ಸುಮಲತಾ ಎನ್ಡಿಎ ಬೆಂಬಲಿಸಲಿ: ಕೋಟಾ ಶ್ರೀನಿವಾಸ ಪೂಜಾರಿ
ಉಡುಪಿ, ಮೇ 27: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಡೆದ ಹೈ ಓಲ್ಟೇಜ್ ಕದನದಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಜಯಗಳಿಸಿರುವ ಸುಮಲತಾ ಅಂಬರೀಷ್ ಅವರು ಕೇಂದ್ರದಲ್ಲಿ ಯಾರಿಗೆ ಬೆಂಬಲ ಘೋಷಿಸುತ್ತಾರೆ ಎಂಬ ಕುತೂಹಲ ಈಗ ಆರಂಭವಾಗಿದೆ.
ಸುಮಲತಾ: ಪಕ್ಷೇತರವಾಗಿ ಸ್ಪರ್ಧಿಸಿ ಗೆದ್ದ ಕರ್ನಾಟಕದ ಮೊದಲ ಮಹಿಳೆ
ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡುವುದಾಗಿ ಯಾವಾಗ ನಿರ್ಧರಿಸಿದರೋ ಆಗಲೇ ಸೋಲು-ಗೆಲುವಿನ ಲೆಕ್ಕಾಚಾರ ಆರಂಭವಾಗಿತ್ತು. ಸುಮಲತಾ ರಾಜಕೀಯಕ್ಕೆ ಬರುವುದನ್ನು ಸಾಕಷ್ಟು ಜನ ವಿರೋಧಿಸಿದ್ದರು. ಸಿಎಂ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರ್ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗ ಸುಮಲತಾ ಗೆಲುವು ಕಷ್ಟಸಾಧ್ಯ ಎಂದೇ ಹೇಳಲಾಗಿತ್ತು. ನಿಖಿಲ್ ಗೆ 8 ಜನ ಶಾಸಕರ ಬಲ, ಕಾಂಗ್ರೆಸ್ ಪಕ್ಷದ ಬೆಂಬಲ ಇದೆಲ್ಲವೂ ಇದ್ದ ಕಾರಣ ಸುಮಲತಾ ಅವರನ್ನ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ ತಮ್ಮ ವಿರುದ್ಧ ನಡೆದ ಷಡ್ಯಂತ್ರ, ರಾಜಕೀಯ ತಂತ್ರಗಾರಿಕೆ, ವೈಯಕ್ತಿಕ ನಿಂದನೆಗಳನ್ನು ಮೆಟ್ಟಿ ನಿಂತು ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ್ದಾರೆ.
ಈಗ ಸುಮಲತಾ ಅವರು ಕೇಂದ್ರದಲ್ಲಿ ಯಾರಿಗೆ ಬೆಂಬಲ ಸೂಚಿಸುತ್ತಾರೆ ಎಂಬುದರ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಆರಂಭವಾಗಿದೆ. ಈ ನಡುವೆ ಉಡುಪಿಯಲ್ಲಿ ಸುಮಲತಾ ಅವರ ಕುರಿತು ಮಾತನಾಡಿರುವ ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಸುಮಲತಾ ಅಂಬರೀಶ್ ಗೆಲುವು ಸಾಮಾನ್ಯ ಎಂದು ಭಾವಿಸಿಲ್ಲ. ಚುನಾವಣೆಯಲ್ಲಿ ಬಿಜೆಪಿ ಸುಮಲತಾರಿಗೆ ಬೇಷರತ್ ಬೆಂಬಲ ನೀಡಿತ್ತು. ಅವರಾಗಿಯೇ ಎನ್ಡಿಎಗೆ ಬೆಂಬಲ ನೀಡಿದರೆ ಎಲ್ಲರಿಗೂ ಒಂದು ಗೌರವ ಬರುತ್ತದೆ ಎಂದು ಹೇಳಿದ್ದಾರೆ.