ಪೇಜಾವರ ಶ್ರೀ ವಿರುದ್ಧ ಜುಲೈ 2ರಂದು ಶಾಂತಿಯುತ ಪ್ರತಿಭಟನೆ
ಉಡುಪಿ, ಜೂನ್ 30: ಜುಲೈ 2 ರಂದು ಪೇಜಾವರ ಶ್ರೀ ವಿರುದ್ಧ ಶಾಂತಿಯುತ ಪ್ರತಿಭಟನೆಗೆ ನಡೆಸಲು ನಿರ್ಧಾರ ಶ್ರೀರಾಮಸೇನೆ ಉಡುಪಿ ಘಟಕ ನಿರ್ಧಾರಿಸಿದೆ.
"ಶಾಂತಿಯುತ ಪ್ರತಿಭಟನೆಯಲ್ಲಿ ಕೃಷ್ಣನಿಗೆ ಪೂಜೆ ಮತ್ತು ಭಜನೆ ಮಾಡಲು ನಿರ್ಧರಿಸಿದ್ದೇವೆ," ಎಂದು ಶ್ರೀರಾಮ ಸೇನೆ ಮಂಗಳೂರು ಪ್ರಮುಖ ಮೋಹನ್ ಭಟ್ ಹೇಳಿದ್ದಾರೆ. ಇದೇ ವೇಳೆ ಅವರು ಮುಂದಿನ ಬಾರಿ ನಮಾಜ್ ಗೆ ಅವಕಾಶ ಕೊಡಬೇಡಿ ಎಂದು ಪೇಜಾವರ ಶ್ರೀಗೆ ಮನವಿ ಮಾಡಿಕೊಂಡರು.
ಪೇಜಾವರ ಶ್ರೀಗಳು ಹಿಂದುತ್ವಕ್ಕಾಗಿ ಹೋರಾಟವೇ ನಡೆಸಿಲ್ಲವೇ ?
ಜೂನ್ 23 ರಂದು ಶ್ರೀ ಕೃಷ್ಣ ಮಠದಲ್ಲಿ ನಡೆದಿದ್ದ ಇಫ್ತಾರ್ ಕೂಟಕ್ಕೆ ಶ್ರೀ ರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ವಿರೋಧ ವ್ಯಕ್ತಪಡಿಸಿದ್ದರು. ಜತೆಗೆ ಪೇಜಾವರ ಶ್ರೀ ನಡೆಯನ್ನು ಖಂಡಿಸಿದ್ದರು. ಈ ವೇಳೆ ಉಗ್ರ ಪ್ರತಿಭಟನೆ ನಡೆಸಲು ಶ್ರೀರಾಮಸೇನೆ ನಿರ್ಧರಿಸಿತ್ತು.
ಇದೀಗ ಉಗ್ರ ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿರುವ ಶ್ರೀರಾಮಸೇನೆ ಶಾಂತಿಯುತ ಪ್ರತಿಭಟನೆಗೆ ಮುಂದಾಗಿದೆ.
ಗೋ ಮೂತ್ರದಿಂದ ಮಠದ ಶುದ್ದೀಕರಣ ನಡೆಯಬೇಕು - ಹಿಂದೂ ಜನಜಾಗೃತಿ ಸಮಿತಿ
ಇನ್ನು ಕೃಷ್ಣ ಮಠದಲ್ಲಿ ಇಪ್ತಾರ್ ಕೂಟ ನಡೆದಿರುವು ಮತ್ತು ಗೋ ಭಕ್ಷಕರಿಗೆ ಕೃಷ್ಣ ಮಠಕ್ಕೆ ಪ್ರವೇಶ ನೀಡಿರುವುದು ತಪ್ಪು ಎಂದು ಹಿಂದೂ ಜನಜಾಗೃತಿ ವೇದಿಕೆ ಹೇಳಿದೆ.
"ಪೇಜಾವರ ಶ್ರೀಗಳು ಹಿಂದೂಗಳ ಕ್ಷಮೆ ಕೇಳಬೇಕು. ಗೋ ಮೂತ್ರದಿಂದ ಮಠದ ಶುದ್ದೀಕರಣ ನಡೆಯಬೇಕು," ಎಂದು ಹೇಳಿರುವ ಜನಜಾಗೃತಿ ವೇದಿಕೆ ಶ್ರೀರಾಮ ಸೇನೆಯ ಪ್ರತಿಭಟನೆಗೆ ನಮ್ಮ ಬೆಂಬಲವಿದೆ ಎಂದು ಹೇಳಿದೆ.
"ಮಠದ ಶುದ್ದೀಕರಣ ನಡೆಯದಿದ್ದರೆ ನಮ್ಮಮುಂದಿನ ನಡೆಯ ಬಗ್ಗೆ ಚರ್ಚಿಸಲಾಗುವುದು," ಎಂದು ಸುದ್ದಿಗೋಷ್ಟಿಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯ್ ವಿಜಯ್ ಹೇಳಿಕೆ ನೀಡಿದ್ದಾರೆ.