ಜನ್ಮಾಷ್ಟಮಿ ಆಚರಣೆ: ಉಡುಪಿಯಲ್ಲಿ ಕೃಷ್ಣನ ಭಕ್ತರು ಹೈರಾಣ
ಉಡುಪಿ, ಸೆ 15: ಏಕಾದಶಿ ಉಪವಾಸ ಆಚರಣೆಯಲ್ಲೂ ಈ ಹಿಂದೆ ಹಲವು ಬಾರಿ ಉಡುಪಿ ಅಷ್ಟಮಠಗಳಲ್ಲಿ ಭಿನ್ನಮತ ತೋರಿದ್ದವು. ಈಗ ಈ ಬಾರಿಯ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯಲ್ಲೂ ಅಷ್ಟಮಠಗಳಲ್ಲಿ ಏಕತೆ ಮೂಡದೇ ಇರುವುದು ಭಕ್ತರಲ್ಲಿ ಅಸಮಾಧಾನ ತಂದಿದೆ.
2014ರ ಸೌರ ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ಪ್ರಮುಖ ಘಟ್ಟ 'ಅರ್ಘ್ಯಪ್ರಧಾನ ಧಾರ್ಮಿಕ ವಿಧಿವಿದಾನ' ಕಾರ್ಯಕ್ರಮ ಈ ಬಾರಿ ಉಡುಪಿಯಲ್ಲಿ ಸೋಮವಾರ (ಸೆ15) ಮತ್ತು ಮಂಗಳವಾರ (ಸೆ 16) ದಂದು ಬೇರೆ ಬೇರೆ ದಿನಗಳಲ್ಲಿ ನಡೆಯಲಿದೆ. (ಉಡುಪಿ ಅಷ್ಟ ಮಠಗಳ ಪೀಠಾಧಿಪತಿಗಳು ಯಾರು)
ನಾಲ್ಕು ಮಠಗಳು ಸೋಮವಾರ ಜನ್ಮಾಷ್ಟಮಿ ಆಚರಿಸಿದರೆ, ಇನ್ನು ನಾಲ್ಕು ಮಠಗಳು ಮಂಗಳವಾರ ಜನ್ಮಾಷ್ಟಮಿ ಆಚರಿಸಲಿದೆ. ಪರ್ಯಾಯ ಕಾಣಿಯೂರು ಮಠದ ಜೊತೆಗೆ ಶಿರೂರು, ಸೋದೆ ಮತ್ತು ಕೃಷ್ಣಾಪುರ ಮಠ ಮಂಗಳವಾರ ಅರ್ಘ್ಯಪ್ರಧಾನ ನಡೆಸಿದರೆ, ಪೇಜಾವರ, ಅದಮಾರು, ಪುತ್ತಿಗೆ ಮತ್ತು ಫಲಿಮಾರು ಮಠಗಳು ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಿಕೊಳ್ಳಲಿದ್ದಾರೆ.
ಪರ್ಯಾಯ ಕಾಣಿಯೂರು ಮಠದಿಂದ ಮಂಗಳವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಬುಧವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಮಂಗಳವಾರ ಮಧ್ಯರಾತ್ರಿ 12.36ರ ಚಂದ್ರೋದಯದ ಸಮಯದಲ್ಲಿ ಶ್ರೀಕೃಷ್ಣನಿಗೆ ಅರ್ಘ್ಯಪ್ರಧಾನ ನಡೆಯಲಿದೆ. ಮರುದಿನ ಶ್ರೀಕೃಷ್ಣ ಮತ್ತು ಪ್ರಾಣದೇವರಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಿದ ನಂತರ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ಇದಾದ ನಂತರ ವೈಭವದ ವಿಟ್ಲಪಿಂಡಿ ಮತ್ತು ಮೊಸರು ಕುಡಿಕೆ ಉತ್ಸವ ಮಧ್ಯಾಹ್ನ ಮೂರು ಗಂಟೆಯ ನಂತರ ರಥಬೀದಿಯಲ್ಲಿ ಆರಂಭವಾಗಲಿದೆ. ಈ ಬಾರಿ ಉತ್ಸವದಲ್ಲಿ ಪಾಲ್ಗೊಳ್ಳುವ ಎಲ್ಲಾ ಭಕ್ತರಿಗೂ ಚಕ್ಕುಲಿ, ಉಂಡೆ ಪ್ರಸಾದ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಪರ್ಯಾಯ ಕಾಣಿಯೂರು ಮಠದ ಅಧಿಕಾರಿಗಳು 'ಒನ್ ಇಂಡಿಯಾ'ಗೆ ತಿಳಿಸಿದ್ದಾರೆ.
ಬೇರೆ ಬೇರೆ ಆಚರಣೆಗೆ ಕಾರಣವೇನು ಮತ್ತು ಈ ಬಾರಿಯ ಜನ್ಮಾಷ್ಟಮಿಯ ವಿಶೇಷವೇನು?
ಗೊಂದಲದಲ್ಲಿ ಭಕ್ತರು
ಸಾಮಾನ್ಯವಾಗಿ ಉಡುಪಿ ಮತ್ತು ಆಸುಪಾಸಿನ ಭಕ್ತರು ಏಕಾದಶಿ ಮತ್ತು ಜನ್ಮಾಷ್ಠಮಿ ಆಚರಣೆ ಪರ್ಯಾಯ ಮಠದಲ್ಲಿ ಆಚರಿಸುವ ದಿನದಂದೇ ಆಚರಿಸಿಕೊಳ್ಳುವುದು ವಾಡಿಕೆ. ಈ ಬಾರಿ ಅಷ್ಠಮಠಗಳು ಎರಡು ಬೇರೆ ಬೇರೆ ದಿನಗಳಲ್ಲಿ ಆಚರಿಸಿಕೊಳ್ಳುತ್ತಿರುವುದು ಭಕ್ತರನ್ನು ಗೊಂದಲಕ್ಕೀಡು ಮಾಡಿದೆ. (ಸಂಗ್ರಹ ಚಿತ್ರ)
ದೇಶಾದ್ಯಂತ ಆಗಸ್ಟ್ ತಿಂಗಳಲ್ಲಿ ಆಚರಿಸಲಾಗಿತ್ತು
ದೇಶಾದ್ಯಂತ ಉಡುಪಿ ಹೊರತು ಪಡಿಸಿ ದ್ವಾರಕಾ, ಪಂಡರಾಪುರ, ಗುರುವಾಯೂರು, ದೆಹಲಿ ಸೇರಿದಂತೆ ಚಾಂದ್ರಮಾನ ಪಂಚಾಂಗದಂತೆ ಆಗಸ್ಟ್ 17ರಂದು ಜನ್ಮಾಷ್ಠಮಿ ಆಚರಿಸಲಾಗಿತ್ತು. (ಸಂಗ್ರಹ ಚಿತ್ರ)
ಜನ್ಮಾಷ್ಠಮಿ ಗೊಂದಲವೇಕೆ?
ಜಗದೊಡೆಯ ಶ್ರೀಕೃಷ್ಣನ ಜನ್ಮ ನಕ್ಷತ್ರವಾದ ರೋಹಿಣಿ ನಕ್ಷತ್ರ ಸೋಮವಾರ ಮತ್ತು ಮಂಗಳವಾರ ಎರಡೂ ದಿನಗಳಲ್ಲಿ ಗೋಚರಿಸುವುದು ಈ ಗೊಂದಲಕ್ಕೆ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಾಣಿಸುವ ವಿಚಾರ. ಆದರೆ ಮಠಗಳ ನಡುವಣ ಸ್ವಯಂಪ್ರತಿಷ್ಠೆಯೇ ಈ ಗೊಂದಲಕ್ಕೆ ಪ್ರಮುಖ ಕಾರಣ ಇರಬಹುದೇ ಎನ್ನುವುದು ಭಕ್ತರಲ್ಲಿ ಕಾಡುತ್ತಿರುವ ಸಂಶಯ. (ಸಂಗ್ರಹ ಚಿತ್ರ)
ಏಕಾದಶಿ ಮತ್ತು ಮುದ್ರಾಧಾರಣೆ
ಅನ್ನಬ್ರಹ್ಮ ಕ್ಷೇತ್ರವೆಂದೇ ಹೆಸರಾದ ಉಡುಪಿಯಲ್ಲಿ, ಏಕಾದಶಿ ಮತ್ತು ತಪ್ತ ಮುದ್ರಾಧಾರಣೆ ವಿಚಾರದಲ್ಲೂ ಹಲವು ಬಾರಿ ಈ ಹಿಂದೆ ಗೊಂದಲ ಉಂಟಾಗಿತ್ತು. ಅಷ್ಠಮಠಗಳ ದ್ವಂದ್ವ ನೀತಿ ಭಕ್ತರನ್ನು ಗೊಂದಲಕ್ಕೀಡು ಮಾಡಿರುವ ಉದಾಹರಣೆಗಳೂ ಇವೆ. ಒಂದಲ್ಲಾ ಎರಡಲ್ಲಾ.. (ಸಂಗ್ರಹ ಚಿತ್ರ)
ಪರ್ಯಾಯ ಮಠದಿಂದ ಈ ಬಾರಿಯ ಆಚರಣೆ ಹೇಗೆ
ಈ ಬಾರಿಯ ಜನ್ಮಾಷ್ಠಮಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಪರ್ಯಾಯ ಕಾಣಿಯೂರು ಮಠ ನಿರ್ಧರಿಸಿದೆ. ಮುಂಬೈನಿಂದ 'ಗೋವಿಂದ ಅಲಾರೆ' ತಂಡದಿದ ಮೊಸರು ಕುಡಿಕೆ ಕಾರ್ಯಕ್ರಮ ನಡೆಯಲಿದೆ. ಬರುವ ಭಕ್ತಾದಿಗಳಿಗೆ ಸಾಧ್ಯವಾದಷ್ಟು ಮಟ್ಟಿಗೆ ಪ್ರಸಾದ ವ್ಯವಸ್ಥೆ ಮಾಡಲಾಗುವುದು. ಎಂದು ಪರ್ಯಾಯ ಮಠದ ಅಧಿಕಾರಿಗಳು ತಿಳಿಸಿದ್ದಾರೆ. (ಸಂಗ್ರಹ ಚಿತ್ರ)