"ನಿಮ್ಮಂಥವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗಬಹುದು" ಎಂದ ಸುನಿಲ್ ಕುಮಾರ್
ಉಡುಪಿ, ಸೆಪ್ಟೆಂಬರ್ 10: "ಪ್ರಧಾನಿ ಮೋದಿ ನಿಲುವನ್ನು ವಿರೋಧಿಸಿ ರಾಜೀನಾಮೆ ಕೊಟ್ಟಿದ್ದೀರಿ. ಮುಂದೆ ನಿಮ್ಮಂಥವರು ಆತ್ಮಹತ್ಯೆಯನ್ನೂ ಮಾಡಿಕೊಳ್ಳಬೇಕಾಗಬಹುದು. ಅಂಥ ನಿಲುವನ್ನು ತೆಗೆದುಕೊಳ್ಳಲು ಭಾರತ ಸರ್ಕಾರ ಸಜ್ಜಾಗಿದೆ" ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂಥಿಲ್ ಅವರನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜೀನಾಮೆ ನೀಡಿದ ಡಿಸಿ ಸಸಿಕಾಂತ್ ಸೆಂಥಿಲ್ ವಿರುದ್ದ ಭಾರೀ ಭ್ರಷ್ಟಾಚಾರದ ಆರೋಪ
ಉಡುಪಿಯಲ್ಲಿ ನಳಿನ್ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸುನಿಲ್ ಕುಮಾರ್, "ಕಾಶ್ಮೀರ, ರಾಮಮಂದಿರ ವಿಚಾರದಲ್ಲಿ ಜಿಲ್ಲಾಧಿಕಾರಿ ಅವರಿಗೆ ಅಸಮಾಧಾನವಾಗಿದೆಯಂತೆ. ಈ ಜಿಲ್ಲಾಧಿಕಾರಿ ಮತ್ತು ಅದೇ ಮಾನಸಿಕತೆ ಇರುವವರಿಗೆ ಎಚ್ಚರಿಕೆ ಕೊಡಬಯಸುತ್ತೇವೆ. ಒಬ್ಬ ಜಿಲ್ಲಾಧಿಕಾರಿ ರಾಜೀನಾಮೆ ಕೊಟ್ರೆ ನಮ್ಮ ನಿಲುವೇನೂ ಬದಲಾಗದು" ಎಂದು ಗುಡುಗಿದರು.
"ಕಾಶ್ಮೀರದ ಕುರಿತಂತೆ, ರಾಮಮಂದಿರದ ಕುರಿತಂತೆ ನಮ್ಮ ಪಕ್ಷದ ನಿಲುವು ಬದಲಾಗಿಲ್ಲ. ಬದಲಾಗುವುದೂ ಇಲ್ಲ. ಜಗತ್ತು ಭಾರತದ ಆಡಳಿತವನ್ನು ಒಪ್ಪಿಕೊಳ್ಳುತ್ತದೆ. ಭಾರತದ ನಾಗರಿಕರು ಮೋದಿಯವರ ಕೆಲಸ ಮೆಚ್ಚಿದ್ದಾರೆ. ಯಾರೋ ಒಬ್ಬ ಜಿಲ್ಲಾಧಿಕಾರಿ ವಿರೋಧಿಸಿ ರಾಜೀನಾಮೆ ಕೊಡ್ತಾರೆ. ಅದಕ್ಕೆ ನಾವೇನೂ ಮಾಡಲಾಗದು. ಪ್ರಧಾನಿ ಮೋದಿ ಸರ್ಕಾರ ಭಾರತದ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಿದೆ" ಎಂದು ಹೇಳಿದರು.