ಕೈ ಬೀಸಿ ಕರೆಯುತಿದೆ ಮಳೆಗೆ ಮೈ ಒಡ್ಡಿದ ಪುಟ್ಟ ದ್ವೀಪ, ಮತ್ತೇಕೆ ತಡ?
ಉಡುಪಿ, ಸೆಪ್ಟೆಂಬರ್ 21: ಮಳೆಗಾಲ ಮುಗಿದಿದೆ. ಮಕ್ಕಳಿಗೆ ಇನ್ನೇನು ಅರ್ಧ ವಾರ್ಷಿಕ ರಜೆ ಸಮೀಪಿಸುತ್ತಿದೆ. ಸೆಂಟ್ ಮೇರೀಸ್ ಕೂಡ ಕೈಬೀಸಿ ಕರೆಯುತ್ತಿದೆ. ಹೌದು... ರಾಜ್ಯದ ಅತ್ಯಂತ ಸುಂದರ ಮತ್ತು ಪ್ರಸಿದ್ಧ ದ್ವೀಪ ಉಡುಪಿಯ ಸೆಂಟ್ ಮೇರೀಸ್ ಮಳೆಗೆ ಮಿಂದು ಕಂಗೊಳಿಸುತ್ತಿದೆ. ಮರಳು, ನೀಲಿ ಸಮುದ್ರ, ದ್ವೀಪದ ತೆಂಗಿನ ಮರಗಳು ಅಪೂರ್ವ ಚೆಲುವನ್ನು ತೆರೆದಿಟ್ಟಿವೆ.
ಉಡುಪಿ ಎಂದಾಕ್ಷಣ ಎಲ್ಲರ ಮನಸ್ಸಿಗೆ ಬರುವುದು ದೇವಾಲಯಗಳ ನಗರಿ ಎಂದು. ಆದರೆ ಇದರ ಜೊತೆಗೆ ಇಲ್ಲಿ ಸಾಕಷ್ಟು ಪ್ರವಾಸಿತಾಣಗಳೂ ಇವೆ. ಅವುಗಳಲ್ಲಿ ಮುಖ್ಯವಾದದ್ದು ಸೆಂಟ್ ಮೇರೀಸ್ ಐಲ್ಯಾಂಡ್. ಕೃಷ್ಣನಗರಿಯ ಈ ಪುಟ್ಟ ದ್ವೀಪಕ್ಕೆ ದಿನವೂ ಸಾವಿರಾರು ಪ್ರವಾಸಿಗರು ಬರುತ್ತಾರೆ. ರಜೆ ಆರಂಭಗೊಳ್ಳುತ್ತಿರುವುದರಿಂದ ರಾಜ್ಯದ ಮೂಲೆಮೂಲೆಗಳಿಂದ ಪ್ರವಾಸಿಗರು ಸಾಗರೋಪಾದಿಯಲ್ಲಿ ಹರಿದು ಬರುತ್ತಿದ್ದಾರೆ.
ವಾಹ್ ಎನಿಸುವ 'ಇಂಥ' ಸ್ಕೂಬಾ ಡೈವಿಂಗ್ ಪ್ರವಾಸೋದ್ಯಮ ಮಂಗ್ಳೂರಲ್ಲಿ
ಸೆಂಟ್ ಮೇರೀಸ್ ಗೆ ಹೋಗುತ್ತಾ ಎರಡು ಬೋಟುಗಳ ಬದಲಾವಣೆ ಮಾಡಬೇಕು. ಬೋಟ್ ಪ್ರಯಾಣದ ವೇಳೆ ಪ್ರವಾಸಿಗರೆಲ್ಲ ಸುತ್ತಲ ಸುಂದರ ದೃಶ್ಯಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದುಕೊಳ್ಳುತ್ತಾರೆ. ಜೊತೆಗೆ ಸೆಂಟ್ ಮೇರೀಸ್ ನ ದೃಶ್ಯ ವೈಭವವನ್ನು ಹೆಚ್ಚಿಸುವುದು ಇಲ್ಲಿನ ಬಂಡೆಕಲ್ಲುಗಳು. ವಿವಿಧ ಆಕಾರದ ಬಂಡೆಕಲ್ಲುಗಳು ಮೇರೀಸ್ ಚೆಲುವನ್ನು ದುಪ್ಪಟ್ಟುಗೊಳಿಸಿವೆ. ಇಡೀ ದ್ವೀಪಕ್ಕೆ ತೋರಣದಂತಿರುವುದು ಇಲ್ಲಿ ಸೊಂಪಾಗಿ ಬೆಳೆದಿರುವ ತೆಂಗಿನ ಮರಗಳು. ಬಿರುಬಿಸಿಲು ಇರುವುದರಿಂದ ಪ್ರವಾಸಿಗರು ತೆಂಗಿನ ಮರಗಳ ತಂಪನ್ನು ಅನುಭವಿಸುತ್ತಾರೆ.
ಮನುಜನನ್ನು ಕುಬ್ಜನನ್ನಾಗಿಸುವ ಸಾಗರದಾಳದ ಅನೂಹ್ಯ ಜಗತ್ತು
ಸೆಂಟ್ ಮೇರೀಸ್ ದ್ವೀಪದ ಸುತ್ತಲೂ ಇರುವುದು ಮರಳಲ್ಲ; ಕಪ್ಪೆಚಿಪ್ಪು ಪುಡಿಪುಡಿಯಾಗಿ ಇಲ್ಲಿ ಮರಳು ರೂಪುಗೊಂಡಿರುವುದರಿಂದ ಬೀಚ್ ನಲ್ಲಿ ಓಡಾಡುವವರು ಕೊಂಚ ಎಚ್ಚರಿಕೆಯಿಂದಲೇ ಓಡಾಡಬೇಕಾಗುತ್ತದೆ.
ಮಸ್ತ್ ಮಜಾ ಮಾಡಲು ಝಾಂಝಿಬಾರ್ ಗೆ ಬನ್ನಿ, ಇಲ್ಲಿ ಎಲ್ಲವೂ ಸಸ್ತಾ
ಈ ಮಳೆಗಾಲದಲ್ಲಿ ಮಿಂದು ಹೊಸ ರೂಪು ತಳೆದಂತಿರುವ ಈ ಪುಟ್ಟದ್ವೀಪ ಪ್ರವಾಸಿಗರ ಸದ್ಯದ ಹಾಟ್ ಸ್ಪಾಟ್. ಮಳೆಗಾಲದ ಅವಧಿಯ ನಿಷೇಧ ಮುಗಿದು ಇದೀಗ ನಾಲ್ಕು ದಿನಗಳ ಹಿಂದೆ ಪ್ರವಾಸಿಗರಿಗೆ ತೆರೆದುಕೊಂಡಿದೆ. ಕೃಷ್ಣನಗರಿಯಲ್ಲೀಗ ಬಿಸಿಲ ವಾತಾವರಣ. ಈ ಪುಟ್ಟ ದ್ವೀಪಕ್ಕೆ ಬರಲು ಇದಕ್ಕಿಂತ ಪ್ರಶಸ್ತ ಸಮಯ ಉಂಟೇ? ಮತ್ತೇಕೆ ತಡ....ಇಂದೇ ಪ್ಲಾನ್ ಮಾಡಿ.