ಆಗಸ್ಟ್ 27ಕ್ಕೆ ಕೊಲ್ಲೂರು ದೇಗುಲಕ್ಕೆ ವಿಕ್ರಮ ಸಿಂಘೆ ಆಗಮನ
ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ನಾಳೆ ಕೊಲ್ಲೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ರಾನಿಲ್ ವಿಕ್ರಮಸಿಂಗೆ ಇಂದು ಕೊಲ್ಲೂರಿಗೆ ಬರಬೇಕಾಗಿತ್ತು . ಆದರೆ ಭದ್ರತೆಯ ಕಾರಣಗಳಿಂದಾಗಿ ಅದನ್ನು ನಾಳೆಗೆ ಮುಂದೂಡಲಾಗಿದೆ.
ಉಡುಪಿ, ಆಗಸ್ಟ್ 26: ಇದೇ ತಿಂಗಳ 26ರಂದು (ಶನಿವಾರ) ಕೊಲ್ಲೂರಿನ ದೇಗುಲಕ್ಕೆ ಭೇಟಿ ನೀಡಬೇಕಿದ್ದ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರ ಭೇಟಿ ಒಂದು ದಿನದ ಮಟ್ಟಿಗೆ ಮುಂದೂಡಿದ್ದು, ಅವರು ಆಗಸ್ಟ್ 27ರಂದು ದೇಗುಲಕ್ಕೆ ಭೇಟಿ ನೀಡಿ ಮೂಕಾಂಬಿಕೆಯ ದರ್ಶನ ಮಾಡಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಅವರ ಪ್ರಯಾಣ ಒಂದು ದಿನದ ಮಟ್ಟಿಗೆ ಮುಂದೂಡಲಾಗಿತ್ತೆಂದು ಹೇಳಲಾಗಿದೆ.
ಶನಿವಾರ ಕೊಲ್ಲೂರಿಗೆ ಶ್ರೀಲಂಕಾ ಪ್ರಧಾನಿ ಭೇಟಿ
ನಾಳೆ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಲಿರುವ ಅವರು ಬಳಿಕ ಕಾರಿನ ಮೂಲಕ ಕೊಲ್ಲೂರು ಕ್ಷೇತ್ರಕ್ಕೆ ತಲುಪಲಿದ್ದಾರೆ. ಅಲ್ಲಿ ದೇವಿ ಮೂಕಾಂಬಿಕೆಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಲಿರುವ ವಿಕ್ರಮ್ ಸಿಂಘೆ ಬೆಳಿಗ್ಗೆ 11.15 ರಿಂದ 1 ಗಂಟೆಯವರೆಗೆ ದೇವಸ್ಥಾನದಲ್ಲಿ ನಡೆಯಲಿರುವ ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಪರಾಹ್ನ 1.30 ಕ್ಕೆ ಮತ್ತೆ ಬೆಂಗಳೂರಿಗೆ ಹೊರಡಲಿದ್ದಾರೆ ಎಂದು ಶ್ರೀಲಂಕಾ ಪ್ರಧಾನಿ ಸಚಿವಾಲಯ ಮಾಹಿತಿ ನೀಡಿದೆ. ಪ್ರಧಾನಿ ಅವರೊಂದಿಗೆ ಶ್ರೀಲಂಕಾದ ಡೆಪ್ಯುಟಿ ಹೈಕಮಿಷನರ್ ವಿ. ಕೃಷ್ಣಮೂರ್ತಿ ಹಾಗೂ ಎರಡೂ ದೇಶಗಳ ಹಿರಿಯ ಅಧಿಕಾರಿಗಳು ಬರಲಿದ್ದಾರೆ.
ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲು ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೇ ಅವರ ಕುಟುಂಬದ ಸದಸ್ಯರು ಈಗಾಗಲೇ ಉಡುಪಿಗೆ ಅಗಮಿಸಿದ್ದಾರೆ. ಅವರು ನಾಳೆ ಮುಂಜಾನೆಯಿಂದಲೇ ಚಂಡಿಕಾ ಹೋಮದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಳ್ಳಲಿದ್ದು, ವಿಕ್ರಮ್ ಸಿಂಘೆ ಅವರು ಪೂರ್ಣಾಹುತಿಯ ಸಮಯಲ್ಲಿ ಬಂದು ಪಾಲ್ಗೊಳ್ಳಲಿದ್ದಾರೆ .
ಶ್ರೀಲಂಕಾ ಪ್ರಧಾನಿಯ ಕೊಲ್ಲೂರು ಭೇಟಿಯ ಹಿನ್ನೆಲೆಯಲ್ಲಿ ಅಭೂತ ಪೂರ್ವ ಭದ್ರತಾ ಕ್ರಮಗಳನ್ನು ಪೋಲಿಸ್ ಹಾಗೂ ಸ್ಥಳೀಯಾಡಳಿತ ಕೈಗೊಂಡಿದೆ. ನಾಳೆ ಮುಂಜಾನೆಯಿಂದ ಕೊಲ್ಲೂರು ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದೆ.