ಸುವರ್ಣ ತ್ರಿಭುಜ ಬೋಟ್ ಅವಘಡ:ರಹಸ್ಯವಾಗಿ ಉಳಿದ ಕೆಲವು ಪ್ರಶ್ನೆಗಳು
ಉಡುಪಿ, ಮೇ.05:ಉಡುಪಿಯ ಮಲ್ಪೆ ಬಂದರಿನಿಂದ ಏಳು ಮಂದಿ ಮೀನುಗಾರರು ಬೋಟ್ ಸಮೇತ ನಾಪತ್ತೆಯಾಗಿ ನಾಲ್ಕೂವರೆ ತಿಂಗಳ ಬಳಿಕ ಬೋಟ್ ನ ಅವಶೇಷಗಳು ಮೊನ್ನೆ ಪತ್ತೆಯಾಗಿದ್ದವು. ಮೀನುಗಾರರು ಮಾತ್ರ ಇನ್ನೂ ಪತ್ತೆಯಾಗಿಲ್ಲ.ಈ ಪ್ರಕರಣದಲ್ಲಿ ಕೇಂದ್ರ ಸರಕಾರ ಕೆಲ ಮಾಹಿತಿಗಳನ್ನು ಮುಚ್ಚಿಟ್ಟಿತ್ತೇ?. ಮೀನುಗಾರರಿದ್ದ ಬೋಟಿಗೆ ನೌಕಾಸೇನೆಯ ನೌಕೆ ಡಿಕ್ಕಿ ಹೊಡೆದ ವಿಷಯ ಉದ್ದೇಶಪೂರ್ವಕವಾಗಿಯೇ ಮರೆಮಾಚಲಾಗಿತ್ತೇ? ಸದ್ಯ ಈ ಪ್ರಶ್ನೆಗಳು ಕರಾವಳಿಯ ಮೀನುಗಾರರನ್ನು ಕಾಡುತ್ತಿದೆ.
ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನ ಅವಶೇಷಗಳು ನಾಲ್ಕೂವರೆ ತಿಂಗಳ ಬಳಿಕ ಸಿಕ್ಕಿದೆ. ಆದರೆ ಮೀನುಗಾರರ ಪತ್ತೆ ಇನ್ನೂ ಆಗಿಲ್ಲ.ಅವರೆಲ್ಲ ಎಲ್ಲಿಗೆ ಹೋದರು? ಅವರ ಪರಿಸ್ಥಿತಿ ಏನಾಯಿತು ? ಉಹೂಂ ಈ ಕುರಿತು ಇನ್ನೂ ಸ್ಪಷ್ಟ ಮಾಹಿತಿ ದೊರಕಿಲ್ಲ.
ನೌಕಾಪಡೆಯೇ 7 ಮಂದಿ ಮೀನುಗಾರರನ್ನು ಕೊಂದಿದೆ:ಪ್ರಮೋದ್ ಮಧ್ವರಾಜ್
ನಾಲ್ಕು ದಿನದ ಹಿಂದೆ ಮಹಾರಾಷ್ಟ್ರದಲ್ಲಿ ಬೋಟ್ ನ ಅವಶೇಷಗಳು ಪತ್ತೆಯಾಗಿದ್ದವು.ಆಶ್ಚರ್ಯದ ಸಂಗತಿ ಅಂದ್ರೆ ನಾಲ್ಕೂವರೆ ತಿಂಗಳು ಇಡೀ ಕೇಂದ್ರ ಸರಕಾರದ ಪಡೆಗಳು ಹುಡುಕಿದಾಗ ಸಿಗದ ಬೋಟು ಮೊನ್ನೆ ಉಡುಪಿ ಶಾಸಕರು ಹುಡುಕಾಟಕ್ಕೆ ಹೋದ ಎರಡೇ ದಿನದಲ್ಲಿ ಸಿಕ್ಕಿರುವುದು.
ಹೌದು...ಚುನಾವಣೆ ಕಳೆದ ಮೇಲೆ ಉಡುಪಿ ಶಾಸಕ ರಘುಪತಿ ಭಟ್ ಮೀನುಗಾರ ಕುಟುಂಬದವರ ಜೊತೆ ಮತ್ತು ನೌಕಾಸೇನೆಯ ಅಧಿಕಾರಿಗಳ ಜೊತೆ ಶೋಧ ಕಾರ್ಯಕ್ಕೆ ತೆರಳಿದ್ದಾರೆ.ಅವರು ಹೋದ ಎರಡೇ ದಿನದಲ್ಲಿ ನಾಪತ್ತೆಯಾದ ಬೋಟ್ ನ ಅವಶೇಷಗಳು ಸಿಕ್ಕಿವೆ.
ಸಚಿವ ಪ್ರಮೋದ್ ಮಧ್ವರಾಜ್ ಆರೋಪ
ಈ ಬೋಟ್ ರಹಸ್ಯ ಇಷ್ಟಕ್ಕೇ ಮುಗಿಯುವುದಿಲ್ಲ. "ಸುವರ್ಣ ತ್ರಿಭುಜ ಬೋಟ್ ನಾಪತ್ತೆಯಾಗಿದ್ದು ಡಿಸೆಂಬರ್ ಹದಿನೈದನೇ ತಾರೀಖಿಗೆ. ಜನವರಿ ಇಪ್ಪತ್ತೊಂದರಂದೇ ನೌಕಾಸೇನೆಗೆ ಸೇರಿದ ಐಎನ್ ಎಸ್ ಕೊಚ್ಚಿನ್ ನೌಕೆ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದಿದೆ. ಆದರೆ ಡಿಕ್ಕಿ ಹೊಡೆದ ವಿಷಯವನ್ನು ನೌಕಾಸೇನೆ ನಾಲ್ಕು ತಿಂಗಳ ತನಕ ಮುಚ್ಚಿಟ್ಟಿದೆ. ಮೊನ್ನೆ ಚುನಾವಣೆ ಮುಗಿದ ಬಳಿಕ ಬೋಟ್ ನ ಅವಶೇಷ ಸಿಕ್ಕಿರುವ ಬಗ್ಗೆ ನಾಟಕವಾಡುತ್ತಿದೆ" ಎಂದು ಮಾಜಿ ಮೀನುಗಾರಿಕೆ ಸಚಿವ ಪ್ರಮೋದ್ ಮಧ್ವರಾಜ್ ಆರೋಪ ಮಾಡುತ್ತಿದ್ದಾರೆ.
ಬೋಟ್ ಹುಡುಕಾಟ ಮಾಡುವ ನಾಟಕ
ಉಡುಪಿ ಶಾಸಕರು ಐದು ದಿನಗಳ ಹಿಂದೆ ಮೀನುಗಾರ ಕುಟುಂಬದವರ ಜೊತೆ ಸೇರಿ ಬೋಟ್ ಹುಡುಕಾಟ ಮಾಡುವ ನಾಟಕ ಮಾಡಿದ್ದಾರೆ. ಶಾಸಕರು ಹೋದ ಎರಡೇ ದಿನದಲ್ಲಿ ಬೋಟ್ ನ ಅವಶೇಷ ಸಿಕ್ಕಿದೆ.ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಪ್ರಮೋದ್ ,ಚುನಾವಣೆ ಮುಗಿಯುವ ತನಕ ಕೇಂದ್ರ ಸರಕಾರ ಡಿಕ್ಕಿಯಾದ ವಿಷಯವನ್ನು ಮುಚ್ಚಿಟ್ಟಿತ್ತು.ಈ ಸಂಬಂಧ ತಮ್ಮ ಬಳಿ ದಾಖಲೆಗಳಿವೆ ಎಂದಿದ್ದಾರೆ. ಹೀಗಾಗಿ ಕೇಂದ್ರ ಸರಕಾರ ಮೃತ ಮೀನುಗಾರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ.ಪರಿಹಾರ ನೀಡಬೇಕು.ಜೊತೆಗೆ ಅವಘಡಕ್ಕೀಡಾದ ಸುವರ್ಣ ತ್ರಿಭುಜ ಬೋಟ್ ಗೂ ಸಂಪೂರ್ಣ ಪರಿಹಾರ ನೀಡಬೇಕು.ಇದು ತಪ್ಪಿದ್ದಲ್ಲಿ ತಾವು ಸುಪ್ರೀಂ ಕೋರ್ಟ್ ಕದ ತಟ್ಟುವುದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಪೆಯಿಂದ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ಅವಶೇಷ ಪತ್ತೆ
ನ್ಯಾಯಾಂಗ ತನಿಖೆಗೆ ಒಪ್ಪಿಸಿ
ಉಡುಪಿ ಶಾಸಕರು ,ಸಂಸದೆ ಶೋಭಾ ಕರಂದ್ಲಾಜೆ ಮತ್ತು ರಕ್ಷಣಾ ಸಚಿವೆ ಸೇರಿ ಚುನಾವಣೆ ಲಾಭಕ್ಕಾಗಿ ಮೀನುಗಾರರ ಜೀವದ ಜೊತೆ ಚೆಲ್ಲಾಟ ಆಡಿದ್ದಾರೆ.ಮೀನುಗಾರ ಸಮುದಾಯದವನಾಗಿ ನಾನು ಮೀನುಗಾರರ ಪರವಾಗಿ ದನಿ ಎತ್ತುತ್ತೇನೆ.ಇಡೀ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.ಮೃತ ಮೀನುಗಾರ ಕುಟುಂಬಗಳಿಗೆ ತಲಾ ಇಪ್ಪತ್ತೈದು ಲಕ್ಷ ರೂ ಪರಿಹಾರ ನೀಡಬೇಕು.ಇದು ತಪ್ಪಿದ್ದಲ್ಲಿ ಸುಪ್ರೀಂ ಕೋರ್ಟ್ ಗೆ ಹೋಗುವುದಾಗಿ ಪ್ರಮೋದ್ ತಿಳಿಸಿದ್ದಾರೆ.
ಈ ವಿಷಯವನ್ನು ಮುಚ್ಚಿಟ್ಟಿದ್ದೇಕೆ?
ಜೊತೆಗೆ ಮುಖ್ಯಮಂತ್ರಿ ,ರಾಷ್ಟ್ರಪತಿ ,ಮತ್ತು ರಕ್ಷಣಾ ಸಚಿವರಿಗೆ ಶೀಘ್ರ ಪತ್ರ ಬರೆಯುವುದಾಗಿಯೂ ಪ್ರಮೋದ್ ಹೇಳಿದ್ದಾರೆ.ಒಟ್ಟಾರೆ ,ಮೀನುಗಾರಿಕೆಗೆ ತೆರಳಿದ ಬೋಟ್ ಹೇಗೆ ಅವಘಡಕ್ಕೆ ಈಡಾಯಿತು?, ಮೀನುಗಾರರು ಏನಾದರು?, ಐಎನ್ ಎಸ್ ಕೊಚ್ಚಿನ್ ನೌಕೆ ಡಿಕ್ಕಿ ಹೊಡೆದ ವಿಷಯ ಏಕೆ ಮುಚ್ಚಿಡಲಾಯಿತು? ಈ ಎಲ್ಲಾ ಪ್ರಶ್ನೆಗಳೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿವೆ.
ಆಳಸಮುದ್ರದಲ್ಲಿ ಈವರೆಗೂ ಪತ್ತೆಯಾಗದ ಬೋಟ್: ಮೀನುಗಾರರು ಎಲ್ಲಿಗೆ ಹೋದರು?