ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ:ಸಿದ್ದರಾಮಯ್ಯ
Recommended Video
ಉಡುಪಿ, ಅಕ್ಟೋಬರ್. 26: ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ನೈತಿಕತೆ ಇಲ್ಲ. ರೈತರ ಪರ ಕಾಳಜಿ ಇಲ್ಲ. ಒಂದು ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಸಾಲಮನ್ನಾ ಮಾಡದೇ ಇರೋದಕ್ಕೆ ಮೋದಿಗೆ ಯಾವ ರೋಗ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಉಪಚುನಾವಣೆ:ಅದೇ ಸ್ಟೈಲ್, ಅದೇ 'ಖದರ್': ಸಿದ್ದರಾಮಯ್ಯ ಬ್ಯಾಕ್ ಟು ಫಾರ್ಮ್
ಹಿಂದುತ್ವದಿಂದ ದೇಶದ ಜನಕ್ಕೆ ಹೊಟ್ಟೆ ತುಂಬಲ್ಲ. ಜನರನ್ನು ಪ್ರಚೋದಿಸಿ ಬಿಜೆಪಿ ದಾರಿ ತಪ್ಪಿಸುತ್ತಿದೆ. ಯಡಿಯೂರಪ್ಪ ಹಸಿರು ಶಾಲು ಹಾಕೊಂಡು ಡೋಂಗಿತನ ಮಾಡುತ್ತಿದ್ದಾರೆ. ಹಸಿರು ಶಾಲಿನ ರಾಜಕಾರಣ ಮಾಡುತ್ತಾರೆ.
ಮೋದಿ ಮುಂದೆ ರಾಜ್ಯ ಬಿಜೆಪಿ ನಾಯಕರು ಬಾಯಿಯನ್ನೇ ಬಿಡಲ್ಲ. ಈ ಗಿರಾಕಿಗಳಿಗೆ ಮೋದಿ ಮುಂದೆ ಬಾಯಿ ಬರಲ್ಲ. ಓಟು ಪಡಿಯೋವರೆಗೂ ನೀವೆಲ್ಲ ಹಿಂದೂ. ಓಟು ಪಡೆದ ಮೇಲೆ ಯುಡಿಯೂರಪ್ಪ ಮುಂದು ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಯಡಿಯೂರಪ್ಪ ಕೇಸರಿ ನೆಲದಲ್ಲಿ ಸಿದ್ದರಾಮಯ್ಯ 'ಜಾತ್ಯತೀತ' ಸವಾರಿ
ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ನೀಡಿದ ಒಂದೇ ಒಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ. ಮೋದಿ ಅವರ ಅಚ್ಚೇ ದಿನ್ ಕಬೀ ನಹೀ ಆಯೇಗಾ ಎಂದು ಲೇವಡಿ ಮಾಡಿದರು.
ಮಧು ಬಂಗಾರಪ್ಪ ಚುನಾವಣೆಯಲ್ಲಿ ಗೆಲ್ಲುತ್ತಾರೆ
"ಮರು ಚುನಾವಣೆ ಅನಗತ್ಯವಾಗಿ ಬಂದಿದೆ. ಯಡಿಯೂರಪ್ಪ ಸಿಎಂ ಆಗುವ ಆಸೆಯಿಂದ ಈ ಚುನಾವಣೆ ಆಗುತ್ತಿದೆ. ಬಿಎಸ್ ವೈ ಎರಡೂವರೆ ದಿನ ಸಿಎಂ ಆದರು. ಇದು ಪ್ರಜಾಪ್ರಭುತ್ವ ವಿರೋಧಿ ಬೆಳವಣಿಗೆ. ಮತದಾರರಿಗೆ ಬಿಎಸ್ ವೈ ಮತ್ತು ಮಗ ಅಪಮಾನ ಮಾಡಿದ್ದಾರೆ.
ಈ ಬಾರಿ ಎಲ್ಲಾ ಅರಾಜಕತೆಗೆ ಜನ ಉತ್ತರ ಕೊಡ್ತಾರೆ. ಸಮ್ಮಿಶ್ರ ಅಭ್ಯರ್ಥಿ ಮಧು ಬಂಗಾರಪ್ಪ ಚುನಾವಣೆಯಲ್ಲಿ ಈ ಬಾರಿ ಗೆಲ್ಲುತ್ತಾರೆ" ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು
ಯಡಿಯೂರಪ್ಪ ಮಾತ್ರ ಹಿಂದೂನಾ?
"ನಾನೇನು ಹಿಂದೂ ಅಲ್ವಾ? ಮಧು ಬಂಗಾರಪ್ಪ, ಜಯಮಾಲ, ಪ್ರಮೊದ್ ಮಧ್ವರಾಜ್ , ವಿನಯ್ ಕುಮಾರ್ ಸೊರಕೆ ಎಲ್ಲರೂ ಹಿಂದೂ ಅಲ್ವಾ? ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಮಾತ್ರ ಹಿಂದೂನಾ? ಓಟು ಕೇಳುವಾಗ ಹಿಂದೂ . ಆಮೇಲೆ ಹಿಂದೂಗಳೆಲ್ಲಾ ಹಿಂದೆ. ನಾಯಕರೆಲ್ಲ ಮುಂದೆ" ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು .
ಸುಳ್ಳೇ ಯಡಿಯೂರಪ್ಪ ಮನೆ ದೇವರು: ಶಿವಮೊಗ್ಗದಲ್ಲಿ ಸಿದ್ದರಾಮಯ್ಯ ಲೇವಡಿ
ಹಾಲಾಡಿ ಶ್ರೀನಿವಾಸ ಶೆಟ್ಟಿ ಮುಖ ನೋಡೇ ಇಲ್ಲ
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರನ್ನು ಏಕವಚನದಲ್ಲಿ ಸಂಬೋಧಿಸಿದ ಸಿದ್ದರಾಮಯ್ಯ, "ಯಾವಾನೊ ಅವನು ಶ್ರೀನಿವಾಸ ಶೆಟ್ಟಿ. ಈವರೆಗೆ ಅವನ ಮುಖಾನೇ ನಾನು ನೋಡಿಲ್ಲ" ಎಂದು ಕುಟುಕಿದರು.
40 ಸಾವಿರ ಕೋಟಿ ಎಲ್ಲೋಯ್ತು?
ಬಂಗಾರಪ್ಪನವರು ಕಾಂಗ್ರೆಸ್ ನಲ್ಲಿ ಸಿಎಂ ಆಗಿದ್ದವರು. ಸಾಮಾಜಿಕ ನ್ಯಾಯ ಮಧು ಬಂಗಾರಪ್ಪಗೆ ರಕ್ತದಲ್ಲೇ ಬಂದಿದೆ. ಮಧು ಗೆದ್ದರೆ ಬಂಗಾರಪ್ಪನ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದು ಹೇಳಿದ ಸಿದ್ದರಾಮಯ್ಯ ಮೋದಿ ವಿರುದ್ದ ತಮ್ಮ ವಾಗ್ದಾಳಿ ಮುಂದುವರೆಸಿದರು.
ಮೋದಿ ಚೌಕಿದಾರ ಅಂತ ಭಾಷಣ ಮಾಡಿದ್ದೇ ಮಾಡಿದ್ದು. ನಾನು ತಿನ್ನಲ್ಲ. ಯಾರಿಗೂ ತಿನ್ನಕ್ಕೆ ಬಿಡಲ್ಲ ಅಂದಿದ್ರಲ್ಲ. ರಫೆಲ್ ಹಗರಣ ದೇಶದ ಅತೀ ದೊಡ್ಡ ಹಗರಣವಾಗಿದೆ. 40 ಸಾವಿರ ಕೋಟಿ ಎಲ್ಲೋಯ್ತು ಮಿಸ್ಟರ್ ಮೋದಿ. ಏನಾಯ್ತಪ್ಪ ನಿಮ್ಮ ಬಣ್ಣ ಬದಲಾಯ್ತಲ್ಲ ಮಿ. ಮೋದಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮೈತ್ರಿ: ಸಿದ್ದರಾಮಯ್ಯ