ಸತ್ತ ಸರ್ಕಾರಕ್ಕೆ ಆಮ್ಲಜನಕ ತುಂಬ್ತಿದ್ದಾರೆ- ಕೋಟ ಶ್ರೀನಿವಾಸ್ ಪೂಜಾರಿ
ಉಡುಪಿ ಮೇ 28: ರಾಜ್ಯ ಸರ್ಕಾರ ಆಡಳಿತ ಮತ್ತು ಜನಾಭಿಪ್ರಾಯ ಎರಡರಲ್ಲೂ ನಿರ್ಜೀವವಾಗಿದೆ. ಸತ್ತುಹೋದ ಸರ್ಕಾರಕ್ಕೆ ಆಮ್ಲಜನಕ ತುಂಬುವ ಕೆಲಸ ಆಗ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಕಿಡಿಕಾರಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮೈತ್ರಿ ಸರಕಾರದ ಒಬ್ನೇ ಒಬ್ಬ ಮಂತ್ರಿ ಕೆಲ್ಸ ಮಾಡ್ತಿಲ್ಲ. ಬರದಿಂದ ಜನರು ಕಂಗಾಲಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಂಚಕರ್ಮ, 'ಪಂಚ' ತಂತ್ರದ ಜೊತೆ ಸಮರೋಪಾದಿ ಕೆಲಸ ಮಾಡಿ:ಸಿಎಂಗೆ ಕುಟುಕಿದ ಕೋಟ
ಏನಾದ್ರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು ಹರಸಾಹಸ ಮಾಡ್ತಿದ್ದಾರೆ. ಅನುಭವಿ ಮಂತ್ರಿಗಳನ್ನು ಕೈಬಿಟ್ಟು ಹೊಸಬರ ಸೇರ್ಪಡೆಗೆ ತಯಾರಿ ನಡೀತಿದೆ ಎಂದು ಹೇಳಿದ ಅವರು, ಕುಮಾರಸ್ವಾಮಿ ಸರ್ಕಾರ ನಡೆಸುವ ಸ್ಥಿತಿಯಲ್ಲೇ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಬಗ್ಗೆ ಜನಾದೇಶ ಬಂದಾಗಿದೆ. ಮೈತ್ರಿ ಸರ್ಕಾರದಲ್ಲಿ ಶಾಸಕ ಬಲವೂ ಇಲ್ಲ. ಈಗ ಹಣಬಲದ ಮೂಲಕ ಸರ್ಕಾರ ಉಳಿಸಲು ಹೊರಟಿದ್ದೀರಿ. ಮೊದಲು ಖುರ್ಚಿಯಿಂದ ಕೆಳಗಿಳೀರಿ, ಜನಾದೇಶ ಇರೋರಿಗೆ ಅವಕಾಶ ಕೊಡಿ ಎಂದರು.
ಸುಮಲತಾ ಎನ್ಡಿಎ ಬೆಂಬಲಿಸಲಿ: ಕೋಟಾ ಶ್ರೀನಿವಾಸ ಪೂಜಾರಿ
ಯು.ಟಿ.ಖಾದರ್, ಜಯಮಾಲ ಸಚಿವ ಸಂಪುಟದಿಂದ ಕೈ ಬಿಡುವ ವಿಚಾರವಾಗಿ ಮಾತನಾಡಿ, ಕುಮಾರಸ್ವಾಮಿ, ಕರಾವಳಿ ಜನರಿಗೆ ಬುದ್ಧಿ ಇಲ್ಲ ಅಂತಿದ್ರು. ಹಾಗಾಗಿ ಇಬ್ರನ್ನೂ ಕೈ ಬಿಡಲು ಹೊರಟಿರ್ಬೇಕು. ಕರಾವಳಿ ಜನರಿಗೆ ಬುದ್ಧಿ ಇಲ್ಲ, ಹಾಗಾಗಿ ಜೆಡಿಎಸ್ ಗೆ ಓಟ್ ಹಾಕಿಲ್ಲ ಅಂತೀರಿ. ಈಗ ಇಡೀ ರಾಜ್ಯದಲ್ಲೇ ಜೆಡಿಎಸ್ ಗೆ ವೋಟ್ ಹಾಕಿಲ್ಲ. ಹಾಗಾದ್ರೆ ರಾಜ್ಯದ ಜನತೆಗೆ ಬುದ್ಧಿ ಇಲ್ಲ ಅಂತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಅವರು ಮರು ಆಯ್ಕೆ ಆದ್ರೆ ರಾಜಕೀಯ ನಿವೃತ್ತಿ ಪಡೀತೀನಿ ಅಂದಿದ್ರು ರೇವಣ್ಣ. ರೇವಣ್ಣ ಆಡಿದ ಮಾತು ಎಷ್ಟು ಸಾರಿ ಉಳಿಸ್ಕೊಂಡಿದಾರೋ ಗೊತ್ತಿಲ್ಲ. ಈ ಹಿಂದೆ ದೇವೇಗೌಡರು ದೇಶ ಬಿಡ್ತೇನೆ ಅಂದಿದ್ರು. ಆದರೆ ಬಿಟ್ಟಿಲ್ಲ. ಮೋದಿ ಹೇಳಿದ್ದಕ್ಕೆ ದೇಶದಲ್ಲಿ ಉಳಿದೆ ಅಂದಿದ್ರು ದೊಡ್ಡಗೌಡ್ರು. ಈಗ ರೇವಣ್ಣಂಗೆ 'ಲಿಂಬೆಹಣ್ಣೇ' ರಾಜಕಾರಣ ಬಿಡ್ಬೇಡ ಅಂದಿರ್ಬೇಕು. ಮತ್ಯಾರೂ ಹೇಳಿದ್ದು ನಾನು ಕೇಳಿಲ್ಲ ಎಂದು ವ್ಯಂಗ್ಯವಾಡಿದರು.