ಗತಿಸಿದ ಅಮ್ಮನ ಪುತ್ಥಳಿ ನಿರ್ಮಿಸಿ ನಿತ್ಯ ಪೂಜೆ ಸಲ್ಲಿಸುತ್ತಿರುವ ಈ ಕುಲಪುತ್ರ!
ಉಡುಪಿ, ಡಿಸೆಂಬರ್ 22: ಹೆತ್ತವರ ಋಣ ತೀರಿಸಲು ಸಾಧ್ಯವೇ ಇಲ್ಲ. ಅಂಥದ್ದರಲ್ಲಿ ಹೆತ್ತವರನ್ನು ವೃದ್ಧಾಶ್ರಮಗಳಿಗೆ ಸೇರಿಸುತ್ತಿರುವ ಮಕ್ಕಳ ಕಥೆಗಳನ್ನು ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಉಡುಪಿ ಜಿಲ್ಲೆಯ ಒಬ್ಬ ನಟ-ನಿರ್ದೇಶಕ, ಕಲಾವಿದನ ಮಾತೃಪ್ರೇಮ ನಿಜಕ್ಕೂ ಶ್ಲಾಘನೀಯ.
ಈ ನಟ-ನಿರ್ದೇಶಕ ತೀರಿಹೋದ ತಮ್ಮ ಅಮ್ಮನನ್ನು ಹೋಲುವ ಮೂರ್ತಿಯನ್ನು ನಿರ್ಮಿಸಿ ಪ್ರತಿನಿತ್ಯ ಅಮ್ಮನ ಸ್ಮರಣೆ ಮಾಡುತ್ತಾರೆ ಎಂದರೆ ನೀವು ನಂಬಲೇಬೇಕಾಗುತ್ತದೆ. ಅಮ್ಮನ ಸವಿ ನೆನಪಿಗಾಗಿ ಆಕೆಯ ಮೂರ್ತಿ ನಿರ್ಮಾಣ ಮಾಡಿ, ಗುಡಿ ಕಟ್ಟಿದ್ದಾರೆ. ದಿನ ನಿತ್ಯ ಪೂಜೆ ಮಾಡಿ ಹೆತ್ತಾಕೆಯ ಆಶೀರ್ವಾದ ಪಡೆಯುತ್ತಿದ್ದಾರೆ.
ಗುರು ಹಾದಿಯಲ್ಲಿ ಶಿಷ್ಯರ ಹೆಜ್ಜೆ; ದಲಿತ ಕೇರಿಗೆ ಪೇಜಾವರ ಶ್ರೀ ಭೇಟಿ
ಹಿರಿಯ ನಟ, ನಿರ್ದೇಶಕ, ನಿರ್ಮಾಪಕ ರಾಜಶೇಖರ ಕೋಟ್ಯಾನ್ ತಮ್ಮ ತಾಯಿ ದಿವಂಗತ ಕಲ್ಯಾಣಿ ಪೂಜಾರ್ತಿ ಅವರ ನೆನಪಿಗಾಗಿ ಹುಟ್ಟೂರು ಉಡುಪಿಯ ಸಾಂತೂರು ಗರಡಿ ಮನೆಯಲ್ಲಿ, ಸುಂದರವಾದ ಗುಡಿ ಕಟ್ಟಿ, ಮೂರ್ತಿ ನಿರ್ಮಿಸಿ ಮಂಗಳಾರತಿ ಬೆಳಗುತ್ತಿದ್ದಾರೆ.
ಅಮ್ಮನ ಸವಿನೆನಪಿಗಾಗಿ ಇವರು ತಮ್ಮ ಮನೆಯ ಪಕ್ಕ ಏಕಶಿಲಾ ಮೂರ್ತಿಯಲ್ಲಿ ಅಮ್ಮನ ಮೂರ್ತಿ ಕೆತ್ತನೆ ಮಾಡಿಸಿದ್ದಾರೆ. ಇವರು ಲಕ್ಷಾಂತರ ರೂ. ಖರ್ಚು ಮಾಡಿ ಈ ಮೂರ್ತಿಯನ್ನು ರಾಜಸ್ಥಾನದಲ್ಲಿ ನಿರ್ಮಿಸಿ ಊರಿಗೆ ತರಿಸಿಕೊಂಡಿದ್ದಾರೆ.
ಈ ಮೂರ್ತಿ ಅಪ್ಪಟ ರಾಜಶೇಖರ ಕೋಟ್ಯಾನ್ ಅವರ ಅಮ್ಮನನ್ನೇ ಹೋಲುತ್ತಿದ್ದು, ಪ್ರತಿನಿತ್ಯ ಇದನ್ನು ನೋಡಿದಾಗ ಸಾಕ್ಷಾತ್ ಅಮ್ಮನನ್ನೇ ನೋಡದಷ್ಟು ಖುಷಿ ಆಗುತ್ತೆ ಎನ್ನುತ್ತಾರೆ ಮಗ ರಾಜಶೇಖರ್.
ಚಿತ್ರನಟ, ಚಾಲೆಂಜಿಗ್ ಸ್ಟಾರ್ ದರ್ಶನ್ ಗೆಳೆಯರಾಗಿರುವ ರಾಜಶೇಖರ್ ತಮ್ಮ ಪ್ರೀತಿಯ ತಾಯಿಯನ್ನು ಇರುವಾಗಲೂ ಚೆನ್ನಾಗಿ ನೋಡಿಕೊಂಡು, ಗತಿಸಿದ ಮೇಲೂ ತಾಯಿ ಕಲ್ಯಾಣಿ ನೆನಪು ನೆನಪಲ್ಲಿ ಚಿರವಾಗಿ ಇರುವಂತೆ ಮಾಡಿ ಊರವರ ಗಮನ ಸೆಳೆದಿದ್ದಾರೆ ಮಾತ್ರವಲ್ಲ, ಹೆತ್ತವರ ನೋಡಿಕೊಳ್ಳದ ಮಕ್ಕಳಿಗೆ ಮಾದರಿಯಾಗಿ ಬದುಕುತ್ತಿದ್ದಾರೆ.
Recommended Video
ನಿಜಕ್ಕೂ ಇವರ ಮಾತೃಪ್ರೇಮ ಮೆಚ್ಚುವಂತಹದ್ದಾಗಿದ್ದು, ಇಂತಹ ಮಕ್ಕಳಿದ್ದರೆ ವೃದ್ಧಾಶ್ರಮಗಳ ಅವಶ್ಯಕತೆಯೇ ಇರುವುದಿಲ್ಲ ಅಲ್ಲವೇ? ಸತ್ತ ನಂತರದ ಮಾತು ಬಿಡಿ, ಬದುಕ್ಕಿದ್ದಾಗಲೂ ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳದ ಮಕ್ಕಳಿಗೆ ಇದೊಂದು ಪಾಠವೂ ಹೌದು, ಪ್ರೇರಣೆಯೂ ಹೌದು.