ಉಡುಪಿ; ಅಷ್ಟಮಿಯ ಸಂಭ್ರಮಕ್ಕೆ ನೂರೆಂಟು ನಿಯಮಗಳು!
ಉಡುಪಿ, ಆಗಸ್ಟ್ 29; ಪೊಡವಿಗೊಡೆಯ ಕೃಷ್ಣನೂರಿನಲ್ಲಿ ಅಷ್ಟಮಿಯ ಸಂಭ್ರಮ ಮೇಳೈಸಿದೆ. ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಗೆ ಕೊರೊನಾ ಆತಂಕದ ನಡುವೆಯೂ ಚಾಲನೆ ದೊರಕಿದೆ. ಉಡುಪಿಯ ಅಷ್ಟಮಿ ಪ್ರತೀ ವರ್ಷ ವಿಜೃಂಭಣೆಯಿಂದ ನಡೆಯುತ್ತಿತ್ತು. ಆದರೆ ಕೊರೊನಾ ಆವರಿಸಿದ ಮೇಲೆ ಸಂಭ್ರಮವೆಲ್ಲಾ ಮರೀಚಿಕೆಯಾಗಿ ಕೇವಲ ಸಂಪ್ರದಾಯಿಕವಾಗಿ ನಡೆಯಲಿದೆ.
ಕೃಷ್ಣಜನ್ಮಾಷ್ಟಮಿಯ ಹಿನ್ನಲೆಯಲ್ಲಿ ಉಡುಪಿಯಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಅಷ್ಟಮಿಯ ಶುಭ ದಿನದ ಪ್ರಯುಕ್ತ ಭಕ್ತರಿಗೆ ನಾನಾ ಬಗೆಯ ಸಿಹಿ ತಿನಿಸುಗಳ ವಿತರಣೆ ನಡೆಯಲಿದ್ದು, ಈಗಾಗಲೇ ಕೃಷ್ಣ ಮಠದಲ್ಲಿ ತಿಂಡಿಗಳು ತಯಾರಿ ಜೋರಾಗಿ ನಡೆಯುತ್ತಿದೆ.
ಶ್ರೀಕೃಷ್ಣ ಜನ್ಮಾಷ್ಟಮಿ 2021: ಶುಭ ಮುಹೂರ್ತ, ಪೂಜಾ ವಿಧಿ ವಿಧಾನ
ಉಂಡೆ, ಚಕ್ಕುಲಿ,ಕೋಡುಬಳೆ, ಲಡ್ಡು ಹೀಗೆ ನಾನಾ ಬಗೆಯ ತಿಂಡಿಗಳನ್ನು ತಯಾರಿಸಿ ಪ್ಯಾಕ್ ಮಾಡಲಾಗುತ್ತಿದೆ. ಆಗಸ್ಟ್ 30ರ ಸೋಮವಾರ ಅಷ್ಟಮಿ ಸಂಭ್ರಮವಾದರೆ ಮಂಗಳವಾರ ಇತಿಹಾಸ ಪ್ರಸಿದ್ಧ ಉಡುಪಿಯ ವಿಟ್ಲಪಿಂಡಿ ಮೊಸರು ಕುಡಿಕೆ ಉತ್ಸವ ನಡೆಯಲಿದೆ. ಸರಳ, ಸಾಂಪ್ರದಾಯಿಕ ಕೃಷ್ಣ ಜಯಂತಿ ಆಚರಣೆ ಆಗಸ್ಟ್ 30 ಮತ್ತು 31ರಂದು ಉಡುಪಿ ಜಿಲ್ಲಾಡಳಿತದ ಹಲವು ನಿಯಮಗಳ ಪ್ರಕಾರ ನಡೆಯಲಿದೆ.
ಜನ್ಮಾಷ್ಟಮಿ ವಿಶೇಷ: ಕೃಷ್ಣವೇಷಧಾರಿಗಳ ಅಂದ ಚೆಂದ ನೋಡಿ
ಜನ್ಮಾಷ್ಟಮಿಯ ದಿನದಂದು ಶ್ರೀ ಕೃಷ್ಣನ ದರ್ಶನಕ್ಕೆ ಭಕ್ತರಿಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ನಿಗದಿತ ಸಮಯದಲ್ಲಿ ಕೃಷ್ಣ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಆದರೆ ಈ ಬಾರಿ ಉಡುಪಿಯಲ್ಲಿ ಯಾವುದೇ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ನಡೆಯುವುದಿಲ್ಲ.
ದೇಶದಾದ್ಯಂತ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ ಆಚರಣೆ
ಸಾಂಪ್ರದಾಯಿಕ ಆಚರಣೆ
ಇನ್ನು ಕೃಷ್ಣ ಜನ್ಮಾಷ್ಟಮಿಯ ಪ್ರಧಾನ ಸಂಪ್ರದಾಯ ಅರ್ಘ್ಯ ಪ್ರಧಾನಕ್ಕೆ ಮೂರು ಕಡೆ ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿಯಿಂದಲೇ ಅರ್ಘ್ಯ ಪ್ರಧಾನ ವ್ಯವಸ್ಥೆ ನಡೆಯಲಿದ್ದು, ಈ ವೇಳೆ ಭಕ್ತರ ನೂಕುನುಗ್ಗಲು ಉಂಟಾಗಬಾರದು ಎನ್ನುವ ಉದ್ದೇಶದಿಂದ ಭಕ್ತರಿಗೆ ಮೂರು ಕಡೆ ಅರ್ಘ್ಯ ಪ್ರಧಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಉಡುಪಿಯ ಜನ್ಮಷ್ಟಾಮಿಯ ಪ್ರಮುಖ ಆಕರ್ಷಣೆ ಭಕ್ತರಿಗೆ ಸಿಹಿ ತಿಂಡಿಗಳ ವಿತರಣೆ ನಡೆಯಲಿದೆ. ಉತ್ಸವದ ನಂತರ ಉಂಡೆ ಚಕ್ಕುಲಿ ವಿತರಣೆ ಕಾರ್ಯ ಸರಾಗವಾಗಿ ನಡೆಯಲಿದೆ. ಇನ್ನು ಅಷ್ಟಮಿಯ ಪ್ರಯುಕ್ತ ಮಠದಲ್ಲಿ ನಡೆಯಬೇಕಾದ ಎಲ್ಲಾ ಸಾಂಪ್ರಾದಾಯಿಕ ಆಚರಣೆಗಳು ನಡೆಯುತ್ತವೆ. ಸಂಪ್ರದಾಯಿಕ ಆಚರಣೆಗಳಿಗೆ ಎಳ್ಳಷ್ಟು ಕುತ್ತು ಬರದಂತೆ ವ್ಯವಸ್ಥೆ ಮಾಡಲಾಗಿದೆ.
ಕೃಷ್ಣ ವೇಷ ಸ್ಪರ್ಧೆಗಳು ನಡೆಯೋಲ್ಲ
ಈ ಹಿಂದಿನ ವರ್ಷಗಳಲ್ಲಿ ಮುದ್ದುಮುದ್ದು ಮಕ್ಕಳಿಗೆ ಕೃಷ್ಣ ವೇಷ ಧರಿಸಿ, ಶ್ರೀ ಕೃಷ್ಣ ವೇಷ ಸ್ಪರ್ಧೆ ಉಡುಪಿಯಲ್ಲಿ ನಡೆಯುತ್ತಿತ್ತು. ಆದರೆ ಈ ಬಾರಿ ಉಡುಪಿಯಲ್ಲಿ ಯಾವುದೇ ಶ್ರೀ ಕೃಷ್ಣ ವೇಷ ಸ್ಪರ್ಧೆಗಳು ನಡೆಯೋದಿಲ್ಲ. ಇದರ ಬದಲಾಗಿ ಮನೆಯಲ್ಲೇ ಮಕ್ಕಳಿಗೆ ಕೃಷ್ಣ ವೇಷ ಹಾಕಿ ಆನ್ ಲೈನ್ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ.
ಮಂಗಳವಾರದಂದು ಉಡುಪಿಯಲ್ಲಿ ನಡೆಯುವ ವಿಟ್ಲಪಿಂಡಿಗೆ ಉತ್ಸವದಲ್ಲಿ ಸಾರ್ವಜನಿಕರು ಭಾಗವಹಿಸೋದನ್ನು ನಿಷೇಧಿಸಲಾಗಿದೆ. ಏನು ಇದೆ ಅನ್ನೋದರ ಬದಲಾಗಿ, ಯಾವುದೂ ಇಲ್ಲ ಅನ್ನೋದೇ ಉಡುಪಿಯ ಜನ್ಮಾಷ್ಟಮಿಯ ವಿಶೇಷವಾಗಿದೆ. ಉಡುಪಿಯ ಜನ್ಮಾಷ್ಟಮಿಯಲ್ಲಿ ವಿಟ್ಲಪಿಂಡಿ ಉತ್ಸವವೇ ಸಂಭ್ರಮವಾಗಿದ್ದು,ಆದರೆ ಕೊರೊನಾ ಕಾರಣದಿಂದ ಜನರ ಭಾಗವಹಿಸುವಿಕೆ ನಿಷೇಧಿಸಲಾಗಿದೆ.
ಅನ್ನಸಂತರ್ಪಣೆ ಇರುವುದಿಲ್ಲ
ಇನ್ನೂ ವಿಟ್ಲಪಿಂಡಿ ಉತ್ಸವದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ತಡೆ ನೀಡಲಾಗಿದೆ. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಮೆರವಣಿಗೆ, ಹುಲಿವೇಷ, ಕೃಷ್ಣ ವೇಷ ಎಲ್ಲದ್ದಕ್ಕೂ ತಡೆ ಒಡ್ಡಲಾಗಿದೆ. ಇನ್ನು ವಿಟ್ಲಪಿಂಡಿಯಂದು ಸಾರ್ವಜನಿಕ ಅನ್ನಸಂತರ್ಪಣೆ ಇರುವುದಿಲ್ಲ. ಲಕ್ಷಾಂತರ ಜನರು ವಿಟ್ಲ ಪಿಂಡಿ ಉತ್ಸವದಲ್ಲಿ ಅನ್ನಸಂತರ್ಪಣೆಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಕೊರೊನಾ ಎಲ್ಲದಕ್ಕೂ ಕಲ್ಲು ಹಾಕಿದೆ. ಇನ್ನು ಕೃಷ್ಣಮಠದಲ್ಲಿ ನಡೆಯುತ್ತಿದ್ದ ವಿವಿಧ ಸ್ಪರ್ಧೆಗಳು ಇರುವುದಿಲ್ಲ, ರಥ ಬೀದಿಯಲ್ಲಿ ಸಾಂಸ್ಕೃತಿಕ ವೇದಿಕೆಗಳು ಇರುವುದಿಲ್ಲ.
ಕೋವಿಡ್ ಕಾರಣದಿಂದ ನಿಯಮಗಳು
ಶ್ರೀ ಕೃಷ್ಣ ಜನ್ಮಾಷ್ಟಮಿಯ ದಿನ ಉಡುಪಿಗೆ ಉಡುಪಿಯೇ ಸಂಭ್ರಮದಲ್ಲಿ ಮುಳುಗೇಳುತ್ತಿದ್ದರೂ, ಈ ವರ್ಷ ಕೊರೊನಾ ಎಲ್ಲವನ್ನೂ ಕಟ್ಟಿ ಹಾಕಿದೆ. ಈ ಹಿಂದೆ ನಡೆಯುತ್ತಿದ್ದ ಸಂಭ್ರಮ ಮತ್ತೆ ಬರಲಿ. ಕೊರೊನಾ ದೂರವಾಗಲಿ. ಜಗದ್ ವಂಧ್ಯ ಶ್ರೀ ಕೃಷ್ಣ ಸಂಕಷ್ಟಗಳನ್ನೆಲ್ಲಾ ದೂರಮಾಡಲಿ ಅನ್ನೋದು ಶ್ರೀ ಕೃಷ್ಣ ಭಕ್ತರ ಆಶಯವಾಗಿದೆ.
Recommended Video