ಉಡುಪಿ ಅಜ್ಜರಕಾಡು ಆಸ್ಪತ್ರೆ ಮೇಲ್ದರ್ಜೆಗೆ ಏರಿಸಲು ಶ್ರೀರಾಮುಲು ತೀರ್ಮಾನ
ಉಡುಪಿ, ಸೆಪ್ಟೆಂಬರ್ 28: ಬಹುಕಾಲದ ಬೇಡಿಕೆಯಾದ ಉಡುಪಿ ಅಜ್ಜರಕಾಡು ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಘೋಷಿಸಿದ್ದಾರೆ.
ಕಳೆದ ರಾತ್ರಿ ಆಸ್ಪತ್ರೆ ವಾಸ್ತವ್ಯಕ್ಕಾಗಿ ಆಗಮಿಸಿದ ಶ್ರೀರಾಮುಲು ಈ ಘೋಷಣೆ ಮಾಡಿದ್ದಾರೆ. "ಉಡುಪಿ ಜಿಲ್ಲೆ ರಚನೆಯಾಗಿ 22 ವರ್ಷಗಳಾಗಿವೆ. 2009 ರಲ್ಲಿ ತಾವು ಆರೋಗ್ಯ ಸಚಿವರಾಗಿದ್ದಾಗಲೇ ಅಜ್ಜರಕಾಡು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಶಿಫಾರಸು ಮಾಡಿದ್ದೆ. ಆದರೆ ಆಗ ಆಗಿರಲಿಲ್ಲ. ಈ ಬಾರಿ ಇಲ್ಲಿರುವ ಬೆಡ್ ಗಳನ್ನು 250ಕ್ಕೆ ಏರಿಸಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವೆ" ಎಂದು ಶ್ರೀರಾಮುಲು ಭರವಸೆ ನೀಡಿದರು.
ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಎಚ್ಚರಿಕೆ ನೀಡಿದ ಆರೋಗ್ಯ ಸಚಿವ ಶ್ರೀರಾಮುಲು
"ಸರ್ಕಾರಿ ಆಸ್ಪತ್ರೆಗಳು ಸುಧಾರಣೆಯಾಗಲಿ ಎಂಬ ಉದ್ದೇಶದಿಂದ ರಾಜ್ಯಾದ್ಯಂತ ಆಸ್ಪತ್ರೆಗಳಲ್ಲಿ ವಾಸ್ತವ್ಯ ಮಾಡಿ ಅಲ್ಲಿನ ಕುಂದುಕೊರತೆಗಳನ್ನು ಖುದ್ದು ನೋಡಿ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಹಲವು ಕಡೆಗಳಲ್ಲಿ ಸಮಸ್ಯೆಗಳು ಗಮನಕ್ಕೆ ಬಂದಿವೆ. ರಾಜ್ಯ ಸರ್ಕಾರದ ಬಳಿ ಹಣಕಾಸಿನ ಕೊರತೆ ಇಲ್ಲ. ಅಗತ್ಯ ಇರುವ ಕಡೆ ತಕ್ಷಣ ಮೇಲ್ದರ್ಜೆಗೆ ಏರಿಸಲು ಶಿಫಾರಸು ಮಾಡುವೆ" ಎಂದು ತಿಳಿಸಿದರು.
ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಯೋಗಕ್ಷೇಮ ವಿಚಾರಿಸಿದ ಸಚಿವರು ವೈದ್ಯರ ಕೊರತೆ ಇರುವ ಕಡೆ ವೈದ್ಯರ ನೇಮಕಾತಿಗೆ ಈಗಾಗಲೇ ಕ್ರಮ ಕೈಗೊಂಡಿದ್ದು, ನೇರ ನೇಮಕಾತಿಗೆ ಡಿಎಸ್ ಓ ಗಳಿಗೆ ಅಧಿಕಾರ ನೀಡಲಾಗಿದೆ. ತಜ್ಞ ವೈದ್ಯರ ನೇಮಕಾತಿಗೂ ಕಾರ್ಯಯೋಜನೆ ಸಿದ್ಧಗೊಳಿಸಲಾಗಿದೆ ಎಂದರು. ಆಸ್ಪತ್ರೆಗಳ ಸುಧಾರಣೆ ವಿಷಯದಲ್ಲಿ ಕ್ರಾಂತಿ ಮಾಡಿ ಬಡವರಿಗೆ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.