ಉಡುಪಿಯಲ್ಲಿ ಕೊರೊನಾ ನಿಯಮದ ನಡುವೆ ಕೃಷ್ಣ ಜನ್ಮಾಷ್ಟಮಿಯ ಸಂಭ್ರಮ
ಉಡುಪಿ, ಆಗಸ್ಟ್ 30: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಮೇಳೈಸಿದೆ. ಗೋಪಾಲನಿಗೆ ಲಕ್ಷ ತುಳುಸಿ ಅರ್ಚನೆ, ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕೃಷ್ಣ ಮಠದಲ್ಲಿ ಸಂಪ್ರದಾಯಬದ್ಧವಾಗಿ ನಡೆದಿದೆ. ಕಡೆಗೋಲು ಕೃಷ್ಣನ ದರ್ಶನ ಪಡೆದು, ಭಕ್ತರು ಅಷ್ಟಮಿಯನ್ನು ಸರಳವಾಗಿ ಸಡಗರದಿಂದ ಆಚರಿಸಿದ್ದಾರೆ.
ಉಡುಪಿಯ ಕೃಷ್ಣ ಮಠದ ರಥಬೀದಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಭಕ್ತರಿಗೆ ಕಡೆಗೋಲು ಕೃಷ್ಣನ ಜನ್ಮದಿನದ ಸಂಭ್ರಮವಾದರೆ, ಗೋಪಾಲನ ದರ್ಶನ ಮಾಡಬೇಕು ಎನ್ನುವ ತವಕವೂ ಕಂಡುಬಂದಿದೆ. ಪ್ರತಿ ವರ್ಷ ಅಷ್ಟಮಿಯನ್ನು ಪೊಡವಿಗೊಡೆಯ ಕೃಷ್ಣನೂರು ಉಡುಪಿಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತದೆ.
ತಾಸೆಯ ಸದ್ದು, ಹುಲಿ ಕುಣಿತದ ಸಡಗರ ವಿವಿಧ ವೇಷಗಳ ಸಂಭ್ರಮ ಮೇಳೈಸುತ್ತದೆ. ಆದರೆ ಈ ಬಾರಿ ಕೋವಿಡ್ ಕಾರಣದಿಂದ ಅದ್ಧೂರಿಯಾಗಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಿಲ್ಲ, ಬದಲಾಗಿ ಅಷ್ಟಮಿ ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ, ಸರಳವಾಗಿ ಆಚರಣೆ ನಡೆಯುತ್ತಿದೆ. ಬೆಳಿಗ್ಗೆ ಮಹಾಪೂಜೆಯ ಮೊದಲು ಶ್ರೀಕೃಷ್ಣ ದೇವರಿಗೆ ಪರ್ಯಾಯ ಪೀಠಾಧೀಶರಾದ ಈಶಪ್ರಿಯ ತೀರ್ಥ ಶ್ರೀಪಾದರು ವಿಶೇಷವಾಗಿ ಲಕ್ಷ ತುಳಸಿ ಅರ್ಚನೆ ನಡೆಸಿದ್ದಾರೆ.
ಇನ್ನು ಭಕ್ತರಿಗೆ ಬೆಳಗ್ಗಿನಿಂದಲೇ ಕೃಷ್ಣ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸೋಮವಾರ ಮಧ್ಯರಾತ್ರಿ 12.17ಕ್ಕೆ ಸರಿಯಾಗಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರಧಾನ ನಡೆಯಲಿದೆ. ಚಂದ್ರಶಾಲೆ, ಮಧ್ವ ಮಂಟಪ, ಕನಕಗೋಪುರ ಬಳಿ ಅರ್ಘ್ಯ ಪ್ರದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಭಕ್ತರಿಗೆ ವಿತರಣೆ ಮಾಡಲು ಈಗಾಗಲೇ 40 ಸಾವಿರ ಅಕ್ಕಿಯ ಚಕ್ಕುಲಿ ಹಾಗೂ 80 ಸಾವಿರ ವಿವಿಧ ಬಗೆಯ ಉಂಡೆಗಳು ರೆಡಿಯಾಗಿದೆ. ಉಡುಪಿ ಸೇರಿದಂತೆ ನಾಡಿನ ಹಲವು ಕಡೆಗಳಿಂದ ಕೃಷ್ಣನ ಭಕ್ತರು ಆಗಮಿಸಿ, ಕೃಷ್ಣ ದರ್ಶನ ಪಡೆದು ಪುನೀತರಾಗಿದ್ದಾರೆ. ಮಠದ ರಥಬೀದಿಯಲ್ಲೂ ಹೆಚ್ಚಿನ ಜನ ದಟ್ಟಣೆ ಕಂಡು ಬಂದಿಲ್ಲ. ಕೊರೊನಾ ಸೋಂಕು ಕಾರಣದಿಂದ ಜನಸಂಖ್ಯೆಯೂ ಕಡಿಮೆಯಾಗಿತ್ತು.
ಸೋಮವಾರ ಉಡುಪಿಯಲ್ಲಿ ಜನ್ಮಾಷ್ಟಮಿ ಸಂಭ್ರಮ ಇದ್ದರೆ, ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಗೊಲ್ಲ ವೇಷದಾರಿಗಳು ಮಡಕೆ ಒಡೆಯುವ ಸಂಪ್ರದಾಯವನ್ನು ಮಾಡಲಿದ್ದಾರೆ. ಶ್ರೀಕೃಷ್ಣನ ಮಣ್ಣಿನ ಮೂರ್ತಿಯನ್ನು ರಥಬೀದಿಯಲ್ಲಿ ಉತ್ಸವ ಮಾಡಲಾಗುತ್ತದೆ. ಆದರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಮಾತ್ರ ಉಡುಪಿಯಲ್ಲಿ ನಡೆಯುವುದಿಲ್ಲ. ಕೊರೊನಾ ನಿಯಮಾನುಸಾರವಾಗಿ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ವಿಟ್ಲಪಿಂಡಿ ಉತ್ಸವ ನಡೆಯಲಿದೆ.
ವಿಟ್ಲಪಿಂಡಿ ಉತ್ಸವಕ್ಕೆ ತನ್ನದೇ ಆದ ಇತಿಹಾಸವಿದ್ದು, ಇಡೀ ಉಡುಪಿಗೆ ಉಡುಪಿಯೇ ಸಂಭ್ರಮದಲ್ಲಿ ಮುಳುಗೇಳಲಿದೆ. ರಥಬೀದಿಯ ಅಲ್ಲಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಹುಲಿವೇಷ, ವಿವಿಧ ಕಲಾ ಪ್ರಕಾರಗಳು, ನೃತ್ಯ, ಕುಣಿತ ಎಲ್ಲವೂ ವಿಟ್ಲಪಿಂಡಿಯ ವಿಶೇಷತೆ.
ಅಲ್ಲದೇ ರಥಬೀದಿಯ ಅಲ್ಲಲ್ಲಿ ಸಾರ್ವಜನಿಕ ಅನ್ನಸಂತರ್ಪಣೆಯ ವ್ಯವಸ್ಥೆ ಈ ಹಿಂದಿನ ವರ್ಷದಲ್ಲಿ ಮಾಡಲಾಗಿತ್ತು. ಆದರೆ ಈ ಬಾರಿ ಅಂತಹ ಯಾವುದೇ ಸಂಭ್ರಮವಿಲ್ಲ. ವಿಟ್ಲಪಿಂಡಿ ಉತ್ಸವ ಕೊರೊನಾ ನಿಯಮನಾಸಾರವಾಗಿ ನಡೆಯಲಿದೆ. ಯಾವುದೇ ಅದ್ಧೂರಿ ಆಚರಣೆಯಿಲ್ಲದಿರುವುದು ಕೃಷ್ಣ ಭಕ್ತರಿಗೂ ನಿರಾಸೆ ತಂದಿದೆ.