ಉಡುಪಿ; ಕಠಿಣ ಲಾಕ್ಡೌನ್, ಮದುವೆ, ಮೆಹಂದಿ ಕಾರ್ಯಕ್ರಮ ರದ್ದು
ಉಡುಪಿ, ಮೇ 24; "ಲಾಕ್ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಮದುವೆ ಸಮಾರಂಭಗಳಿಗೆ ಅವಕಾಶ ಇಲ್ಲ" ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಸಭೆ ನಡೆಸಿದರು. ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, "ಜಿಲ್ಲಾಡಳಿತ ಇಂತಹದ್ದೊಂದು ಕಠಿಣ ನಿಯಮ ಜಾರಿಗೆ ತಂದಿದೆ. ಮದುವೆಗಳಿಂದಲೇ ಹೆಚ್ಚಾಗಿ ಕೊರೊನಾ ಹರಡುತ್ತಿದೆ" ಎಂದರು.
ಮಂಗಳೂರು; ಮದುವೆ ದಿನ ಡಿಜೆ ಪಾರ್ಟಿ, ವರ ಪೊಲೀಸ್ ವಶಕ್ಕೆ!
"ಇವತ್ತಿನವರೆಗೆ ನೀಡಿದ ಅನುಮತಿ ಪಡೆದ ಮದುವೆಗಳನ್ನು ನಡೆಸಬಹುದು. ಮಂಗಳವಾರದಿಂದ ಜೂನ್ 7ರ ತನಕ ಯಾವುದೇ ಮದುವೆಗಳಿಗೆ ಅವಕಾಶ ಇಲ್ಲ. ನಿಶ್ಚಿತಾರ್ಥ, ಮೆಹಂದಿ ಇನ್ನಿತರ ಕಾರ್ಯಕ್ರಮ ನಡೆಸಿದರೆ ಕ್ರಿಮಿನಲ್ ಕೇಸ್ ಹಾಕುತ್ತೇವೆ" ಎಂದು ಎಚ್ಚರಿಕೆ ನೀಡಿದರು.
ಕಾರವಾರ: ಮದುವೆ ಹಿಂದಿನ ದಿನವೇ ಕೊರೊನಾ ಸೋಂಕಿಗೆ ವರ ಬಲಿ!
"ಉಡುಪಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಜನರ ಸಹಕಾರಕ್ಕೆ ಧನ್ಯವಾದ ಹೇಳುತ್ತೇನೆ. ಇದೇ ರೀತಿ ಸಹಕಾರ ನೀಡಿದರೆ ಇನ್ನೊಂದು ಲಾಕ್ಡೌನ್ಗೆ ಹೋಗುವುದು ತಪ್ಪಲಿದೆ" ಎಂದರು.
ಕೋವಿಡ್ ಕರ್ಪ್ಯೂ; ಉಡುಪಿಯಲ್ಲಿ 354 ಸರಳ ಮದುವೆ!
"ಜಿಲ್ಲೆಯ ಅನೇಕ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಐಸೋಲೇಷನ್ ಆದವರನ್ನು ಸಂಪರ್ಕಿಸಿದ್ದೇನೆ. ಮದುವೆ ಸಮಾರಂಭಗಳಿಗೆ, ಮೆಹಂದಿ ಮತ್ತಿತರ ಕಾರ್ಯಕ್ರಮಗಳಿಗೆ ಹೋದವರಲ್ಲೇ ಹೆಚ್ಚಾಗಿ ಸೋಂಕು ಕಂಡುಬರುತ್ತಿದೆ" ಎಂದು ಹೇಳಿದರು.
"ಗುಂಪಾಗಿ ಅಗತ್ಯ ವಸ್ತು ಖರೀದಿಸುವವರಲ್ಲೂ ಸೋಂಕು ಕಂಡು ಬರುತ್ತಿದೆ. ಆದ್ದರಿಂದ ಯಾವುದೇ ಸಮಾರಂಭಗಳಿಗೂ ಹೋಗಬೇಡಿ. ಕೆಲವು ದಿನಗಳ ಮಟ್ಟಿಗೆ ಮದುವೆ, ಮೆಹಂದಿಗಳನ್ನು ಮುಂದೂಡಿ" ಎಂದು ಜಿಲ್ಲಾಧಿಕಾರಿಗಳಿ ಮನವಿ ಮಾಡಿದರು.
Recommended Video
"ಲಾಕ್ಡೌನ್ ಸಂದರ್ಭದಲ್ಲಿ ಗುಂಪುಗೂಡಿ ಕ್ರಿಕೆಟ್ ಆಡುವುದು ಕಂಡುಬಂದಿದೆ. ಅಂಥವರ ವಿರುದ್ಧ ಕೇಸ್ ದಾಖಲಿಸುತ್ತೇವೆ" ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.