ಉಡುಪಿಯಲ್ಲಿ ದ್ವಿಚಕ್ರ ವಾಹನಗಳ ಶೋ ರೂಮ್ ಗೆ ಬೆಂಕಿ , ಭಾರೀ ನಷ್ಟ
ಉಡುಪಿ, ಜೂನ್ 24: ಅಗ್ನಿ ಆಕಸ್ಮಿಕ ಸಂಭವಿಸಿ ದ್ವಿಚಕ್ರ ವಾಹನಗಳ ಶೋ ರೂಮ್ ಒಂದು ಸಂಪೂರ್ಣವಾಗಿ ಭಸ್ಮವಾದ ಘಟನೆ ಉಡುಪಿ ಯಲ್ಲಿ ಭಾನುವಾರ ರಾತ್ರಿ ನಡೆದಿದೆ. ನಗರದ ಇಂದ್ರಾಳಿ ಪೆಟ್ರೋಲ್ ಬಂಕ್ ಸಮೀಪದಲ್ಲಿರುವ ದ್ವಿಚಕ್ರ ವಾಹನ ಶೋರೂಂ ಇರುವ ಕಟ್ಟಡ ಪೂರ್ಣ ಸುಟ್ಟು ಹೋಗಿವೆ.
ಕಟ್ಟಡಕ್ಕೆ ಬೆಂಕಿ ತಗುಲಿದ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ 3 ವಾಹನಗಳಲ್ಲಿ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಆರಂಭಸಿದ್ದರು. ಆದರೆ ಬೆಂಕಿ ಹತೋಟಿಗೆ ಬರದ ಕಾರಣ ಬೆಂಕಿ ನಂದಿಸುವ ಕಾರ್ಯ ತಡರಾತ್ರಿಯವರೆಗೂ ಮುಂದುವರೆದಿತ್ತು.
ಎರಡು ಮಹಡಿಯ ಈ ಕಟ್ಟಡದಲ್ಲಿ ಒಂದನೇ ಮಹಡಿಯಲ್ಲಿ ಜಯರಾಮ್ ಎಂಬವರ ಎಲ್ಎಮ್ಎಲ್ ವೆಸ್ಪ ಕಂಪನಿಯ ದ್ವಿಚಕ್ರವಾಹನಗಳ ಶೋರೂಮ್ ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಆದರೆ ಕಟ್ಟಡದ ಎರಡನೇ ಮಹಡಿಯಲ್ಲಿ ಜಿಮ್ ಸೆಂಟರ್ ಹಾಗೂ ಕೆಳಗಿನ ಮಹಡಿಯಲ್ಲಿ ದಂತ ಕ್ಲಿನಿಕ್ ಇದೆ. ಆದರೆ ಇವುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದು ಬಂದಿದೆ
ಮಣಿಪಾಲದ ಕೆಎಂಸಿ ಆವರಣದಲ್ಲಿ ಉರುಳಿದ ಮರ; ತಪ್ಪಿದ ಭಾರೀ ಅನಾಹುತ
ಬೆಂಕಿ ಅವಘಡ ಸಂಭವಿಸಿದ ಕಟ್ಟಡದ ಸಮೀಪದಲ್ಲಿ ಪೆಟ್ರೋಲ್ ಬಂಕ್ ಇದ್ದ ಕಾರಣ , ಅಗತ್ಯ ಕ್ರಮ ಕೈಕೊಳ್ಳಲಾಗಿತ್ತು. ಇಡೀ ಪರಿಸರದಲ್ಲಿ ವಿದ್ಯುತ್ ಸಂಪರ್ಕ ಕಡಿತ ಗೊಳಿಸಲಾಗಿತ್ತು. ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎಂದು ಹೇಳಲಾಗುತ್ತಿದೆ.
ಶೋರೂಮ್ ನಲ್ಲಿರುವ ಬಹುತೇಕ ದ್ವಿಚಕ್ರ ವಾಹನಗಳು ಬೆಂಕಿಯಲ್ಲಿ ಸುಟ್ಟು ಹೋಗಿದ್ದು, ಇದರಿಂದ ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.