ಟಿಕೆಟ್ ತಪ್ಪಿದ್ದಕ್ಕೆ ಮತ್ತೊಬ್ಬ 'ಕೈ' ಕಾರ್ಯಕರ್ತ ಆತ್ಮಹತ್ಯೆಗೆ ಯತ್ನ
ಉಡುಪಿ, ಏಪ್ರಿಲ್ 18 : ರಾಷ್ಟ್ರೀಯ ಪಕ್ಷಗಳು ಕರ್ನಾಟಕ ವಿಧಾನಸಭಾ ಚುನಾವಣೆ 2018 ರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬೆನ್ನಲೇ, ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರು ಆತ್ಮಹತ್ಯೆಗೆ ಯತ್ನಿಸುವುದು, ಆನಂತರ ಅವರನ್ನು ಸಮಾಧಾನಪಡಿಸುವುದು ಒಂದೆರೆಡು ದಿನಗಳಿಂದ ಸಾಮಾನ್ಯವಾಗಿ ಹೋಗಿದೆ. ಸದ್ಯಕ್ಕೆ ಎಲ್ಲಿಯೂ ಅನಾಹುತ ಸಂಭವಿಸಿಲ್ಲ.
'ಕೈ' ಟಿಕೇಟ್ ಕೈತಪ್ಪಿದ್ದಕ್ಕೆ ಶಾಸಕ ನಾಗರಾಜ ಅಭಿಮಾನಿ ಆತ್ಮಹತ್ಯೆಗೆ ಯತ್ನ
ನಮ್ಮ ನಾಯಕನಿಗೆ ಟಿಕೆಟ್ ಕೊಡದಿದ್ದರೆ ವಿಷ ಕುಡಿಯುತ್ತೇವೆ, ನೇಣು ಹಾಕಿಕೊಳ್ಳುತ್ತೇವೆ, ಸೀಮೆ ಎಣ್ಣೆ ಸುರಿದುಕೊಳ್ಳುತ್ತೇವೆ ಎಂದು ಹೇಳಿ ಆತ್ಮಹತ್ಯೆಗೆ ಯತ್ನಿಸುತ್ತಿರುವವರ ಸಂಖ್ಯೆ ಹೆಚ್ಚುತ್ತಲಿದ್ದು, ಮತ್ತೊಂದೆಡೆ ಪಕ್ಷದ ಧ್ವಜ ಸುಟ್ಟು ಹಾಕುವುದು, ಬೈಕ್ ಗಳಿಗೆ ಬೆಂಕಿ ಇಡುವುದು, ಬಂಡಾಯ ಏಳುವುದು, ಪ್ರತಿಭಟನೆ ಮಾಡುವುದು ನಡೆಯುತ್ತಲೇ ಇವೆ.
ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್
ಇದೀಗ ಇದೇ ರೀತಿಯ ಪ್ರಕರಣ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಡೆದಿದೆ. ಮುನಿಯಾಲು ಉದಯಕುಮಾರ್ ಶೆಟ್ಟಿಗೆ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಮಂಗಳವಾರ ಉಡುಪಿ ಜಿಲ್ಲೆಯ ಕಾರ್ಕಳದ ಹೆಬ್ರಿಯಲ್ಲಿ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.
ಹೆಬ್ರಿ ಕಾಂಗ್ರೆಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಉದಯಕುಮಾರ್ ಶೆಟ್ಡಿ ಬೆಂಬಲಿಗರು ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಸಂದರ್ಭದಲ್ಲಿ ಆಸಿಫ್ ಎಂಬ ಕಾರ್ಯಕರ್ತ ಆತ್ಮಹತ್ಯೆಗೆ ಯತ್ನಿಸಿದ. ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಕಾರ್ಯಕರ್ತನನ್ನು ಸ್ಥಳದಲ್ಲಿದ್ದ ಜನರು ಪಾರು ಮಾಡಿದ್ದಾರೆ.
ಸೋಮವಾರ ಸಹ ಕಾರ್ಕಳದಲ್ಲಿ ಉದಯ ಕುಮಾರ್ ಶೆಟ್ಟಿ ಬೆಂಬಲಿಗರಿಂದ ಪ್ರತಿಭಟನೆ ವ್ಯಕ್ತವಾಗಿದ್ದು, ಪ್ರತಿಭಟನೆ ಸ್ಥಳಕ್ಕೆ ಬಂದ ಉದಯಕುಮಾರ್ ಶೆಟ್ಟಿ ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಕಾರ್ಕಳ ಕ್ಷೇತ್ರದ ಕೈ ಟಿಕೆಟ್ ಮಾಜಿ ಶಾಸಕ ಗೋಪಾಲ್ ಭಂಡಾರಿ ಪಾಲಾಗಿದೆ. ಹೀಗಾಗಿ ನಿನ್ನೆಯಿಂದ ಶೆಟ್ಟಿ ಬೆಂಬಲಿಗರು ತೀವ್ರ ಅಸಮಾಧಾನಗೊಂಡಿದ್ದಾರೆ.