ಉಡುಪಿ: ತೌಕ್ತೆ ಚಂಡಮಾರುತದ ಹೊಡೆತಕ್ಕೆ ಮೀನುಗಾರ ಕುಟುಂಬಗಳು ತತ್ತರ
ಉಡುಪಿ, ಮೇ 16: ಕರಾವಳಿಯಲ್ಲಿ ತೌಕ್ತೆ ಚಂಡಮಾರುತದಿಂದ ಜನ ಜೀವನವನ್ನೇ ತಿರುವು-ಮುರುವು ಮಾಡಿದೆ. ಉಡುಪಿ ಜಿಲ್ಲೆಯ ಮರವಂತೆ ಪ್ರದೇಶದಲ್ಲಿ 500ಕ್ಕೂ ಹೆಚ್ಚು ಮೀನುಗಾರರು ಜೀವ ಕೈಯಲ್ಲಿ ಹಿಡಿದು ಜೀವನ ಸಾಗಿಸುವಂತಾ ದುಸ್ಥಿತಿಗೆ ತಲುಪಿದ್ದಾರೆ.
Recommended Video
ಮರವಂತೆ ಕಡಲ ಕಿನಾರೆಯ ಸಮೀಪದ ಸಂಪರ್ಕ ರಸ್ತೆ ಸಮುದ್ರದ ಪಾಲಾಗಿದೆ. ಸಾವಿರಾರು ತೆಂಗಿನ ಮರಗಳು ಧರೆಗುರುಳಿದ್ದು, ಮೀನುಗಾರಿಕೆ ದೋಣಿಗಳು ಸಮುದ್ರ ಸೇರಿವೆ. ಯಾವ ಸಂದರ್ಭದಲ್ಲಿ ಸಮುದ್ರದ ನೀರು ಮನೆಗಳಿಗೆ ನುಗ್ಗುತ್ತದೆಯೋ ಏನೋ ಎಂಬ ಆತಂಕದಲ್ಲಿ ಸಮಯ ಕಳೆಯುವಂತಾಗಿದೆ.
ಭಟ್ಕಳದಲ್ಲಿ ತೌಕ್ತೆ ಅಬ್ಬರ; ವಿದ್ಯುತ್ ಕಂಬ ನೆಲಕ್ಕೆ, ರಸ್ತೆ ಸಮುದ್ರಪಾಲು
ಸಮುದ್ರದ ರಕ್ಕಸ ಅಲೆಗಳು ಮನೆಗಳಿಗೆ ಅಪ್ಪಳಿಸುವ ಭೀತಿಯಲ್ಲಿ ಬಡ ಮೀನುಗಾರರು ತಮ್ಮ ದುಡಿಮೆಯ ದೇವರಂತೆ ಇರುವ ದೋಣಿಗೆಳಲ್ಲೇ ಮನೆಗಳಿಗೆ ಅಡ್ಡಲಾಗಿ ನಿಲ್ಲಿಸುತ್ತಿದ್ದಾರೆ. ಈ ಭಾಗದ ಮನೆಗಳಿಗೆ ಉಪ್ಪು ನೀರಿನ ಸಿಂಪಡಣೆ ಆಗುತ್ತಿದ್ದು, ಮನೆಗಳಲ್ಲಿ ಇರಲಾಗದಂತಾ ಸ್ಥಿತಿ ನಿರ್ಮಾಣವಾಗಿದೆ.
ಮೀನುಗಾರರಿಗೆ ಆಸರೆ ಕೊಡುವವರು ಯಾರು?
"ತೌಕ್ತೆ ಚಂಡಮಾರುತದಿಂದ ಜನಜೀವನ ಬೀದಿಗೆ ಬರುವಂತಾ ಸ್ಥಿತಿ ನಿರ್ಮಾಣವಾಗಿದ್ದರೂ ಕೂಡಾ ನಮ್ಮ ರಕ್ಷಣೆಗೆ ಇದುವರೆಗೂ ಯಾರೂ ಬಂದಿಲ್ಲ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎರಡು ವಾರದ ಹಿಂದೆ ಅಧಿಕಾರಿಗಳು ಭೇಟಿ ನೀಡಿ, ವಿಡಿಯೋ ಮಾಡಿಕೊಂಡು ಹೋಗಿದ್ದರು. ಅಲ್ಲಿಂದ ಇಲ್ಲಿಯವರೆಗೂ ಅಧಿಕಾರಿಗಳಿಂದ ಯಾವುದೇ ಸ್ಪಷ್ಟ ಭರವಸೆ ನೀಡಿಲ್ಲ. ಸಂಪರ್ಕ ರಸ್ತೆ ನೀರು ಪಾಲಾದ ಮೇಲೆ ಎರಡು ಲೋಡ್ ಕಲ್ಲು ತಂದು ಹಾಕಿದ್ದಾರೆ. ಇದೇ ಕೆಲಸವನ್ನು ಮೂರು ದಿನದ ಹಿಂದೆ ಮಾಡಿದ್ದರೆ, ರಸ್ತೆಯಾದರೂ ಉಳಿತಿತ್ತು. ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಈಗಲಾದ್ರೂ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಲಿ ಎನ್ನುವುದು ಸ್ಥಳೀಯ ಮೀನುಗಾರ ಕುಟುಂಬದವರು ಆಗ್ರಹವಾಗಿದೆ.
ಕಡಲಕೊರೆತ ತಡೆಗೆ ಮೀನುಗಾರರ ಪರಿಶ್ರಮ:
ಸಮುದ್ರ ಅಲೆಯ ರಭಸಕ್ಕೆ ಮೀನುಗಾರರ ಕುಟುಂಬ ಸದಸ್ಯರು ಕಡಲ ಕೊರೆತ ತಡೆಗೆ ಮುಂದಾಗಿದ್ದಾರೆ. ಮರಳಿನ ಚೀಲವನ್ನು ಜೋಡಿಸಿಡುವ ಕಾರ್ಯದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೈ ಜೋಡಿಸಿದ್ದಾರೆ. ಸ್ಥಳೀಯ ಮೀನುಗಾರರ ಮುಖ್ಯಸ್ಥರ ನೇತೃತ್ವದಲ್ಲಿ ಈ ಕಾರ್ಯವನ್ನು ನಡೆಸಲಾಗುತ್ತಿದೆ. ಬಂಡೆ ಕಲ್ಲುಗಳಿಂದ ಮಾತ್ರ ಸಮುದ್ರ ಕೊರೆತವನ್ನು ತಡೆಯುವುದಕ್ಕೆ ಸಾಧ್ಯವಾಗಿದ್ದು, ನಮಗೆ ತುರ್ತಾಗಿ ದೊಡ್ಡ ಬಂಡೆ ಕಲ್ಲುಗಳು ಬೇಕಾಗಿವೆ. ಸಚಿವರು ಮತ್ತು ಶಾಸಕರು ತಕ್ಷಣವೇ ಬಂಡೆ ಕಲ್ಲುಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯ ಮೀನುಗಾರರು ಒತ್ತಾಯಿಸಿದ್ದಾರೆ.