ಉಡುಪಿಯಲ್ಲಿ ಕೊರೊನಾ ಭೀತಿ: ಒಂದೇ ಕುಟುಂಬದ ಮೂವರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ
ಉಡುಪಿ, ಫೆಬ್ರವರಿ 7: ಚೀನಾದಿಂದ ಇತ್ತೀಚೆಗೆ ಹಿಂದಿರುಗಿದ್ದ ಉಡುಪಿಯ ಒಂದೇ ಕುಟುಂಬದ ಮೂವರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ಕೊರೊನಾ ವೈರಸ್ ಶಂಕೆಯ ಕಾರಣದಿಂದ ಜಿಲ್ಲಾಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮಗು ಸೇರಿದಂತೆ ಕುಟುಂಬದ ಮೂವರು 15 ದಿನಗಳ ಹಿಂದೆ ಚೀನಾದಿಂದ ಉಡುಪಿಗೆ ಮರಳಿದ್ದರು. ಅವರಲ್ಲಿ ಗಂಟಲು ನೋವು, ಶೀತದ ಲಕ್ಷಣಗಳು ಕಾಣಿಸಿಕೊಂಡಿವೆ. ಚೀನಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿರುವುದರಿಂದ ಅಲ್ಲಿಂದ ಮರಳುತ್ತಿರುವ ಪ್ರತಿಯೊಬ್ಬರನ್ನೂ ಕೂಲಂಕಷ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗುತ್ತಿದೆ.
ಕೊರೊನಾ ಸುಳಿಯಲ್ಲಿ 70 ಭಾರತೀಯ ವಿದ್ಯಾರ್ಥಿಗಳು, ಇದು ಕಥೆಯಲ್ಲ ಸತ್ಯ!
ಈ ಮೂವರು ಎರಡು ವಾರಗಳ ಹಿಂದೆಯೇ ಚೀನಾದಿಂದ ವಾಪಸಾಗಿದ್ದು, ಇತ್ತೀಚೆಗೆ ಗಂಟಲು ನೋವು ಮತ್ತು ಶೀತದ ಸಮಸ್ಯೆಗಳು ಕಾಣಿಸಿಕೊಂಡಿವೆ. ಹೀಗಾಗಿ ವೈದ್ಯರು ಮುಂಜಾಗ್ರತೆಯ ಕ್ರಮವಾಗಿ ಅವರನ್ನು ಪ್ರತ್ಯೇಕ ವಾರ್ಡ್ಗಳಲ್ಲಿ ಇರಿಸಿ ಚಿಕಿತ್ಸೆ ನೀಡುತ್ತಿದ್ದಾರೆ.
ರೋಗಿಗಳ ಕಫ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದು ಕೊರೊನಾ ವೈರಸ್ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣ ದೃಢಪಟ್ಟಿಲ್ಲ. ಆದರೂ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತುಮಕೂರು ಯುವಕನಿಗೆ ಕೊರೊನಾ ಶಂಕೆ: ಬಂತು ವೈದ್ಯಕೀಯ ವರದಿ
ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮಾಹಿತಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.