ನಿಖಿಲ್ ಮದುವೆಯಲ್ಲಿ ಕಾನೂನು ಉಲ್ಲಂಘನೆ: ಶ್ರೀನಿವಾಸ ಪೂಜಾರಿ ಆರೋಪ
ಉಡುಪಿ, ಏಪ್ರಿಲ್ 17: ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಮದುವೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆರೋಪ ಮಾಡಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ನಿಖಿಲ್ ವಿವಾಹ, ಅರ್ಚಕರ ಸಂಕಷ್ಟ ಹಾಗೂ ಮೀನುಗಾರರ ಬಗ್ಗೆ ಮಾತನಾಡಿದ್ದಾರೆ.
''ಕುಮಾರಸ್ವಾಮಿ ಮಗನ ಮದುವೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಗಿತ್ತು. ಕೇವಲ ಎಂಟು-ಹತ್ತು ಜನ ಭಾಗವಹಿಸಿ ಮದುವೆ ನಡೆದರೆ ಯಾರೂ ಆಕ್ಷೇಪಿಸುವುದಿಲ್ಲ. ಯಾರಾದರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡರೆ ಕ್ರಮ ತೆಗೆದುಕೊಳ್ಳಬೇಕು. ಸ್ಥಳೀಯ ಪೊಲೀಸರು ಜಿಲ್ಲಾಡಳಿತ ಕ್ರಮ ಕೈಗೊಳ್ಳುತ್ತದೆ. ಇದರಲ್ಲಿ ಯಾವುದೇ ವ್ಯಕ್ತಿಗತ ವಿಚಾರಗಳು ಬರುವುದಿಲ್ಲ.'' ಎಂದಿದ್ದಾರೆ.
ಚಿತ್ರಗಳು; ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಿಖಿಲ್ ಕುಮಾರಸ್ವಾಮಿ-ರೇವತಿ
''ಮುಜರಾಯಿ ದೇವಸ್ಥಾನಗಳ ಅರ್ಚಕರ ಸಂಕಷ್ಟ ಬಗ್ಗೆ ಮಾತನಾಡಿರುವ ಅವರು, ''ಕೇವಲ ತಟ್ಟೆ ಕಾಸಿನಿಂದ ಬದುಕುವ ಅರ್ಚಕರೂ ಇದ್ದಾರೆ. ದೈನಂದಿನ ಪೂಜೆಗಳು ನಿಂತ ಕಾರಣ ಅರ್ಚಕರು ಸಂಕಷ್ಟಕ್ಕೀಡಾಗಿದ್ದಾರೆ. ದೇವಸ್ಥಾನಗಳು ಮುಚ್ಚಿದ್ದು ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಆಹಾರ ಸಾಮಗ್ರಿ ಕೊಡಿ ಮತ್ತು ತಸ್ತೀಕು ಹೆಚ್ಚಿಸಿ ಎಂದು ಬೇಡಿಕೆ ಇರಿಸಿದ್ದಾರೆ. ಎರಡು ಕಂತಿನ ತಸ್ತಿಕು ಒಂದೇ ಕಂತಿನಲ್ಲಿ ನೀಡುವ ಬಗ್ಗೆ ಚಿಂತನೆ ಇದೆ. ಈ ಬಗ್ಗೆ ನಾಳೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವೆ ಅರ್ಚಕರಿಗೆ ತೊಂದರೆಯಾಗದ ರೀತಿಯಲ್ಲಿ ಸಹಾಯ ಮಾಡಲು ಮುಜರಾಯಿ ಇಲಾಖೆ ಬದ್ಧವಾಗಿದೆ'' ಎಂದು ಭರವಸೆ ನೀಡಿದ್ದಾರೆ.
''ಒಳನಾಡು ಮೀನುಗಾರಿಕೆ ವ್ಯವಸ್ಥಿತವಾಗಿ ಮುಂದುವರಿಯುತ್ತೆ. ಇದರಿಂದ ಲಕ್ಷಾಂತರ ಮೀನುಗಾರರಿಗೆ ಸಹಾಯವಾಗುತ್ತೆ. ಪ್ರಥಮ ಹಂತದಲ್ಲಿ 14000 ನಾಡದೋಣಿಗಳಿಗೆ ಅವಕಾಶ ನೀಡಿದ್ದೇವೆ. ಬಂದರು ಹೊರತುಪಡಿಸಿ ಪ್ರತ್ಯೇಕ ಮಾರುಕಟ್ಟೆಯಲ್ಲಿ ವ್ಯವಸ್ಥೆ ಮಾಡಿದ್ದೇವೆ. ಈ ಮಾರಾಟಕ್ಕೆ ವ್ಯವಸ್ಥೆ ಯಶಸ್ವಿಯಾಗಿದ್ದೇವೆ. ಯಾಂತ್ರೀಕೃತ ದೋಣಿಗಳಿಗೆ ಅವಕಾಶ ನೀಡಬೇಕು ಎನ್ನುವ ಬೇಡಿಕೆ ಇದೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಕಷ್ಟವಾಗುತ್ತೆ. ಬಂದರು ಪ್ರದೇಶಕ್ಕೆ ಬಂದರೆ ಸಾವಿರಾರು ಜನ ಸೇರುವ ಅಪಾಯವಿದೆ. ಯಾಂತ್ರಿಕೃತ ದೋಣಿಗಳಿಗೆ ಅವಕಾಶ ನೀಡುವ ಬಗ್ಗೆ ಜಿಲ್ಲಾ ಅಧಿಕಾರಿಗಳ ಜೊತೆ ಚರ್ಚೆ ಮಾಡುತ್ತೇವೆ.'' ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.