ಶ್ರೀ ಕೃಷ್ಣಮಠದಲ್ಲಿ ಪರ್ಯಾಯ ಶ್ರೀಗಳಿಂದ ಭಕ್ತರಿಗೆ ತಪ್ತಮುದ್ರಾಧಾರಣೆ
ಉಡುಪಿ, ನವೆಂಬರ್ 26: ಉಡುಪಿಯ ಕೃಷ್ಣಮಠದಲ್ಲಿ ಚಾತುರ್ಮಾಸ್ಯ ಸಮಾಪ್ತಿ ದಿನವಾದ ದೇವಪ್ರಬೋಧಿನಿ ಏಕಾದಶಿ ದಿನದಂದು ತಪ್ತ ಮುದ್ರಾಧಾರಣೆ ನಡೆಯಿತು.
ಮಹಾವಿಷ್ಣುವಿನ ಚಿಹ್ನೆಗಳಾದ ಶಂಖ, ಚಕ್ರವನ್ನು ಪಂಚಗವ್ಯ ಪ್ರಾಶನ ಪೂರ್ವಕವಾಗಿ ಸುದರ್ಶನದ ಹೋಮದ ಕೆಂಡದಲ್ಲಿ ಕಾಯಿಸಿ ಶರೀರದಲ್ಲಿ ಧಾರಣೆ ಮಾಡಿಕೊಳ್ಳುವ ಸಂಪ್ರದಾಯ ಅಷ್ಟಮಠಗಳಲ್ಲಿದೆ. ಅದರಂತೆ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಠದಲ್ಲಿ ತಪ್ತಮುದ್ರಾಧಾರಣೆ ನಡೆಯಿತು.
ಉಡುಪಿ ಕೃಷ್ಣಮಠ ಭಕ್ತರಿಗೆ ಮುಕ್ತ: ದರ್ಶನ ಪಡೆದ ನೂರಾರು ಭಕ್ತರು
ಪರ್ಯಾಯ ಮಠದ ಪುರೋಹಿತರಾದ ಮುದರಂಗಡಿ ಲಕ್ಷ್ಮೀಶ ಆಚಾರ್ಯರು ಸುದರ್ಶನ ಹೋಮದ ಪೂರ್ಣಾಹುತಿಯನ್ನು ನಡೆಸಿದರು. ಪೇಜಾವರ ಶ್ರೀಪಾದರು ತಾವೇ ಮುದ್ರಾಧಾರಣೆ ಮಾಡಿಕೊಂಡು ಪರ್ಯಾಯ ಶ್ರೀಪಾದರಿಗೆ ಮುದ್ರಾಧಾರಣೆ ಮಾಡಿದರು. ನಂತರ ಪರ್ಯಾಯ ಅದಮಾರು ಈಶಪ್ರಿಯತೀರ್ಥ ಶ್ರೀಪಾದರು ಭಕ್ತಾದಿಗಳಿಗೆ ತಪ್ತ ಮುದ್ರಾಧಾರಣೆ ನಡೆಸಿದರು.
ಮಳೆಗಾಲದಲ್ಲಿ ಸೊಳ್ಳೆ, ಕ್ರಿಮಿ ಕೀಟಗಳಿಂದ ಎದುರಾಗುವ ರೋಗ ರುಜಿನಗಳನ್ನು ಎದುರಿಸಲು ಬೇಕಾದ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೂ ತಪ್ತ ಮುದ್ರಾಧಾರಣೆ ಪೂರಕ ಎಂಬ ನಂಬಿಕೆ ಭಕ್ತರದಲ್ಲಿದೆ.