ತಪ್ತ ಮುದ್ರಾಧಾರಣೆ: ಶೀರೂರು ಮಠದ ಭಕ್ತರಲ್ಲಿ ಮಡುಗಟ್ಟಿದ ದುಃಖ
ಉಡುಪಿ, ಜುಲೈ. 23: ಇಂದು ಸೋಮವಾರ ತಪ್ತ ಮುದ್ರಾಧಾರಣೆ. ಇತಿಹಾಸದಲ್ಲೇ ಮೊದಲ ಏಕಾದಶಿಗೆ ಅಷ್ಟಮಠಗಳಿಗೆ ಸಂಭ್ರಮ. ಎಲ್ಲಾ ಕಡೆಗಳಿಂದ ಭಕ್ತರು ಮುದ್ರಧಾರಣೆಗೆ ಆಗಮಿಸುತ್ತಾರೆ. ಪ್ರತೀ ಬಾರಿ ಉಡುಪಿಯಲ್ಲಿ ಮುದ್ರಾಧಾರಣೆ ಅದ್ದೂರಿಯಾಗಿ ನಡೆಯುತ್ತದೆ.
ಆದರೆ ಶೀರೂರು ಶ್ರೀ ಅಸಹಜ ಸಾವಿನ ಹಿನ್ನಲೆಯಲ್ಲಿ ಶೀರೂರು ಮಠದಲ್ಲಿ ಮಾತ್ರ ಮುದ್ರಾಧಾರಣೆ ಸ್ಥಗಿತಗೊಳಿಸಲಾಗಿದೆ. ವಿಷ್ಣುವಿನ ಆಯುಧಗಳಾದ ಶಂಖ ಹಾಗೂ ಚಕ್ರದ ಮುದ್ರೆಯನ್ನು ಯತಿಗಳು ಮುದ್ರಿಸುತ್ತಾರೆ. ಈ ತಪ್ತ ಮುದ್ರಾಧಾರಣೆಗೆ ಅತೀ ದೊಡ್ಡ ಮಹತ್ವ ಹಾಗೂ ಇತಿಹಾಸವಿದ್ದು, ಪೂರ್ತಿ ವಿವರ ಇಲ್ಲಿದೆ ನೋಡಿ...
ತಪ್ತಮುದ್ರಾಧಾರಣೆ ಇತಿಹಾಸ
ವೈಷ್ಣವರಿಗೆ ಆಷಾಡ ಶುಧ್ಧ ಏಕಾದಶಿ(ಪ್ರಥಮ ಏಕಾದಶಿ)ಯಂದು ನಡೆಯುವ ಮುದ್ರಾಧಾರಣೆ ಪರಮ ಪವಿತ್ರವಾದದ್ದು. ಈ ಸಮಯದಲ್ಲಿ ಸೂರ್ಯ ದಕ್ಷಿಣಕ್ಕೆ ವಾಲುತ್ತಾನೆ. ಅಂದರೆ ಭಗವಂತ ಮಲಗಿದಾಗ ನಾವು ಮಲಗಿ ಆತನನ್ನು ಮರೆಯಬಾರದು. ಮ
ಆತನ ಚಿನ್ಹೆಯಾದ ಶಂಖ ಮತ್ತು ಚಕ್ರಗಳು ಅಚ್ಚೊತ್ತಿರಬೇಕು ಎಂಬ ಭಾವನೆಯಿಂದಲೆ ಶಯನೈಕಾದಶಿಯಂದು ತಪ್ತಮುದ್ರಾಧಾರಣೆ ಸಂಸ್ಕಾರ ಬೆಳೆದು ಬಂದಿದೆ. ದೇಹ ಸಂಸ್ಕಾರ ನಾನಾ ಬಗೆ. ಜಾತಕರ್ಮ(ಜನನ), ಉಪನಯನ, ಸ್ನಾನಶೌಚಾದಿ, ಶುಚಿಭೋಜನಾದಿ, ಉಪವಾಸಾದಿ, ಸ್ವಯಂ ಶ್ರೀಹರಿಯ ಆಯುಧಗಳ ಮುದ್ರಾಧಾರಣ.
ಇದರಿಂದ ಸಂಸ್ಕಾರಗೊಂಡ ದೇಹ ಅಂತಃಸತ್ವವೆಂಬ ಶುಧ್ಧಿ ಪಡೆದು ಸಾಧನಕ್ಕೆ ಹದಗೊಳ್ಳುತ್ತದೆ.
ಸಣ್ಣ ಹಿನ್ನೆಲೆ
ಹಿಂದೊಮ್ಮೆ ಇಂದ್ರಾದಿ ದೇವತೆಗಳೆಲ್ಲ ವೃತ್ರಾಸುರನಿಂದ ಸೋತಾಗ ಮಹಾವಿಷ್ಣುವಿನ ಬಳಿ ಹೋಗಿ ಪ್ರಾರ್ಥಿಸಿದಾಗ "ಎಲೈ ದೇವತೆಗಳೆ, ನೀವೆಲ್ಲ ನನ್ನ ಶಂಖ ಚಕ್ರಾದಿ ಲಾಂಛನಗಳನ್ನು ಧರಿಸಿ ದೈತ್ಯರೊಡನೆ ಯುಧ್ಧ ಮಾಡಿ ನಿಮಗೆ ವಿಜಯ ಲಭಿಸುತ್ತದೆ" ಎಂದು ಶ್ರೀಹರಿಯು ಅಪ್ಪಣೆಯಿತ್ತನು. ಇಂದ್ರಾದಿಗಳು ಇದರಿಂದ ಕೃತಾರ್ಥರಾದರು.
ಅಂದಿನಿಂದ ಕಾಮ, ಕ್ರೋಧದಂತಹ ವೈರಿಗಳ ಜಯಕ್ಕೆ ಮುದ್ರಾಧಾರಣೆ ಅಗತ್ಯ ಎಂಬ ನಿಯಮ ವೈಷ್ಣವರಿಗೆ ಶಾಶ್ವತವಾಯಿತು. ತಪ್ತಮುದ್ರಾಧಾರಣೆಯ ಮಹತ್ವವನ್ನು ಋಗ್, ಯಜುರ್, ಸಾಮ, ಅಥರ್ವ ವೇದಗಳಲ್ಲೂ, ಪದ್ಮ ಮೊದಲಾದ ಪುರಾಣಗಳಲ್ಲೂ, ಮಹಾಭಾರತಾದಿ ಇತಿಹಾಸದಲ್ಲೂ ವರ್ಣಿತವಾಗಿದೆ.
ಶ್ರೀಮನ್ ಮಧ್ವಾಚಾರ್ಯರ ಸುದರ್ಶನದ್ವಯ (ತಪ್ತ ಮುದ್ರೆ ಮತ್ತು ಶಾಸ್ತ್ರ) ತಮ್ಮ ಶಿಷ್ಯರಿಗೆ ಅನುಗ್ರಹಿಸಿದ ವಿವರ ಸುಮದ್ವವಿಜಯದಲ್ಲಿ ಉಕ್ತವಾಗಿದೆ. ಅಂತೆಯೇ ಶ್ರೀವಾದಿರಾಜರ ಚಕ್ರಸ್ತುತಿ, ಶ್ರೀಕೃಷ್ಣಾಚಾರ್ಯರ ಸ್ಮೃತಿ ಮುಕ್ತಾವಳಿ ಹಾಗು ತಪ್ತ ಚಕ್ರ ಭೂಷಣಗಳಲ್ಲಿ ವಿವರವಾಗಿ ತಿಳಿಸಲಾಗಿದೆ.
ಆಷಾಢ ಪ್ರಥಮ ಏಕಾದಶಿ: ಉಪವಾಸ ಏಕೆ? ಉತ್ತರಾದಿಮಠದಲ್ಲಿ ಏನೆಲ್ಲ ಕಾರ್ಯಕ್ರಮ?
ತಪ್ತಮುದ್ರಾಧಾರಣ ಮಾಡುವ ವಿಧಾನ
ಆಚಾರ್ಯ ಮಧ್ವರು ಹಾಕಿ ಕೊಟ್ಟ ಸತ್ಪರಂಪರೆಯಂತೆ, ಚಾತುರ್ಮಾಸ ಪ್ರಾರಂಭದ ಏಕಾದಶಿಯಂದು ಮಠದ ಪೀಠಾಧಿಪತಿಗಳಿಂದಲೇ ತಪ್ತಮುದ್ರಾಧಾರಣೆಯನ್ನು ಸ್ವೀಕರಿಸಬೇಕು. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಸುದರ್ಶನ ಹೋಮವನ್ನು ಆಚರಿಸಿ ಶಾಸ್ತ್ರೋಕ್ತ ಕ್ರಮದಲ್ಲಿ ಚಕ್ರಾದಿಗಳನ್ನು ಪೂಜಿಸಿ, ಅಭಿಮಾನಿ ದೇವತೆಗಳನ್ನು ಸ್ಮರಿಸಿ, ತಮೋರಜೋಗುಣಗಳನ್ನು ನಾಶಪಡಿಸುವಂತೆ ಪ್ರಾರ್ಥಿಸಿ ಏಕಾಗ್ರಚಿತ್ತದಿಂದ ಗುರುಗಳಿಂದ ತಪ್ತಮುದ್ರಾಧಾರಣವನ್ನು ಪಡೆದುಕೊಳ್ಳಬೇಕು.
ವೈಷ್ಣವತ್ವಕ್ಕೆ ದ್ಯೋತಕವಾದ ಅತ್ಯಂತ ಪ್ರಮುಖ ಬಾಹ್ಯಲಕ್ಷಣವೆಂಬುದು ತಪ್ತಮುದ್ರಾಧಾರಣದ ಹಿರಿಮೆ. ಇವರು ವೈಷ್ಣವರೆಂದು ಇತರರು ಗುರುತಿಸುವುದಕ್ಕಿಂತಲೂ ಮುಖ್ಯವಾಗಿ ತಾನು ವಿಷ್ಣು ಭಕ್ತನೆಂದು ಸ್ವಂತಕ್ಕೆ ಮರೆಯದಿರಲೆಂದು ಹುಟ್ಟಿಕೊಂಡ ಈ ಪರಂಪರೆ ನಿಜಕ್ಕೂ ಅರ್ಥಪೂರ್ಣ.
ಮುದ್ರಾಧಾರಣೆ ಸ್ಥಗಿತ
ಇಂದು ತಪ್ತ ಮುದ್ರಾಧಾರಣೆ. ಪ್ರತೀ ಬಾರಿ ಅಷ್ಟಮಠಗಳ ಯತಿಗಳು ನೆರವೇರಿಸುವ ಮುದ್ರಾಧಾರಣೆಯಲ್ಲಿ ಈ ಬಾರಿ ಶೀರೂರು ಶ್ರೀಗಳು ಇಲ್ಲದಿರುವುದು ಭಕ್ತರಲ್ಲಿ ಬೇಸರ ಮೂಡಿಸಿದೆ. ಸಾಮಾನ್ಯರಂತೆ ಬೆರೆತು ಎಲ್ಲರಿಗೂ ಮುದ್ರಾಧಾರಣೆ ಮಾಡುತ್ತಿದ್ದರು ಶೀರೂರು.
ಇತಿಹಾಸ ಮಹತ್ವ ಇರುವ ಮುದ್ರಾಧಾರಣೆಯನ್ನು ಅಷ್ಟಮಠಗಳ ಯತಿಗಳು ತಮ್ಮ ತಮ್ಮ ಶಾಖಾ ಮಠದಲ್ಲಿ ನೆರವೇರಿಸುತ್ತಾರೆ. ಬೆಳಗ್ಗೆಯಿಂದದ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಆದರೆ ಶಿರೂರು ಶ್ರೀ ಅಸಹಜ ಸಾವಿನಿಂದ ಶಿರೂರು ಮಠದಲ್ಲಿ ಮುದ್ರಾಧಾರಣೆ ಸ್ಥಗಿತಗೊಂಡಿದೆ.
ಸ್ಮಶಾನ ಮೌನ ಅವರಿಸಿರುವ ಶಿರೂರು ಮಠದಲ್ಲಿ ಭಕ್ತರು ಸಂತಾಪ ಸೂಚಿಸಿದ್ದಾರೆ. ಶಿರೂರು ಮಠದ ಭಕ್ತರಲ್ಲಿ ದುಃಖದ ಛಾಯೆ ಮಡುಗಟ್ಟಿದೆ. ಶಿರೂರು ಮಠದ ಮುದ್ರಾಧಾರಣೆಯಿಂದ ಭಕ್ತ ವೃಂದ ವಂಚಿತಗೊಂಡಿದೆ. ಪ್ರತಿ ವರ್ಷ ತುಂಬಿರುತ್ತಿದ್ದ ಭಕ್ತಸಾಗರ ಈ ಬಾರಿ ನೀರಿಲ್ಲದ ಸಮುದ್ರದಂತೆ ಇದೆ.
ಪ್ರತೀ ಬಾರಿ ಭಕ್ತರಿಗೆ, ವಿದ್ಯಾರ್ಥಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸುತ್ತಿದ್ದ ಸ್ವಾಮೀಜಿ ಈ ಸಲ ವೃಂದಾವನ ಸೇರಿದ್ದಾರೆ.