ಮತ್ತೆ ಗೊಂದಲ: ಉಡುಪಿಯಲ್ಲಿ ಎರಡೆರಡು ಕೃಷ್ಣ ಜನ್ಮಾಷ್ಟಮಿ
ಉಡುಪಿ, ಆಗಸ್ಟ್ 12: ಏಕಾದಶಿ, ಕೃಷ್ಣ ಜನ್ಮಾಷ್ಟಮಿ ಆಚರಣೆಯ ವಿಚಾರದಲ್ಲಿ ಉಡುಪಿ ಅಷ್ಠ ಮಠದ ಮತ್ತು ಮಠದ ಭಕ್ತರ ಗೊಂದಲ ಮತ್ತು ಭಿನ್ನಾಭಿಪ್ರಾಯ ಮತ್ತೆ ಮುಂದುವರಿದಿದೆ.
ಆಗಸ್ಟ್ 25ರ ಬದಲಾಗಿ 24 ಮತ್ತು 25ರಂದು ಕೃಷ್ಣಾಷ್ಟಮಿ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು ಆಗಸ್ಟ್ 26ರಂದು ವಿಟ್ಲಪಿಂಡಿ ಉತ್ಸವ ನೆರವೇರಲಿದೆ ಎಂದು ಪರ್ಯಾಯ ಮಠದ ಪ್ರಕಟಣೆ ತಿಳಿಸಿದೆ. (ಉಡುಪಿ ಜಿಲ್ಲಾಧಿಕಾರಿ ವೆಂಕಟೇಶ್ ಪರಿಚಯ)
ಧರ್ಮಶಾಸ್ತ್ರಗಳಲ್ಲಿ ಗೊಂದಲ, ಟಿಪ್ಪಣಿಕಾರರು ಬೇರೆ ಬೇರೆ ರೀತಿಯಾಗಿ ವ್ಯಾಖ್ಯಾನಿಸುತ್ತಿರುವುದರಿಂದ ಮತ್ತು ವಿಷ್ಣುತೀರ್ಥರ ವಾಕ್ಯ, ಇವುಗಳನ್ನೆಲ್ಲಾ ಪರಿಶೀಲಿಸಿ ಎರಡು ದಿನ ಜನ್ಮಾಷ್ಟಮಿ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವೇಶತೀರ್ಥ ಶ್ರೀಗಳು ಹೇಳಿದ್ದಾರೆ.
ಯಾವುದೇ ಮಠದ ಭಕ್ತರನ್ನು ಸಂತುಷ್ಟಗೊಳಿಸಲು ಈ ನಿರ್ಧಾರ ತೆಗೆದುಕೊಂಡಿಲ್ಲ. ಇದೇ ನಮ್ಮ ಸಂಕಲ್ಪ, ಇದರಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ಪೇಜಾವರ ಶ್ರೀಗಳು ಸ್ಪಷ್ಟ ಪಡಿಸಿದ್ದಾರೆ.
ಕೃಷ್ಣಮಠದಲ್ಲಿ ಎರಡು ದಿನವೂ ಮಹಾಪೂಜೆಯ ನಂತರ ಅರ್ಘ್ಯ ಪ್ರಧಾನ ಮಾಡಲಾಗುವುದು, ಎಲ್ಲಾ ಭಕ್ತರು ಮನಸ್ಸಿನಲ್ಲಿ ಯಾವುದೇ ಗೊಂದಲಕ್ಕೊಳಗಾಗದೇ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಕೃಷ್ಣ ಮುಖ್ಯಪ್ರಾಣನ ಅನುಗ್ರಹಕ್ಕೆ ಪಾತ್ರರಾಗಲಿ ಎಂದು ಶ್ರೀಗಳು ಹೇಳಿದ್ದಾರೆ.
ಎರಡು ದಿನದಲ್ಲಿ ಭಕ್ತರು ತಮಗೆ ಇಷ್ಟಕಂಡ ದಿನದಂದು ಬಂದು ಅರ್ಘ್ಯ ಪ್ರಧಾನ ಮಾಡಲು ಅವಕಾಶ ನೀಡಲಾಗುವುದು. ಎಲ್ಲಾ ಭಕ್ತರು ಸಹಕರಿಸಬೇಕೆಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು ಭಕ್ತರಲ್ಲಿ ಮನವಿ ಮಾಡಿದ್ದಾರೆ.