ಪ್ರತಿಕೂಲ ಹವಮಾನ, ಶ್ರೀಲಂಕಾ ಪ್ರಧಾನಿ ಕೊಲ್ಲೂರು ಭೇಟಿ ರದ್ದು
ಉಡುಪಿ, ಆಗಸ್ಟ್ 27: ಅಂದುಕೊಂಡಂತೆ ನಡೆದಿದ್ದರೆ ಶ್ರೀಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೇ ಇಷ್ಟೊತ್ತಿಗಾಗಲೇ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದ ಅವರ ಬಹುನಿರೀಕ್ಷಿತ ಭೇಟಿಯ ಕಾರ್ಯಕ್ರಮ ರದ್ದಾಗಿದೆ.
ಆಗಸ್ಟ್ 27ಕ್ಕೆ ಕೊಲ್ಲೂರು ದೇಗುಲಕ್ಕೆ ವಿಕ್ರಮ ಸಿಂಘೆ ಆಗಮನ
ಇಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ರಾನಿಲ್ ವಿಕ್ರಮಸಿಂಘೇ ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಉಡುಪಿಗೆ ಆಗಮಿಸಬೇಕಾಗಿತ್ತು. ಆದರೆ ಪ್ರತಿಕೂಲ ಹವಮಾನದಿಂದ ಕೊನೆ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ. ಹೀಗಾಗಿ ಅವರು ಉಡುಪಿಗೆ ಆಗಮಿಸಿಲ್ಲ.
ಭೇಟಿಗೆ ಸಜ್ಜಾಗಿತ್ತು ಉಡುಪಿ
ಶ್ರೀಲಂಕಾ ಪ್ರಧಾನಿ ವಿಕ್ರಮ್ ಸಿಂಘೇ ಅವರ ಕೊಲ್ಲೂರು ಮೂಕಾಂಬಿಕ ದೇವಾಲಯದ ಇಂದಿನ ಕಾರ್ಯಕ್ರಮಕ್ಕೆ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ ಸಕಲ ಸಿದ್ದತೆಗಳನ್ನು ಮಾಡಿತ್ತು.
ಶಿರೂರು ಹೆಲಿಪ್ಯಾಡ್ ಗೆ ಬರಬೇಕಾಗಿತ್ತು
ಶಿರೂರಿನಲ್ಲಿ ಹೆಲಿಪ್ಯಾಡಿನಲ್ಲಿ ಸುರಕ್ಷತೆಯೊಂದಿಗೆ ಬೇಕಾದ ಸಕಲ ಸಿದ್ದತೆಗಳನ್ನು ಮಾಡಲಾಗಿತ್ತು. ದೇವಿ ಮೂಕಾಂಬಿಕೆಗೆ ವಿಶೇಷ ಪೂಜೆ ನೆರವೇರಿಸಿ ಪ್ರಸಾದ ಸ್ವೀಕರಿಸಲಿರುವ ವಿಕ್ರಮ್ ಸಿಂಘೇ ದೇವಸ್ಥಾನದಲ್ಲಿ ನಡೆಯಲಿರುವ ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳಲಿದ್ದರು.
ಸಾರ್ವಜನಿಕರ ಪ್ರವೇಶ ನಿಷೇಧ
ವಿದೇಶದ ಪ್ರಧಾನಿಯೋರ್ವರು ಚಂಡಿಕಾ ಹೋಮದಲ್ಲಿ ಪಾಲ್ಗೊಳ್ಳುವುದು ಇದೇ ಮೊದಲ ಬಾರಿಯಾಗಿದ್ದರಿಂದ ದೇವಸ್ಥಾನ ಆಡಳಿತ ಮಂಡಳಿ ಸಾಕಷ್ಟು ಸಿದ್ದತೆಗಳನ್ನು ಮಾಡಿತ್ತು. ಮುಂಜಾನೆಯಿಂದ ಕೊಲ್ಲೂರು ದೇವಾಲಯಕ್ಕೆ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿತ್ತು.
ಶಿರೂರಿನಲ್ಲಿ ಇಳಿಯದ ಹೆಲಿಕಾಪ್ಟರ್
ಕರಾವಳಿಯಲ್ಲಿ ಕಳೆದ 3 ದಿನಗಳಿಂದ ಭಾರಿ ಮಳೆ ಸುರಿಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೇ ಅವರ ಹೆಲಿಕಾಪ್ಟರ್ ಶಿರೂರಿನಲ್ಲಿ ಇಳಿಯಲು ಅಸಾಧ್ಯವಾದುದರಿಂದ ಕೊನೆಯ ಕ್ಷಣದಲ್ಲಿ ಪ್ರವಾಸ ರದ್ದಾಗಿದೆ.
ರಾನಿಲ್ ವಿಕ್ರಮಸಿಂಘೇ ಶನಿವಾರ ಕೊಲ್ಲೂರಿಗೆ ಬರಬೇಕಾಗಿತ್ತು. ಆದರೆ ಭದ್ರತೆಯ ಕಾರಣ ಅದನ್ನು ಮುಂದೂಡಲಾಗಿತ್ತು. ಆದರೆ ಇಂದು ಕೂಡ ಸಾಧ್ಯವಾಗದಿರುವುದರಿಂದ ಮುಂದೆ ಯಾವತ್ತು ಬರುತ್ತಾರೋ ಗೊತ್ತಿಲ್ಲ.