ಆದಿತ್ಯ ರಾವ್ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು ವಶಕ್ಕೆ
ಉಡುಪಿ, ಜನವರಿ 25: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸಿಕ್ಕಿಬಿದ್ದಿದ್ದ ಬಾಂಬರ್ ಆದಿತ್ಯ ರಾವ್ ನನ್ನು ಇವತ್ತು ಪೊಲೀಸರು ಬಿಗಿ ಭದ್ರತೆಯಲ್ಲಿ ಉಡುಪಿಗೆ ಕರೆತಂದರು. ಉಡುಪಿ, ಮಲ್ಪೆ ಮತ್ತು ಮಣಿಪಾಲದಲ್ಲಿ ಪೊಲೀಸರು ಆರೋಪಿಯನ್ನು ಕರೆದೊಯ್ದು ಸ್ಥಳ ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದರು.
ಉಡುಪಿಯ ಕರ್ನಾಟಕ ಬ್ಯಾಂಕ್ ನಲ್ಲಿ ಆದಿತ್ಯ ಲಾಕರ್ ನಲ್ಲಿ ಇರಿಸಿದ್ದ ಅನುಮಾನಾಸ್ಪದ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದು, ತನಿಖೆಗಾಗಿ ಎಫ್ಎಸ್ಎಲ್ ತಜ್ಞರಿಗೆ ಹಸ್ತಾಂತರಿಸಿ ತನಿಖೆ ಚುರುಕುಗೊಳಿಸಿದ್ದಾರೆ.
ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯರಾವ್ ಬೆಂಗಳೂರಲ್ಲಿ ಶರಣಾಗಿದ್ದು ಈ ಕಾರಣಕ್ಕಾಗಿ!
ಇಂದು ಬಿಗಿ ಭದ್ರತೆಯಲ್ಲಿ ಆರೋಪಿಯನ್ನು ಉಡುಪಿಗೆ ಕರೆತಂದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಉಡುಪಿಯ ಕುಂಜಿಬೆಟ್ಟು ಕರ್ನಾಟಕ ಬ್ಯಾಂಕ್ ನಲ್ಲಿ ಆದಿತ್ಯ ಅಕೌಂಟ್ ಹೊಂದಿದ್ದ. ಒಂದೂವರೆ ವರ್ಷದ ಹಿಂದೆ ಅದಿತ್ಯ ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಅನುಮಾನಾಸ್ಪದ ವಸ್ತುಗಳು ಪೊಲೀಸರ ಆಸಕ್ತಿ ಕೆರಳುವಂತೆ ಮಾಡಿದವು.
ಲಾಕರ್ ನ ಕೀಗಳು ಇಲ್ಲದಿದ್ದ ಕಾರಣ ಲಾಕರ್ ಒಡೆದು ಪೊಲೀಸರು ಆದಿತ್ಯ ಲಾಕರ್ ನಲ್ಲಿ ಇಟ್ಟಿದ್ದ ನಿಗೂಢ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.ಹನ್ನೊಂದು ಗಂಟೆಯಿಂದ ಸುಮಾರು ಒಂದೂವರೆ ಗಂಟೆ ಬ್ಯಾಂಕ್ ನಲ್ಲಿ ಪರಿಶೀಲನೆ ನಡೆಸಿದ ಪೊಲೀಸರು ದಾಖಲೆಗಳನ್ನು ಜಾಲಾಡಿದರು.
ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಆದಿತ್ಯ ರಾವ್ ನನ್ನು ಇಲ್ಲಿಗೆ ಕರೆ ತಂದಿತ್ತು. ಬ್ಯಾಂಕ್ ಲಾಕರ್ ನಲ್ಲಿದ್ದ ಅನುಮಾನಾಸ್ಪದ ವಸ್ತುಗಳು ಏನು? ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾವಸ್ತುಗಳನ್ನು ಆರೋಪಿ ಇಲ್ಲಿ ಇರಿಸಿದ್ದನೇ? ಒಂದೂವರೆ ವರ್ಷದ ಹಿಂದೆಯೇ ಆತ ಬಾಂಬ್ ತಯಾರಿಗೆ ಸ್ಕೆಚ್ ಹಾಕುತ್ತಿದ್ದನೇ? ಮುಂತಾದ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇನ್ನು ಆದಿತ್ಯ ರಾವ್ ಆತ್ಮಹತ್ಯೆಗೂ ತಯಾರಿ ಮಾಡಿಕೊಂಡಿದ್ದ ಎಂಬ ಸಂಗತಿಯೂ ಬಯಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಮಂಗಳೂರಿನ ಚಿನ್ನದ ಅಂಗಡಿಯಿಂದ ಸೈನೈಡ್ ನ್ನೂ ಸಂಗ್ರಹಿಸಿದ್ದ.
ಬ್ಯಾಂಕ್ ಲಾಕರ್ ನಲ್ಲಿ ಆರೋಪಿ ಸೈನೈಡ್ ಇಟ್ಟಿರುವ ಸಾಧ್ಯತೆಯ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಬಾಂಬರ್ ಮಾಡಿರೋ ಅವಾಂತರಗಳ ಸರಪಳಿ ಒಂದೊಂದಾಗಿಯೇ ಬಿಚ್ಚಿಕೊಳ್ಳುತ್ತಿದ್ದು ಪೊಲೀಸರಿಗೂ ತಲೆನೋವಾಗಿ ಪರಿಣಮಿಸಿದೆ.