ಆಂತರಿಕ ಗೊಂದಲ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ; ಶೋಭಾ ಕರಂದ್ಲಾಜೆ
ಉಡುಪಿ, ಜುಲೈ 6: ಮೈತ್ರಿ ಸರ್ಕಾರದಲ್ಲಿ ಆಂತರಿಕ ಜಗಳ ಹೆಚ್ಚು ಮಾಡಿದ್ದೇ ಸಿದ್ದರಾಮಯ್ಯ. ಮೋದಿ, ಯಡಿಯೂರಪ್ಪ ಅವರ ಕಡೆ ಕೈ ತೋರಿಸಬೇಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಕಿಡಿಕಾರಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಆಂತರಿಕ ಗೊಂದಲ ಬಹಿರಂಗವಾಗಿದೆ. ಆನಂದ್ ಸಿಂಗ್ ರಾಜೀನಾಮೆ ಕೊಟ್ಟಾಗಲೇ ಕಾಂಗ್ರೆಸ್ ಎಚ್ಚೆತ್ತುಕೊಳ್ಳಬೇಕಿತ್ತು. ಕುಮಾರಸ್ವಾಮಿ, ಸಿದ್ದರಾಮಯ್ಯ, ಪರಮೇಶ್ವರ್, ರೇವಣ್ಣ ವರ್ತನೆಯಿಂದ ಜನ ರೋಸಿ ಹೋಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದಲ್ಲಿ ರಾಜಕೀಯ ಬೃಹನ್ನಾಟಕ, ಯಡಿಯೂರಪ್ಪ ನಡೆ ಏನು?
ಎಚ್.ಡಿ.ಕುಮಾರಸ್ವಾಮಿಯವರನ್ನು ಸಿಎಂ ಅಂತ ಒಪ್ಪಿಕೊಳ್ಳಲು ಸಿದ್ದರಾಮಯ್ಯ ತಯಾರಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ಶಾಸಕರನ್ನು ಎತ್ತಿಕಟ್ಟಿದ್ದಾರೆ ಎಂದು ಆರೋಪಿಸಿದರು. ಬೇರೆ ಪಕ್ಷದ ಸದಸ್ಯರಲ್ಲದವರು ಬಿಜೆಪಿಗೆ ಬರಬಹುದು. ರಾಜೀನಾಮೆ ಸ್ವೀಕಾರವಾದ ಮೇಲೆ ಯಾರು ಬೇಕಾದರೂ ಬಿಜೆಪಿಗೆ ಸೇರಬಹುದು ಎಂದು ಅವರು ಅತ್ರಪ್ತ ಶಾಸಕರನ್ನು ಆಹ್ವಾನಿಸಿದರು.
ಮೋದಿಯವರ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಸರ್ಕಾರ ರಾಜ್ಯದಲ್ಲಿ ಬರಬೇಕು. ಬರಗಾಲ ಇದ್ದಾಗಲೇ ಸಿಎಂ ಅಮೆರಿಕ ಪ್ರವಾಸದಲ್ಲಿದ್ದಾರೆ. ಗ್ರಾಮ ವಾಸ್ತವ್ಯದ ನಾಟಕವಾಡಿ ಅಮೆರಿಕಕ್ಕೆ ಹೋದರು. ಸಿಎಂ ವಾಪಸ್ಸಾಗುವಾಗ ಕಾಂಗ್ರೆಸ್ ಯಾವ ನಾಟಕ ಆಡುತ್ತೋ ನೋಡಬೇಕು ಎಂದು ಅವರು ವ್ಯಂಗ್ಯವಾಡಿದರು.
ರಾಜ್ಯದ ಬೆಳವಣಿಗೆಯನ್ನು ರಾಜ್ಯಪಾಲರು ಗಮನಿಸಬೇಕು. 15 ಜನ ರಾಜೀನಾಮೆ ಕೊಟ್ಟರೆ ಸರ್ಕಾರಕ್ಕೆ ಬಹುಮತ ಇಲ್ಲ. ರಾಜೀನಾಮೆ ಕೊಟ್ಟವರು ಬಿಜೆಪಿ ಸಂಪರ್ಕದಲ್ಲಿ ಇಲ್ಲ. ಕಾಂಗ್ರೆಸ್ ನಾಯಕರ ನಡವಳಿಕೆಯೇ ಶಾಸಕರ ರಾಜೀನಾಮೆಗೆ ಕಾರಣ ಎಂದರು.
ಸರಕಾರ ರಚನೆಯಾದರೆ ಯಡಿಯೂರಪ್ಪನವರೇ ಮುಖ್ಯಮಂತ್ರಿ : ಡಿವಿ ಸದಾನಂದ ಗೌಡ
ಬಿಜೆಪಿ ಸಿದ್ಧಾಂತ, ಮೋದಿಯನ್ನು ಒಪ್ಪಿ ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು. ಜಿ.ಟಿ ದೇವೇಗೌಡ ಈ ಹಿಂದೆ ನಮ್ಮ ಜೊತೆ ಇದ್ದರು. ಅಲ್ಲಿ ಬೇಸರ ಆದರೆ ಯಾವತ್ತೂ ಜಿಟಿಡಿ ಬಿಜೆಪಿಗೆ ಬರಬಹುದು ಎಂದು ಜಿ.ಟಿ ದೇವೇಗೌಡರನ್ನೂ ಆಹ್ವಾನಿಸಿದರು.
ಗೊಂದಲ ನಿವಾರಣೆಗೆ ಡಿಕೆಶಿ ಎಂಟ್ರಿ ಬಹಳ ತಡವಾಯ್ತು. ಜಿಂದಾಲ್ ಪರಾಭಾರೆಗೆ ಡಿಕೆಶಿಯೇ ಕಾರಣ ಎಂದು ಆರೋಪಿಸಿದ ಅವರು, ಸ್ಪೀಕರ್ ಕಚೇರಿಗೆ ಈಗ ಹೋಗಿ ಸಮಾಧಾನ ಮಾಡಿದರೆ ಪ್ರಯೋಜನ ಇಲ್ಲ ಎಂದರು.