ಕುಂದಾಪುರದ ರಥಶಿಲ್ಪಿ ಲಕ್ಷ್ಮೀ ನಾರಾಯಣಾಚಾರ್ಯರ ಕಲಾ ಬದುಕಿನ ಪಯಣ
ಉಡುಪಿ, ಸೆಪ್ಟೆಂಬರ್ 8: ಕೆಲವರದು ಹವ್ಯಾಸಿ ಕಲೆ, ಇನ್ನು ಹಲವರದ್ದು ಕಮರ್ಷಿಯಲ್ ಕಲೆ, ಕೆಲವೇ ಕೆಲವರು ತಮ್ಮ ಜೀವನವನ್ನೇ ಕಲಾ ಸಾಧನೆಗೆ ಮುಡಿಪಾಗಿಡುತ್ತಾರೆ. ಅಂಥವರ ಬದುಕೇ ಒಂದು ಕಲೆ. ಅವರು ಮಾಡುವ ಪ್ರತಿದಿನದ ವೃತ್ತಿಯೇ ಒಂದು ಕಲಾ ತಪಸ್ಸು.
Recommended Video
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯರು ಇಂತಹ ಅಪರೂಪದ ಕಲಾ ತಪಸ್ವಿ. ವೃತ್ತಿಯಲ್ಲಿ ಬ್ರಹ್ಮರಥಗಳ ಶಿಲ್ಪಿಯಾಗಿರುವ ಇವರು ಈತನಕ 120ಕ್ಕೂ ಹೆಚ್ಚು ಬ್ರಹ್ಮರಥಗಳನ್ನು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.
ಕೊರೊನಾ ಎಫೆಕ್ಟ್: ಕೃಷ್ಣ... ಕೃಷ್ಣ... ಮಠ ನಡೆಸುವುದೂ ಕಷ್ಟ, ಕೋಟಿ ಸಾಲಕ್ಕೆ ಉಡುಪಿ ಕೃಷ್ಣಮಠ ಮೊರೆ!
ಕೋಟೇಶ್ವರದ ತಲ್ಲೂರು ರಾಮಾಚಾರ್ಯ ಹಾಗೂ ಜಾನಕಿಯವರಿಂದ ಇವರಿಗೆ ಕಲೆ ರಕ್ತದಲ್ಲೇ ಕರಗತವಾಗಿತ್ತು. ಸಣ್ಣ ವಯಸ್ಸಿನಲ್ಲೇ ಮರದ ಕೆಲಸ ಪ್ರಾರಂಭಿಸಿ, ಕೆತ್ತನೆ ಕೆಲಸದಲ್ಲಿ ಪ್ರತಿಭೆ ಮೆರೆದವರು.
ದೇವರ ಮಂಟಪ, ಮಂಟಪದ ಪ್ರಭಾವಳಿ, ದೇವರಮೂರ್ತಿ, ಶಿಲೆಯಲ್ಲಿ ಕಲೆ ಅರಳಿಸುವುದು, ನಾಗರಕಲ್ಲು ತಯಾರಿಸುವುದು ಹೀಗೆ ಇವರು ಕೆತ್ತನೆ ಕೆಲಸಗಳಲ್ಲಿ ಅಪಾರ ಹೆಸರು ಗಳಿಸಿದ ಬಳಿಕ ಇವರು ಬ್ರಹ್ಮರಥಗಳ ಕೆತ್ತನೆಗೆ ಇಳಿದರು.
ಇವರ ಸುಂದರ ಕೆತ್ತನೆ ಕೆಲಸ ನೋಡಿದ ಕೋಟೇಶ್ವರದ ಕೋಟಿಲಿಂಗೇಶ್ವರ ದೇವಸ್ಥಾನದವರು ಕೋಟಿಲಿಂಗೇಶ್ವರದ ದೇವಸ್ಥಾನದ ಪುಷ್ಪರಥ ನಿರ್ಮಿಸಲು ಅವಕಾಶ ನೀಡಿದರು ಅಷ್ಟೆ, ಆಮೇಲಿನದ್ದು ಇತಿಹಾಸ.
ಲಕ್ಷ್ಮೀನಾರಾಯಣ ಆಚಾರ್ಯರು ಕೊಲ್ಲೂರು, ಶಂಕರನಾರಾಯಣ, ಕಿರಿಮಂಜೇಶ್ವರ, ಕಾಸರಗೋಡು, ಬಗ್ವಾಡಿ, ಧರ್ಮಸ್ಥಳ, ಕುಂಭಕಾಶಿ, ಶಕಟಪುರ, ಮೂಲ್ಕಿ , ಬಪ್ಪನಾಡು, ಮಂಗಳೂರು ಕದ್ರಿ, ಕಾಸರಗೋಡು ಸಹಿತ ಹಲವು ದೇವಸ್ಥಾನಳಿಗೆ ಪುಷ್ಪರಥ, ಬ್ರಹ್ಮರಥ, ಇಂದ್ರರಥ, ಚಂದ್ರರಥ, ಚಿನ್ನದರಥ, ಬೆಳ್ಳಿರಥಗಳನ್ನು ನಿರ್ಮಿಸಿದ್ದಾರೆ.
ಜೊತೆಗೆ ಕೇರಳ, ತಮಿಳುನಾಡು, ಆಂದ್ರ, ಮಹಾರಾಷ್ಟ್ರ ಸಹಿತ ಹಲವು ರಾಜ್ಯಗಳ ದೇವಸ್ಥಾನಗಳಿಗೂ ರಥಗಳನ್ನು ನಿರ್ಮಿಸಿಕೊಟ್ಟ ಶಿಲ್ಪಿ ಇವರು. ಜಕಣಾಚಾರಿ ಪ್ರಶಸ್ತಿ, ರಾಜ್ಯ ಪ್ರಶಸ್ತಿ, ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಶಿಲ್ಪಗುರು ಪ್ರಶಸ್ತಿ ಸಹಿತ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ.