ಕೊರೊನಾದಿಂದ ಹೊರಬಂದ ಪುತ್ತಿಗೆ ಮಠಾಧೀಶ: ಕೆಎಂಸಿಯಿಂದ ಡಿಸ್ಚಾರ್ಜ್
ಉಡುಪಿ, ಆಗಸ್ಟ್ 01: ಹನ್ನೆರಡು ದಿನಗಳ ಹಿಂದೆ ಕೊರೊನಾ ಸೋಂಕಿನಿಂದ ಉಡುಪಿಯ ಮಣಿಪಾಲದ ಕೆಎಂಸಿ ಅಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ, ಅಷ್ಠ ಮಠಾಧೀಶರಲ್ಲೊಬ್ಬರಾದ ಪುತ್ತಿಗೆ ಸುಗುಣೇಂದ್ರ ಶ್ರೀಗಳು ಇಂದು ಕೊರೊನಾ ವೈರಸ್ ನಿಂದ ಸಂಪೂರ್ಣ ಗುಣಮುಖರಾಗಿರುವುದಾಗಿ ತಿಳಿದುಬಂದಿದೆ.
ಸುಗುಣೇಂದ್ರ ಶ್ರೀಗಳು ಇಂದು ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದು, ಮೂಲಮಠಕ್ಕೆ ಮರಳಿದ್ದಾರೆ.
ಜುಲೈ 21 ರಂದು ಶ್ರೀಗಳನ್ನು ಕೊರೊನಾ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಆಸ್ಪತ್ರೆಯಲ್ಲೇ ಪೂಜೆ ನೆರವೇರಿಸಲು ವ್ಯವಸ್ಥೆ ಏರ್ಪಡಿಸಲಾಗಿತ್ತು. ಶ್ರೀಗಳು ಬೇಗ ಗುಣಮುಖರಾಗಲೆಂದು ಭಕ್ತಾದಿಗಳೂ ಪ್ರಾರ್ಥನೆ ಸಲ್ಲಿಸಿದ್ದರು. ಇದೀಗ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ.
ಉಡುಪಿಯ ಪುತ್ತಿಗೆ ಶ್ರೀ, ನ್ಯಾಯಾಧೀಶರಿಗೆ ಕೊರೊನಾ ಸೋಂಕು: ಆಸ್ಪತ್ರೆಗೆ ದಾಖಲು
ಸದ್ಯ ಶ್ರೀಗಳು ಕೆಲವು ದಿನಗಳ ಕಾಲ ಕ್ವಾರಂಟೈನ್ ನಲ್ಲಿರಲು ಸಲಹೆ ನೀಡಲಾಗಿದೆ. ಸ್ವಾಮೀಜಿಗಳ ಆರೋಗ್ಯ ಈಗ ಸ್ಥಿರವಾಗಿದೆ. ಸ್ವಾಮೀಜಿಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಇದ್ದು, ಭಕ್ತರು ಮಠದತ್ತ ಸದ್ಯಕ್ಕೆ ಆಗಮಿಸುವುದು ಬೇಡ. ಅನಾರೋಗ್ಯ ಕಾಲದಲ್ಲಿ ಯೋಗಕ್ಷೇಮ ವಿಚಾರಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇವೆ ಎಂದು ಪುತ್ತಿಗೆ ಮಠದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.