ಇದು ಕಥೆಯಲ್ಲ, ಜೀವನ: ಒಂದೇ ಮನೆಯ ನಾಲ್ವರಿಗೂ ವಿಚಿತ್ರ ಕಾಯಿಲೆ!
ಉಡುಪಿ, ಜನವರಿ 8: ಭಗವಂತ ಈ ಕುಟುಂಬದ ಮಟ್ಟಿಗೆ ಸಂಪೂರ್ಣ ನಿರ್ದಯಿ. ಈ ಮನೆಯಲ್ಲಿ ಒಬ್ಬರಿಗಲ್ಲ, ಇಬ್ಬರಿಗಲ್ಲ ಬರೋಬ್ಬರಿ ನಾಲ್ಕು ಮಂದಿಯೂ ವಿಚಿತ್ರ ಕಾಯಿಲೆಯಿಂದ ನರಳುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ಕುಳಿತಲ್ಲಿ ಕುಳಿತುಕೊಳ್ಳಲಾಗದೇ, ತಮ್ಮ ನಿತ್ಯ ಕಾರ್ಯ ಮಾಡಲೂ ಪರಿತಪಿಸಬೇಕಾದ ಶಾಪ ಈ ಇಡೀ ಕುಟುಂಬದ್ದು. ಇಂತಹ ನತದೃಷ್ಟ ಕುಟುಂಬವೊಂದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಅತ್ತೂರಿನಲ್ಲಿದೆ. ಯಾರಾದರೂ ತಮಗೆ ಸಹಾಯ ಮಾಡಿ ತಮ್ಮ ಬದುಕನ್ನು ಸಹ್ಯವಾಗಿಸುವರೇ ಎಂಬ ನಿರೀಕ್ಷೆಯ ಕಣ್ಣಲ್ಲೇ ಮನೆಯ ದಾರಿ ನೋಡುತ್ತಾ ಬದುಕು ಸಾಗಿಸುತ್ತಿದೆ.
ಗೋ ಪ್ರೇಮ; ಗೌರಿ ಹಸುವಿಗೆ ಸೀಮಂತದ ಸಂಭ್ರಮ!
ಗುಲಾಬಿ ಶೆಟ್ಟಿಗಾರ್ತಿ (73 ವರ್ಷ) ಇವರ ಮಕ್ಕಳಾದ ಯಶೋಧಾ ಶೆಟ್ಟಿಗಾರ್ (37ವರ್ಷ) ಬಾಲಕೃಷ್ಣ ಶೆಟ್ಟಿಗಾರ್ (39ವರ್ಷ), ಗೀತಾ ಶೆಟ್ಟಿಗಾರ್ (32ವರ್ಷ) ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವವರು. ಕಳೆದ ಐದು ವರ್ಷಗಳಿಂದ ನಾಲ್ವರು ಈ ಕಾಯಿಲೆಗೆ ತುತ್ತಾಗಿದ್ದಾರೆ. ಕಾಯಲೆ ಏನು ಎಂದು ಕೇಳಿದರೆ ಅದು ರಕ್ತ ಸಂಬಂಧಿ ಕಾಯಿಲೆ ಎನ್ನುತ್ತಾರೆ ವೈದ್ಯರು.
ಈ ನಾಲ್ವರಿಗೂ ಕಾಲಿನ ಸ್ವಾಧೀನತೆ ಇಲ್ಲ. ತಮ್ಮ ನಿತ್ಯದ ಕಾರ್ಯ ಮಾಡಲಾಗದೇ ಇತ್ತ ಬಡತನವನ್ನೇ ಹೊದ್ದು ಪರಿತಪಿಸುತ್ತಿರುವ ಈ ಕುಟುಂಬ ಇದೀಗ ಅಕ್ಷರಶಃ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಈ ವಿಚಿತ್ರ ಕಾಯಿಲೆಯನ್ನು ಗುಣಪಡಿಸಲು ಹಲವು ಆಸ್ಪತ್ರೆಗಳಿಗೆ ಅಲೆದಾಡಿದರೂ ಈ ವ್ಯಾಧಿಯು ಗುಣ ಕಂಡಿಲ್ಲ. ಸರಕಾರದಿಂದ ಬರುವ ಪಿಂಚಣಿ 1,500 ರೂಪಾಯಿ, ಅನ್ನಭಾಗ್ಯದ ಪಡಿತರ, ಹಾಗೂ ಊರ ಜನರಲ್ಲಿ ಅಂಗಲಾಚಿ ಪಡೆದಿರುವ ನೆರವಿನಿಂದ ಇವರು ದಿನ ಕಳೆಯುತ್ತಿದ್ದಾರೆ.
ದುಡಿಯುವರು ಹಾಸಿಗೆ ಹಿಡಿದಿರುವುದರಿಂದ ಚಿಕಿತ್ಸೆ, ಔಷೋಧೋಪಚಾರ ನಡೆಸಲು ಇವರಿಗೆ ಅಸಾಧ್ಯ. ರಕ್ತದ ಸಮಸ್ಯೆಯಿಂದ ಈ ವ್ಯಾಧಿ ಬಂದಿರುವುದೆಂದು ವ್ಯೆದ್ಯರಿಂದ ತಿಳಿದುಬಂದಿದ್ದು, ಇಷ್ಟು ದಿನ ಊರವರು ಅಲ್ಪ ಸ್ವಲ್ಪ ಸಹಾಯ ಮಾಡುತ್ತಿದ್ದರು. ಇದೀಗ ಊರವರ ಸಹಾಯವೂ ಇಲ್ಲದ ಕಾರಣ ಈ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ದೊಡ್ಡ ಆಸ್ಪತ್ರೆಗೆ ಹೋಗಲು ಲಕ್ಷಾಂತರ ರೂ. ಖರ್ಚು ಇದ್ದು, ದಾನಿಗಳ ನೆರವಿನ ನಿರೀಕ್ಷೆಯಲ್ಲಿದೆ ಈ ಕುಟುಂಬ.