ಜ್ಯೋತಿಷಿ ಸಲಹೆಯಂತೆ ಕೊಲ್ಲೂರಿನಲ್ಲಿ ಶ್ರೀಲಂಕಾ ಪ್ರಧಾನಿ ವಿಶೇಷ ಪೂಜೆ!
ಉಡುಪಿ, ಜುಲೈ 26 : ದಕ್ಷಿಣ ಭಾರತದ ಶಕ್ತಿ ಕೇಂದ್ರ ಎಂದೇ ಗುರುತಿಸಲಾಗುವ ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕಾ ದೇವಾಲಯಕ್ಕೆ ಶುಕ್ರವಾರ ಶ್ರೀಲಂಕಾದ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಹರಕೆಯಂತೆ ರನಿಲ್ ವಿಕ್ರಮ ಸಿಂಘೆ ಆವರು ನವಚಂಡಿಕಾ ಯಾಗದಲ್ಲಿ ಪೂರ್ಣಾಹುತಿ ಸಲ್ಲಿಸಿದರು.
"ನನ್ನ ದೇಶದಲ್ಲಿ ಅಶಾಂತಿ ದೂರವಾಗಲಿ, ಮುಂದಿನ ಚುನಾವಣೆಯಲ್ಲಿ ನನಗೆ ಗೆಲುವಾಗಲಿ" ಎಂದು ಮೂಕಾಂಬಿಕೆಯ ಆಶೀರ್ವಾದ ಕೋರಿದರು. ವಿಶೇಷ ವಿಮಾನದ ಮೂಲಕ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಶ್ರೀಲಂಕಾ ಪ್ರಧಾನಿ ಅವರು ಉಡುಪಿ, ಕೊಲ್ಲೂರು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ವೈಪರೀತ್ಯದ ಕಾರಣ ರಸ್ತೆ ಮಾರ್ಗವಾಗಿ ಶ್ರೀಕ್ಷೇತ್ರ ಕೊಲ್ಲೂರಿಗೆ ತಲುಪಿದರು.
ಯೇಸುದಾಸ್ ರಿಂದ ಕೊಲ್ಲೂರಿನಲ್ಲಿ ಚಂಡಿಕಾ ಹೋಮ, ಜನ್ಮ ದಿನಾಚರಣೆ
ಶ್ರೀಲಂಕಾದ ಪ್ರಸಕ್ತ ರಾಜಕೀಯ ಮತ್ತು ಸಾಮಾಜಿಕ ಸಮಸ್ಯೆ ಹಿನ್ನೆಲೆಯಲ್ಲಿ ಅವರ ಭೇಟಿ ಕುತೂಹಲ ಕೆರಳಿಸಿತ್ತು. ಲಂಕಾ ಪ್ರಧಾನಿ ಕೊಲ್ಲೂರು ಭೇಟಿಯನ್ನು ಇದೇ ಕಾರಣವಾಗಿ ರಹಸ್ಯವಾಗಿಟ್ಟಿದ್ದರು. ಮಾಧ್ಯಮವನ್ನು ಹತ್ತಿರವೂ ಸೇರಿಸದೆ ತನ್ನ ಭೇಟಿಯನ್ನು ಖಾಸಗಿಯಾಗಿ ಇರಿಸಿದ್ದರು.
ಪತ್ನಿ ಸಮೇತರಾಗಿ ಬಂದ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮ ಸಿಂಘೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ಎಲ್ಲಾ ಬಾಗಿಲು ಮುಚ್ಚಿಸಲಾಗಿತ್ತು. ಶುಕ್ರವಾರ ಮುಂಜಾನೆಯಿಂದಲೇ ಭಕ್ತರ ಪ್ರವೇಶ ನಿಷೇಧಿಸಲಾಗಿತ್ತು. ಅಂಗಡಿ- ಮುಂಗಟ್ಟು ಮುಚ್ಚಲಾಗಿತ್ತು.
ಕೊಲ್ಲೂರು ಮುಕಾಂಬಿಕೆಗೆ ಮಂಗಳಾರತಿ ಬೆಳಗಿದ ಪ್ರಣಬ್ ಮುಖರ್ಜಿ
ಅರ್ಚಕರು ಹಾಗೂ ಜಿಲ್ಲಾಡಳಿತದ ಪ್ರಮುಖರನ್ನು ಹೊರತುಪಡಿಸಿ ಯಾರನ್ನೂ ದೇವಾಲಯದೊಳಗೆ ಬಿಡಲಿಲ್ಲ. ಸುಮಾರು ಒಂದು ಗಂಟೆಗಳ ಕಾಲ ಪೂಜೆ ಹಾಗೂ ಹೋಮದ ಪೂರ್ಣಾಹುತಿಯಲ್ಲಿ ಲಂಕಾ ಪ್ರಧಾನಿ ತೊಡಗಿಸಿಕೊಂಡಿದ್ದರು.
ರನಿಲ್ ವಿಕ್ರಮ ಸಿಂಘೆ ಕೊಲ್ಲೂರು ದೇವಾಲಯಕ್ಕೆ ಭೇಟಿ ನೀಡುತ್ತಿರುವುದು ಇದು ಎರಡನೇ ಬಾರಿ. ಒಂದೂವರೆ ವರ್ಷದ ಹಿಂದೆ ದೇಶದಲ್ಲಿ ರಾಜಕೀಯ ಸಂಘರ್ಷ ಏರ್ಪಟ್ಟಾಗಲೂ ಕೊಲ್ಲೂರಮ್ಮನ ಶರಣು ಬಂದಿದ್ದರು. ಪ್ರಧಾನಿಗಳ ಪತ್ನಿ ಮೈತ್ರಿ ತಮಿಳು ಮೂಲದವರಾಗಿದ್ದು, ಮೂಕಾಂಬಿಕೆ ದೇವಿಯ ಭಕ್ತೆ ಎನ್ನಲಾಗಿದೆ.
ಈಚೆಗೆ ಶ್ರೀಲಂಕಾದಲ್ಲಿ ಉಗ್ರರ ಕಾಟ ಹೆಚ್ಚಾಗಿದ್ದು, ದೇಶದಲ್ಲಿ ಶಾಂತಿ ನೆಲೆಸಲಿ ಮತ್ತು ತನ್ನ ರಾಜಕೀಯ ಭವಿಷ್ಯ ಏಳಿಗೆ ಕಾಣಲಿ ಎಂದು ಪ್ರಾರ್ಥಿಸಿದರು. ಸದ್ಯದಲ್ಲೇ ಶ್ರೀಲಂಕಾ ಚುನಾವಣೆ ನಡೆಯಲಿದ್ದು, ಅವರ ಈ ಭೇಟಿ ಮಹತ್ವ ಪಡೆದುಕೊಂಡಿದೆ.
ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಿಂದ ರಸ್ತೆ ಮಾರ್ಗವಾಗಿಯೇ ಲಂಕಾ ಪ್ರಧಾನಿ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕೇರಳದ ಜ್ಯೋತಿಷಿಯೊಬ್ಬರ ಸಲಹೆಯ ಮೇರೆಗೆ ರನಿಲ್ ವಿಕ್ರಮ ಸಿಂಘೆ ಕೊಲ್ಲೂರಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ. ಕೇರಳದ ಕುಮಾರಮಂಗಲ ದೇವಸ್ಥಾನ ಶನಿವಾರ ಭೇಟಿ ನೀಡಲಿರುವ ರನಿಲ್ ವಿಕ್ರಮ ಸಿಂಘೆ, ಅಲ್ಲಿ ಕೂಡ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಆ ನಂತರ ಶ್ರೀಲಂಕಾ ಗೆ ವಾಪಾಸಾಗಲಿದ್ದಾರೆ.