ಉಡುಪಿ ಜಿಲ್ಲೆಯಲ್ಲಿ ಆರಂಭವಾಗದ ಎರಡು ಶಾಲೆಗಳು!
ಬೆಂಗಳೂರು, ಜ. 01: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಸುದೀರ್ಘ ಅವಧಿಯ ಬಳಿಕ ರಾಜ್ಯದಲ್ಲಿ ಶಾಲೆಗಳು ಪುನಾರಂಭವಾಗಿವೆ. ಆದರೆ ಉಡುಪಿ ಜಿಲ್ಲೆಯ ಎರಡು ಶಾಲೆಗಳು ಸೋಮವಾರ, ಜನವರಿ 4 ರಿಂದ ಆರಂಭವಾಗಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರು ಉಡುಪಿ ಜಿಲ್ಲೆಯಲ್ಲಿ ಒಬ್ಬ ಶಿಕ್ಷಕ ಮತ್ತು ಒಬ್ಬ ಸಹಾಯಕನಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ಶಾಲೆಗಳು ಇಂದು ಆರಂಭವಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ತಾಲೂಕು ಸೇರಿದಂತೆ ಹಲವೆಡೆ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುರೇಶ್ ಕುಮಾರ್ ಅವರು ಮಾತನಾಡಿದ್ದಾರೆ. ಹೆಬ್ರಿಯ ಕೆಪಿಎಸ್ ಶಾಲೆಯ ಅಟೆಂಟರ್ ಮತ್ತು ಬ್ರಹ್ಮಾವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಗೆ ಕೊರೋನಾ ಪಾಸಿಟೀವ್ ಬಂದಿದ್ದು, ಈ ಶಾಲೆಗಳು ಆರಂಭವಾಗಿಲ್ಲ. ಸೋಮವಾರದಿಂದ ಈ ಶಾಲೆಗಳು ಆರಂಭವಾಗಲಿವೆ ಎಂದು ಹೇಳಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಧಿಕಾರಿಗಳ ತಂಡಗಳನ್ನು ರಚಿಸಿದ್ದು, ಅವರು ಶಾಲಾ ಆರಂಭದ ಕುರಿತು ಗಮನ ಹರಿಸುತ್ತಾರೆ ಎಂದು ಸುರೇಶ್ ಕುಮಾರ್ ವಿವರಿಸಿದ್ದಾರೆ.
ಉಳಿದಂತೆ ಇಂದು ಶಾಲಾ ಆರಂಭದ ಮೊದಲ ದಿನವಾದ್ದರಿಂದ, ಇಡೀ ರಾಜ್ಯಾದ್ಯಂತ ಪೋಷಕರು ತಮ್ಮ ಮಕ್ಕಳನ್ನು ಶಾಲೆಯೊಳಗೆ ಕಳಿಸಿ, ಶಾಲೆಯ ಸಿದ್ಧತೆಗಳನ್ನು ಗಮನಿಸಿ, ಶಿಕ್ಷಕರೊಂದಿಗೆ ಮಾತನಾಡುತ್ತಿರುವುದು ಕಂಡು ಬಂದಿತು ಎಂದು ಸುರೇಶ್ ಕುಮಾರ್ ಹೇಳಿದ್ದಾರೆ.
Recommended Video