪಂ ವ್ಯಾಪ್ತಿಯ ಮುಳ್ಳಗುಡ್ಡೆಯ ಪರಿಶಿಷ್ಟ ಜಾತಿಗೆ ಸೇರಿದ ಶಂಕರ್ (80) ಎಂಬವರ ಶವ ಸಂಸ್ಕಾರಕ್ಕೆ ಸ್ಮಶಾನ ಇಲ್ಲದ ಕಾರಣ, ದಸಂಸ ಜಿಲ್ಲಾ ಸಂಚಾಲಕ ಸುಂದರ್ ಮಾಸ್ತರ್ ನೇತೃತ್ವದಲ್ಲಿ ಗ್ರಾಪಂ ಕಚೇರಿ ಮುಂದೆ ಕಟ್ಟಿಗೆಗಳನ್ನು ಇರಿಸಿ ಚಟ್ಟವನ್ನು ಅಣಿಗೊಳಿಸಲಾಯಿತು. ಬಳಿಕ ಅಲ್ಲೇ ಪ್ರತಿಭಟನೆ ನಡೆಸಲಾಯಿತು.
ನೀರಿಲ್ಲ, ರೋಡಿಲ್ಲ; ಪಾಲಿಕೆ ಚುನಾವಣೆ ಬಹಿಷ್ಕಾರಕ್ಕೆ ಕರೂರು ಗ್ರಾಮಸ್ಥರ ತೀರ್ಮಾನ
ಸೂಕ್ತ ವ್ಯವಸ್ಥೆ ಮಾಡುವುದಾಗಿ ಭರವಸೆ
ಮೃತರ ಅಂತ್ಯಕ್ರಿಯೆ ನಡೆಸಲು ಸ್ಮಶಾನದ ವ್ಯವಸ್ಥೆ ಮಾಡುವಂತೆ ದಸಂಸ ಮುಖಂಡರು ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಯನ್ನು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಕಾಪು ತಹಶೀಲ್ದಾರ್ ಮುಹಮ್ಮದ್ ಇಸಾಕ್, ದಸಂಸ ಮುಖಂಡರೊಂದಿಗೆ ಮಾತುಕತೆ ನಡೆಸಿ ಬೆಳಪು ಗ್ರಾಪಂನ ಸ್ಮಶಾನದಲ್ಲಿ ವ್ಯವಸ್ಥೆ ಕಲ್ಪಿಸುವುದಾಗಿ ತಿಳಿಸಿದರು. ಆದರೆ ಇದನ್ನು ನಿರಾಕರಿಸಿದ ಮುಖಂಡರು, ಬಡಾ ಗ್ರಾಪಂ ವ್ಯಾಪ್ತಿಯಲ್ಲಿಯೇ ಮೃತದೇಹ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಬೇಕು ಎಂದು ಆಗ್ರಹಿಸಿದರು. ಅಲ್ಲದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸಿ ಸಮಸ್ಯೆ ಪರಿಹರಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಇದೀಗ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿಗಳು ಸ್ಮಶಾನ ನಿರ್ಮಾಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.