ಚಂದ್ರಗ್ರಹಣ: ಉಡುಪಿ, ರಾಯಚೂರಿನ ದೇವಸ್ಥಾನಗಳಲ್ಲಿ ರಾತ್ರಿ ವಿಶೇಷ ಪೂಜೆ
ಉಡುಪಿ, ಜುಲೈ.27: ಶ್ರೀ ಕೃಷ್ಣ ಮಠದಲ್ಲೂ ಗ್ರಹಣದ ಪ್ರಯುಕ್ತ ಇಂದು ಶುಕ್ರವಾರ ರಾತ್ರಿ ವಿಶೇಷ ಪೂಜೆ, ಪುನಸ್ಕಾರ ನಡೆಯಲಿದೆ. ಪರ್ಯಾಯ ಪಲಿಮಾರು ಮಠಾಧೀಶರು ದಿನವಿಡೀ ಉಪವಾಸವಿದ್ದು, ದೈನಂದಿನ ಪೂಜೆ ನಡೆಸಲಿದ್ದಾರೆ. ಗ್ರಹಣವಿದ್ದರೂ ಕೃಷ್ಣಮಠ ತೆರೆದಿರುತ್ತದೆ.
ಗ್ರಹಣ ಆರಂಭವಾದ ಕೂಡಲೇ ರಾತ್ರಿ 11.30 ಕ್ಕೆ ಗ್ರಹಣ ಶಾಂತಿ ಹೋಮ ಆರಂಭವಾಗುತ್ತದೆ. ಮಠದಲ್ಲಿ ಮಧ್ಯಾಹ್ನ ಊಟ ಇದೆ, ಆದರೆ ರಾತ್ರಿ ಊಟವಿರುವುದಿಲ್ಲ. ಗ್ರಹಣ ಬಿಟ್ಟ ಸಂದರ್ಭ ಹೋಮಕ್ಕೆ ಪರ್ಯಾಯ ಶ್ರೀಗಳಿಂದ ಪೂರ್ಣಾಹುತಿ ನೆರವೇರಿಸಲಿದ್ದಾರೆ.
ಚಂದ್ರಗ್ರಹಣ: ಮಧ್ಯಾಹ್ನದಿಂದಲೇ ಘಾಟಿ ಸುಬ್ರಮಣ್ಯ ದೇವಾಲಯ ಬಂದ್
ಬಳಿಕ ಕೃಷ್ಣಾರ್ಪಣ ಬಿಡಲಾಗುತ್ತದೆ. "ಗ್ರಹಣ ಅಂದ್ರೆ ಅದೇನೂ ಭಯಪಡುವಂಥದ್ದಲ್ಲ, ಗ್ರಹಣಗಳು ಮುಂದೆ ಬರಬಹುದಾದ ಸೂಚನೆಗಳನ್ನು ನೀಡುತ್ತವೆ. ಗಾಡಿಯಲ್ಲಿ ಪೆಟ್ರೋಲು ಖಾಲಿಯಾದ್ರೆ ಕೆಂಪು ಲೈಟ್ ಬರುತ್ತದೆ. ಇದರರ್ಥ ಪೆಟ್ರೋಲ್ ಅಥವಾ ಆಯಿಲ್ ತುಂಬಿಸಿಕೊಳ್ಳಿ ಅಂತ.
ಗ್ರಹಣಗಳೂ ಕೂಡ ಹೀಗೇನೇ.ನಾವು ಜಾಗೃತರಾಗಿರಬೇಕು ಎಂಬ ಸೂಚನೆ. ನಮ್ಮೊಳಗೆ ಎನರ್ಜಿ ತುಂಬಿಸಿಕೊಳ್ಳಲು ಇದೊಂದು ಸದವಕಾಶ" ಅಂತ ಪರ್ಯಾಯ ಪಲಿಮಾರು ಮಠಾಧೀಶ ವಿದ್ಯಾಧೀಶರು ಪ್ರತಿಕ್ರಿಯೆ ನೀಡಿದ್ದಾರೆ.
ಶ್ರೀ ಸಾಯಿಬಾಬನ ಮೇಲೂ ರಕ್ತಚಂದ್ರಗ್ರಹಣದ ಎಫೆಕ್ಟ್
ರಾತ್ರಿ ಸಂಭವಿಸಲಿರುವ ರಕ್ತಚಂದ್ರಗ್ರಹಣದ ಎಫೆಕ್ಟ್ ಶ್ರೀ ಸಾಯಿಬಾಬನ ಮೇಲೂ ಬಿದ್ದಿದೆ. ಇಂದು ಗುರುಪೂರ್ಣಿಮೆ ನಿಮಿತ್ತ ರಾಯಚೂರಿನ ಮಾವಿನಕೆರೆ ಬಳಿಯ ಸಾಯಿ ಮಂದಿರಕ್ಕೆ ಭಕ್ತರು ದಂಡೋಪಾದಿಯಲ್ಲಿ ದರ್ಶನಕ್ಕೆ ಬರುತ್ತಿದ್ದಾರೆ.
ಗ್ರಹಣ ಇರುವ ಕಾರಣಕ್ಕೆ ಸಂಜೆ ಐದು ಗಂಟೆಗೆಲ್ಲಾ ಸಾಯಿಮಂದಿರದ ಬಾಗಿಲು ಹಾಕಲಿದ್ದಾರೆ. ಹಾಗಾಗಿ ಸಂಜೆಯೊಳಗೆ ಸಾಯಿ ದರ್ಶನವನ್ನ ಪಡೆದುಬಿಡಬೇಕು ಎಂಬ ಆತುರದಲ್ಲಿ ಭಕ್ತರು ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು. ಇನ್ನೂ ಇದೇ ವೇಳೆ ಬೆಳಗಿನಿಂದಲೂ ಸಂಪ್ರದಾಯದಂತೆ ಎಲ್ಲಾ ಪೂಜಾ ಕೈಂಕರ್ಯವನ್ನ ನೆರವೇರಿಸಿ ಸಾಯಿಬಾಬನ ಅಲಂಕಾರವನ್ನೂ ಮಾಡಲಾಗಿದೆ.
ಗ್ರಹಣ ಹಿನ್ನೆಲೆಯಲ್ಲಿ ಕೆಲವು ರಾಶಿಯವರಿಗೆ ಅಶುಭ ಇರುವ ಕಾರಣಕ್ಕೆ ಸಾಯಿ ಮಂದಿರದಲ್ಲಿ ನಾಳೆ ಬೆಳಿಗ್ಗೆ ವಿಶೇಷ ಹೋಮವನ್ನೂ ಮಾಡಲಿಚ್ಚಿಸುವವರು ಮಾಡಿಸಬಹುದಾಗಿದೆ ಎಂದು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಶತಮಾನದ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಯಚೂರಿನ ಸಾಯಿ ಮಂದಿರದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತಿವೆ.
ಹೋಮ-ಹವನ, ರಾಶಿ ಪೂಜೆ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ಇನ್ನು ಸಂಜೆ ಮಹಾಮಂಗಳಾರತಿ ಬಳಿಕ ದೇವರ ದರ್ಶನಕ್ಕೆ ತೆರೆ ಬೀಳಲಿದೆ. ನಾಳೆ ಬೆಳಗ್ಗೆಯವರೆಗೂ ನಗರದ ಸಾಯಿ ಮಂದಿರ, ನಂದೀಶ್ವರ ದೇವಸ್ಥಾನ, ಮಹಾಬಳೇಶ್ವರ ದೇಗುಲ, ವೀರಭದ್ರೇಶ್ವರ ದೇವಸ್ಥಾನ ಸೇರಿದಂತೆ ವಿವಿಧ ದೇಗುಲಗಳ ಬಾಗಿಲು ಮುಚ್ಚಲಿದ್ದಾರೆ. ರಾತ್ರಿ ಚಂದ್ರಗ್ರಹಣದ ಬಳಿಕ ಗ್ರಹಣ ನಂತರದ ಪೂಜಾ ಕಾರ್ಯಗಳು ನಡೆಯಲಿವೆ.