ವರಮಹಾಲಕ್ಷ್ಮೀ ವ್ರತ: ಉಡುಪಿಯಲ್ಲಿ ಮುಗಿಲು ಮುಟ್ಟಿದ ಭಕ್ತಿ
ಉಡುಪಿ, ಆಗಸ್ಟ್.24: ಇಂದು ಶುಕ್ರವಾರ ವರಮಹಾಲಕ್ಷ್ಮೀ ಪ್ರಯುಕ್ತ ಇಲ್ಲಿನ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯಿತು. ಮುಖ್ಯವಾಗಿ ಗೌಡ ಸಾರಸ್ವತ ಸಮುದಾಯದ ಮುತ್ತೈದೆಯರು ಸಾಮೂಹಿಕವಾಗಿ ಪೂಜೆ ,ಮಂತ್ರ ಪಠಣ ಮತ್ತು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.
ಶ್ರಾವಣದ ಎರಡನೇ ಶುಕ್ರವಾರ ಬರುವ ಈ ಹಬ್ಬದ ದಿವಸ ಭಕ್ತರು ಕೇಳಿದ ವರವನ್ನು ಮಹಾಲಕ್ಷ್ಮಿ ನೀಡುತ್ತಾಳೆ ಎಂಬುದು ಭಕ್ತರಲ್ಲಿರುವ ನಂಬಿಕೆ. ಬೆಳಗ್ಗೆ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಭಕ್ತಿ ಮುಗಿಲು ಮುಟ್ಟಿತ್ತು. ಸಾವಿರಾರು ಸುಮಂಗಲಿಯರು ಸೇರಿ ದೇವಸ್ಥಾನದಲ್ಲಿ ಸಾಮೂಹಿಕ ಲಕ್ಷ್ಮೀ ಪೂಜೆ ಮತ್ತು ಚೂಡಿ ಪೂಜೆ ನಡೆಸಿ ಕೃತಾರ್ಥರಾದರು.
ಹಣ ಸ್ಥಿರವಾಗಲು, ಲಕ್ಷ್ಮಿ ಕಟಾಕ್ಷಕ್ಕೆ ಇಲ್ಲಿವೆ ರಹಸ್ಯ ಸೂತ್ರಗಳು
ಈ ವೇಳೆ ದೇವಸ್ಥಾನದಲ್ಲಿ ವಿಶೇಷ ಅಲಂಕಾರವನ್ನೂ ಮಾಡಲಾಗಿತ್ತು. ಬೆಳಗ್ಗೆ ಗಂಗಾಪೂಜೆ ಬಳಿಕ ದೇವರನ್ನು ಪ್ರತಿಷ್ಠಾಪಿಸಲಾಯಿತು. ತದನಂತರ ದೇವರಿಗೆ ಅಲಂಕಾರ ನಡೆದು ಸಾಮೂಹಿಕ ಕುಂಕುಮಾರ್ಚನೆ ಸಂಪನ್ನಗೊಂಡಿತು.
ಈ ವೇಳೆ ಮಹಿಳೆಯರ ಮಂತ್ರ ಪಠಣ ಮತ್ತು ಸ್ತೋತ್ರದ ಹಾಡು ಅನುರಣಗೊಳ್ಳುತ್ತಲೇ ಇತ್ತು. ನೂರಾರು ಸಂಖ್ಯೆಯಲ್ಲಿದ್ದ ಮುತ್ತೈದೆಯರು ತಮಗೆ ದೊರೆತ ಮುತ್ತೈದೆ ಭಾಗ್ಯವನ್ನು ಶಾಶ್ವತವಾಗಿಡು ಎಂದು ಕೇಳಿಕೊಂಡರು.
ವರ್ಷಂಪ್ರತಿ ಈ ದಿವಸ 12 ಗಂಟಿನ ದಾರವನ್ನು ಧಾರಣೆ ಮಾಡುವ ಸಂಪ್ರದಾಯ ಜಿಎಸ್ಬಿ ಸಮುದಾಯದಲ್ಲಿದೆ. ಅಂತೆಯೇ ಹಿಂದಿನ ವರ್ಷದ ದಾರವನ್ನು ವಿಸರ್ಜಿಸಿ ಮುತ್ತೈದೆಯರು ಹೊಸ ದಾರ ಧಾರಣೆ ಮಾಡುವುದು ಈ ದಿನದ ವಿಶೇಷ.