ಸುಝ್ಲಾನ್ ಕಂಪನಿ ಲಾಕೌಟ್, ರಾತ್ರೋ ರಾತ್ರಿ ಬೀದಿಗೆ ಬಿದ್ದ ಕಾರ್ಮಿಕರು
ಉಡುಪಿ, ನವೆಂಬರ್ 14: ಬೃಹತ್ ಗಾಳಿಯಂತ್ರಗಳ ರೆಕ್ಕೆಗಳನ್ನು ತಯಾರಿಸುವ ಉಡುಪಿಯ ಸುಝ್ಲಾನ್ ಕಂಪನಿ ಬಂದ್ ಆಗಿದೆ. ಇದರಿಂದ ರಾತ್ರಿ ಬೆಳಗಾಗುವುದರೊಳಗೆ ಸುಝ್ಲಾನ್ ಕಂಪನಿಯಲ್ಲಿ ದುಡಿಯುತ್ತಿದ್ದ ನೂರಾರು ಕಾರ್ಮಿಕರು ಬೀದಿಪಾಲಾಗಿದ್ದಾರೆ.
ಉಡುಪಿ ಪಡುಬಿದ್ರೆಯ ನಂದಿಕೂರಿನಲ್ಲಿರುವ ಸುಝ್ಲಾನ್ ಕಂಪನಿಯ ಪ್ರಮುಖ ಗೇಟ್ ಗೆ ನಿನ್ನೆ ತಡ ರಾತ್ರಿಯೇ ಬೀಗ ಜಡಿದು ನೋಟಿಸ್ ಒಂದನ್ನು ಅಂಟಿಸಲಾಗಿದೆ. ಇಂದು ಮುಂಜಾನೆ ಯಥಾ ಪ್ರಕಾರ ಕೆಲಸಕ್ಕೆ ಬಂದ ಕಾರ್ಮಿಕರು ನೋಟಿಸ್ ನೋಡಿ ಆಘಾತಕ್ಕೆ ಒಳಗಾಗಿದ್ದಾರೆ.
ಬೀದಿಪಾಲಾದ 600ಕ್ಕೂ ಅಧಿಕ ಕಾರ್ಮಿಕರು
ಸುಝ್ಲಾನ್ ಕಂಪನಿಯ ಈ ಹಠಾತ್ ನಿರ್ದಾರದಿಂದ 600 ಕ್ಕೂ ಅಧಿಕ ಕಾರ್ಮಿಕರು ಈಗ ಅಕ್ಷರಶಃ ಬೀದಿ ಪಾಲಾಗಿದ್ದಾರೆ.
ರಾತ್ರೋ ರಾತ್ರಿ ಉದ್ಯೋಗ ನಷ್ಟ
ಈ ಕಂಪನಿಯಲ್ಲಿ ಹೆಚ್ಚಾಗಿ ಉತ್ತರ ಕರ್ನಾಟಕ ಸೇರಿದಂತೆ ಉತ್ತರ ಭಾರತದ ಕಾರ್ಮಿಕರು ದುಡಿಯುತ್ತಿದ್ದರು. ಕಂಪನಿ ಏಕಾಏಕಿ ಬಂದ್ ಆಗಿರುವುದರಿಂದ 326 ಖಾಯಂ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಾರ್ಮಿಕರು ಸೇರಿ 600 ಕ್ಕೂ ಅಧಿಕ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ಪ್ರತಿಭಟನೆ ಬೆನ್ನಿಗೆ ಈ ನಿರ್ಧಾರ
ಕಳೆದ ವಾರವಷ್ಟೇ ಕಂಪನಿಯ ನೂರಾರು ಗುತ್ತಿಗೆ ಕಾರ್ಮಿಕರು ಬಾಕಿ ಸಂಬಳ ಪಾವತಿಗೆ ಅಗ್ರಹಿಸಿ ಪ್ರತಿಭಟನೆ ನಡೆಸಿದ್ದರು. ಈ ನಡುವೆ ವಿವಿಧ ಸಂಘಟನೆಗಳ ಮಧ್ಯಸ್ಥಿಕೆಯಲ್ಲಿ ಕಾರ್ಮಿಕರ ಬೇಡಿಕೆಯನ್ನು ಕಂಪೆನಿ ಈಡೇರಿಸಿತ್ತು. ಆದರೆ ಇದೀಗ ಕಂಪನಿ ದಿಢೀರ್ ಲಾಕೌಟ್ ಮಾಡಿ ಕಾರ್ಮಿಕರಿಗೆ ಶಾಕ್ ನೀಡಿದೆ.
ನೂರಾರು ಕಾರ್ಮಿಕರಿಂದ ಮುಂದುವರಿದ ಪ್ರತಿಭಟನೆ
ಕಂಪೆನಿ ಬಂದ್ ಹಿನ್ನೆಲೆಯಿಂದ ಬೀದಿಗೆ ಬಿದ್ದ ನೂರಾರು ನೌಕರರು ಇಂದು ಕಂಪನಿಯ ಗೇಟ್ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ. ಸರಕಾರ ಮಧ್ಯ ಪ್ರವೇಶಿಸಿ ನ್ಯಾಯ ಒದಗಿಸಬೇಕೆಂದು ಕಾರ್ಮಿಕರು ಆಗ್ರಹಿಸಿದ್ದಾರೆ.