ಬಾವಿಯಲ್ಲಿ ಬಿದ್ದಿದ್ದ ಹಾವು ರಕ್ಷಿಸಿದ ಗುರುರಾಜ್ ಸನಿಲ್ ನಮ್ಮೂರ ಹೀರೋ
ಉಡುಪಿ, ಮಾರ್ಚ್ 9 : ಅಪಾಯದಲ್ಲಿರುವ ಪ್ರಾಣಿ- ಪಕ್ಷಿಗಳನ್ನು ಜೀವದ ಹಂಗು ತೊರೆದು ಬದುಕಿಸಿದವರ ಹಲವಾರು ನಿದರ್ಶನಗಳು ನಮ್ಮ ಮುಂದಿವೆ. ಜೀವದ ಹಂಗು ತೊರೆದು ವಿಷಪೂರಿತ ಹಾವೊಂದನ್ನು ರಕ್ಷಿಸಿದ ಪ್ರಸಂಗ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ನಗರದ ಕುಕ್ಕೆಹಳ್ಳಿಯಲ್ಲಿರುವ 40 ಅಡಿ ಬಾವಿಯೊಳಗೆ ಸಿಲುಕಿದ್ದ 5 ಅಡಿ ಉದ್ದದ ನಾಗರಹಾವೊಂದನ್ನು ಉರಗತಜ್ಞ ಗುರುರಾಜ ಸನಿಲ್ ಅವರು ರಕ್ಷಿಸಿದ್ದಾರೆ. ನಾಗರ ಹಾವೊಂದು ಆಕಸ್ಮಿಕವಾಗಿ ಬಾವಿಯೊಳಗೆ ಬಿದ್ದಿತ್ತು. ಕಲ್ಲಿನ ನಡುವೆ 15 ದಿನಗಳಿಂದ 5 ಅಡಿ ಉದ್ದದ ಗಂಡು ನಾಗರಹಾವು ಸಿಲುಕಿತ್ತು.
ಮಿಲನಕ್ರಿಯೆ ವೇಳೆ ಒಟ್ಟಾಗಿ ಕಂಡ ಹಾವುಗಳು, ಬೆಚ್ಚಿಬಿದ್ದ ಜನ
ಈ ಬಗ್ಗೆ ಗ್ರಾಮಸ್ಥರು ಉರುಗತಜ್ಞ ಗುರುರಾಜ್ ಸನಿಲ್ ಅವರಿಗೆ ಮಾಹಿತಿ ನೀಡಿದ್ದರು. ಗ್ರಾಮಸ್ಥರಿಂದ ಮಾಹಿತಿ ಪಡೆದ ಗುರುರಾಜ ಸನೀಲ್, ಪ್ರಾಣದ ಹಂಗನ್ನು ತೊರೆದು ಬಾವಿಯೊಳಗೆ ಇಳಿದು, ಹಗ್ಗದ ಸಹಾಯದಿಂದ ನಾಗರಹಾವನ್ನು ತೆಗೆಯಲು ಯತ್ನಿಸಿದರು.
ಹಾವಿನ ರಕ್ಷಣೆ ಸಮಯದಲ್ಲಿ ಹೆಡೆಯೆತ್ತಿ ನಿಂತು, ಗುರುರಾಜ್ ಸನಿಲ್ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆಸುತ್ತಲೇ ಇತ್ತು. ಆದರೂ ಛಲ ಬಿಡದೆ ಹಾವನ್ನು ಬಾವಿಯಿಂದ ಹೊರತೆಗೆದು ಊರ ಮಂದಿ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ಕೋಲಿನ ಸಹಾಯದಿಂದ ಬಾವಿಯಿಂದ ಹಾವನ್ನು ಹೊರತೆಗೆದ ಗುರುರಾಜ್ ಸನಿಲ್, ಕಾಡಿಗೆ ಬಿಟ್ಟಿದ್ದಾರೆ.
ಗುರುರಾಜ್ ಸನಿಲ್ ಅವರ ಈ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ. ಗುರುರಾಜ್ ಅವರು ಬಾವಿಯೊಳಗಿಳಿದು ಹಾವನ್ನು ರಕ್ಷಿಸಿದ್ದನ್ನು ಸ್ಥಳೀಯರೊಬ್ಬರು ಕ್ಯಾಮೆರಾದಲ್ಲಿ ಸರೆ ಹಿಡಿದಿದ್ದರು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದ್ದು, ಅದೀಗ ವೈರಲ್ ಆಗಿದೆ.