ಉಡುಪಿ: ಖ್ಯಾತ ಗಾಯಕಿ ದಿ.ರಂಜನಿ ಹೆಬ್ಬಾರ್ ಪ್ರತಿಮೆ ಅನಾವರಣ
ಉಡುಪಿ, ಸೆಪ್ಟೆಂಬರ್ 10: ಕನ್ನಡನಾಡಿನ ಖ್ಯಾತ ಶಾಸ್ತ್ರೀಯ ಸಂಗೀತ ಗಾಯಕಿ ದಿವಂಗತ ರಂಜನಿ ಹೆಬ್ಬಾರ್ ಅವರ ಪ್ರತಿಮೆಯನ್ನು ಉಡುಪಿಯಲ್ಲಿ ಅನಾವರಣಗೊಳಿಸಲಾಯಿತು.
ಅವರ ಜನ್ಮದಿನದ ಸಂದರ್ಭದಲ್ಲಿ ರಂಜನಿ ಮೆಮೋರಿಯಲ್ ಟ್ರಸ್ಟ್ ಹಮ್ಮಿಕೊಂಡಿರುವ ಸಂಗೀತೋತ್ಸವದಲ್ಲಿ ಪ್ರತಿಮೆ ಅನಾವರಣಗೊಂಡಿತು. ಇಂದ್ರಾಳಿಯ 'ಲತಾಂಗಿ' ಮನೆಯಲ್ಲಿ ಸ್ವಾಮಿ ಸೂರ್ಯಪಾದರು ಪ್ರತಿಮೆ ಅನಾವರಣಗೊಳಿಸಿದರು.
ಕುಂದಾಪುರದ ರಥಶಿಲ್ಪಿ ಲಕ್ಷ್ಮೀ ನಾರಾಯಣಾಚಾರ್ಯರ ಕಲಾ ಬದುಕಿನ ಪಯಣ
ಈ ವೇಳೆ ಚಿಂತಕ ಲಕ್ಷ್ಮೀಶ ತೋಳ್ಪಾಡಿ, ವಸಂತಲಕ್ಷ್ಮೀ ಹೆಬ್ಬಾರ್, ಸಾರಂಗ ಹೆಬ್ಬಾರ್ ಉಪಸ್ಥಿತರಿದ್ದರು. ಪ್ರತಿಮೆ ಅನಾವರಣದ ಬಳಿಕ ಸ್ವಾಮಿ ಸೂರ್ಯಪಾದರಿಂದ ಸತ್ಸಂಗ ನಡೆಯಿತು.
"ದಿ.ರಂಜನಿ ಅನೇಕರಿಗೆ ಸ್ಪೂರ್ತಿಯಾಗಿದ್ದು, ಆಕೆ ಕೇವಲ ನನ್ನ ಮಗಳಲ್ಲ, ಶುದ್ಧ ಸಂಗೀತದ ಅಭಿಮಾನಿಗಳು ಮತ್ತು ಆಕೆಯ ಕಲೆಯನ್ನು ಇಷ್ಟಪಡುವ ಪ್ರತಿಯೊಬ್ಬರ ಮಗಳು, ಈ ಪ್ರತಿಮೆ ಆಕೆಯ ಕಲಾ ಸೇವೆಯನ್ನು ನಿತ್ಯವೂ ಸ್ಮರಿಸುವುದಕ್ಕೊಂದು ಮಾಧ್ಯಮ'' ಎಂದು ಟ್ರಸ್ಟ್ ನ ಪ್ರಮುಖರಾದ ವಿ.ಅರವಿಂದ ಹೆಬ್ಬಾರ್ ಹೇಳಿದರು.
ಕ್ಯಾನ್ಸರ್ ಮಾರಿಗೆ ಗಾಯಕಿ ರಂಜನಿ ಹೆಬ್ಬಾರ್ ಬಲಿ
ಸೆ.1 ರಿಂದ ನಿರಂತರ 13 ದಿನಗಳ ಈ ಸಂಗೀತೋತ್ಸವದಲ್ಲಿ ದೇಶ-ವಿದೇಶಗಳ ಪ್ರಖ್ಯಾತ ಸಂಗೀತ ಕಲಾವಿದರು, ಫೇಸ್ ಬುಕ್ ಲೈವ್ ಮೂಲಕವೇ ಪ್ರತಿದಿನ ಸಂಗೀತ ಕಛೇರಿ ನೀಡುತ್ತಿದ್ದಾರೆ.
Recommended Video
ಈಗಾಗಲೇ ತಿರುಮೆಗ್ನನಂ ಟಿಪಿಎನ್ ರಮಾನಾಥನ್ ಮತ್ತು ಪಂಡಮಂಗಲಂ ಪಿ.ಜಿ.ಯುವರಾಜ್, ಚೆನ್ನೈನ ಪ್ರಾರ್ಥನಾ ಸಾಯಿ ನರಸಿಂಹನ್, ಬೆಂಗಳೂರಿನ ಸಿದ್ದಾರ್ಥ ಬೆಳ್ಮಣ್ಣು, ಯು.ಎಸ್. ಎ, ಹ್ಯೂಸ್ಟನ್ ನಿಂದ ಕೃತಿ ಭಟ್, ರಮಣಾ ಬಾಲಚಂದ್ರನ್, ಚೆನ್ನೈನ ಸತ್ಯನಾರಾಯಣ, ಬೆಂಗಳೂರಿನ ಸ್ಪೂರ್ತಿ ರಾವ್, ಐಶ್ವರ್ಯ ವಿದ್ಯಾ ರಘುನಾಥ್, ಚೆನ್ನೈನ ಜೆ.ಬಿ.ಶೃತಿ ಸಾಗರ್, ಮೈಸೂರಿನ ಶ್ರೀಮತಿದೇವಿ, ಅನುಪಮಾ ಭಾಗವತ್, ಕು. ಸಮನ್ವಿ ಅವರು ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾರೆ.