ಸರ್ವಧರ್ಮ ಸೌಹಾರ್ದದ ಪ್ರತೀಕ ಈ ಅತ್ತೂರು ಸಂತ ಲಾರೆನ್ಸ್ ಜಾತ್ರೆ
ಉಡುಪಿ, ಜನವರಿ 28: ಕರಾವಳಿಯ ಬಹುಮುಖ್ಯ ಸೌಹಾರ್ದದ ತಾಣಗಳಲ್ಲೊಂದು, ಕಾರ್ಕಳದ ಅತ್ತೂರು ಸೈಂಟ್ ಲಾರೆನ್ಸ್ ಚರ್ಚ್. ಜಾತಿ ಧರ್ಮ ಮೀರಿದ ಅತ್ತೂರು ಚರ್ಚ್, ಈ ಭಾಗದ ಕ್ರಿಶ್ಚಿಯನ್ ಹಿಂದೂ ಮುಸ್ಲಿಮರನ್ನು ಸಾಮರಸ್ಯದ ಬದುಕಿಗೆ ಪ್ರೇರೇಪಿಸುತ್ತಿದೆ.
ಕಾರ್ಕಳದ ಸಂತ ಮಾರಿ ಎಂದೇ ಪ್ರಸಿದ್ಧಿ ಹೊಂದಿರುವ ಅತ್ತೂರು ಜಾತ್ರೆ ಭಾನುವಾರದಿಂದ ವಿಜೃಂಭಣೆಯಿಂದ ಪ್ರಾರಂಭಗೊಂಡಿದೆ. ದಕ್ಷಿಣ ಭಾರತದಲ್ಲೇ ಭಾವೈಕ್ಯದ, ಅಗ್ರ ಧಾರ್ಮಿಕ ಕ್ಷೇತ್ರವಾದ ಸಂತ ಲಾರೆನ್ಸ್ ಚರ್ಚ್ ಝಗಮಗಿಸುವ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದ್ದು ರಾಜ್ಯ ಹೊರರಾಜ್ಯಗಳ ಭಕ್ತರ ದಂಡೇ ಹರಿದು ಬರುತ್ತಿದೆ. "ನೀವು ಮಾಡುವ ಒಳ್ಳೆಯ ಕೆಲಸಗಳನ್ನು ಅವರು ನೋಡಲಿ ಮತ್ತು ದೇವರಿಗೆ ಮಹಿಮೆ ನೀಡಲಿ" ಎಂಬ ಸಂದೇಶದೊಂದಿಗೆ ನಡೆಯುತ್ತಿರುವ ಐದು ದಿನಗಳ ಉತ್ಸವದಲ್ಲಿ ಸಾವಿರಾರು ಭಕ್ತರು ಸಂತ ಲಾರೆನ್ಸ್ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸುತ್ತಿದ್ದಾರೆ.
ಉಡುಪಿ ಪರ್ಯಾಯಕ್ಕೆ ಕ್ಷಣಗಣನೆ: ಕಣ್ಮನ ಸೆಳೆಯುವ ಕೃಷ್ಣನಗರಿ ಚಿತ್ರಗಳು...
ಸಂತ ಲಾರೆನ್ಸ್ ಚರ್ಚ್ ಒಳಭಾಗದಲ್ಲಿ ಎಲ್ಲ ಭಕ್ತರಿಗೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿದೆ. ಚರ್ಚ್ ಹಿಂಭಾಗದಲ್ಲಿ ಹಿಂದೂ ದೇವಾಲಯಗಳಲ್ಲಿರುವಂತಹ ಪುಷ್ಕರಣಿಯಿದೆ. ಜಾತ್ರೆಗೆ ಆಗಮಿಸುವ ಎಲ್ಲ ಧರ್ಮೀಯರೂ ಪುಷ್ಕರಣಿಗೆ ತೆರಳಿ ನೀರನ್ನು ಮುಟ್ಟುವುದು ಇಲ್ಲಿನ ಸಂಪ್ರದಾಯ. ಉಳಿದಂತೆ ಕಳೆದ ವರ್ಷದ ಹರಕೆಯನ್ನು ಈ ಬಾರಿ ಸಂತ ಲಾರೆನ್ಸ್ ಸಲ್ಲಿಸುವುದೂ ಇಲ್ಲಿನ ವಾಡಿಕೆ.
ಅತ್ತೂರು ಜಾತ್ರೆ ಪ್ರಾರಂಭವಾಯಿತೆಂದರೆ ಕಾರ್ಕಳದಲ್ಲಿ ರಾತ್ರಿ ಆಗುವುದಿಲ್ಲ ಎಂದೇ ಪ್ರತೀತಿ. ಐದು ದಿನ ಹಗಲು ರಾತ್ರಿ ಎನ್ನದೇ ಜನಸಾಗರವೇ ಇಲ್ಲಿಗೆ ಹರಿದು ಬರುತ್ತದೆ. ಸಂತ ಲಾರೆನ್ಸ್ ಚರ್ಚಂತೂ ವರ್ಣಮಯ ಬೆಳಕಿನಿಂದ ಮಿಂದೇಳುತ್ತಿದ್ದು, ನೋಡಲು ಎರಡು ಕಣ್ಣು ಸಾಲದು ಎಂಬಂತೆ ತನ್ನ ಚೆಲುವನ್ನು ಭಕ್ತರಿಗಾಗಿ ತೆರೆದಿಟ್ಟಿದೆ.