ಜನ ತಕ್ಕ ಪಾಠ ಕಲಿಸಿದ್ದಾರೆ: ಶೋಭಾ ಕರಂದ್ಲಾಜೆ
ಉಡುಪಿ, ಮೇ 23: ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಜಯಭೇರಿ ಭಾರಿಸಿದೆ. ಕ್ಷೇತ್ರದಲ್ಲಿ ಮತಗಳ ಭಾರೀ ಮುನ್ನಡೆ ಸಾಧಿಸುತ್ತಿದ್ದಂತೆ ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಹಾಕಾಳಿ ಜನಾರ್ದನ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ಬಾರಿಗಿಂತ ದೊಡ್ಡ ಅಂತರದಲ್ಲಿ ಗೆದ್ದು ಮತ್ತೆ ಸಂಸದೆಯಾಗುತ್ತೇನೆ. ಅನೇಕ ಕಾರ್ಯಕರ್ತರು ಬಹಳ ಉತ್ಸಾಹದಿಂದ ಕೆಲಸ ಮಾಡಿದ್ದು, ಅದೇ ರೀತಿ ಮತದಾರರು ಕೂಡ ಮತದಾನ ಮಾಡಿದ್ದಾರೆ. ಹೀಗಾಗಿ ಈ ಬಾರಿ ಎರಡು ಲಕ್ಷ ಮತಗಳ ಅಂತರದಲ್ಲಿ ಗೆಲುವು ನನ್ನದಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ-ಶೋಭಾ ಕರಂದ್ಲಾಜೆ
ಬಿಜೆಪಿ ದೇಶದಲ್ಲಿ ಜಯಭೇರಿ ಬಾರಿಸುತ್ತಿದೆ. ಮೆಜಾರಿಟಿ ನಮಗೆ ಸಿಗಲಿದೆ ಎಂಬ ವಿಶ್ವಾಸವಿದೆ. ಎಕ್ಸಿಟ್ ಪೋಲ್ ಬಗ್ಗೆ ಸಿದ್ದರಾಮಯ್ಯ, ಕುಮಾರಸ್ವಾಮಿ ಗೇಲಿ ಮಾಡಿದ್ದರು. ಮೋದಿ ಸುನಾಮಿ ಕರ್ನಾಟಕದ ವಿಪಕ್ಷವನ್ನು ಕೊಚ್ಚಿಕೊಂಡು ಹೋಗುವಂತೆ ಮಾಡಿದೆ ಎಂದರು. ಜನ ಸಮ್ಮಿಶ್ರ ಸರ್ಕಾರದ ಜೊತೆ ಇಲ್ಲ. ಕುಮಾರಸ್ವಾಮಿ ಸರ್ಕಾರಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಪತನಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಂಡ್ಯದಲ್ಲಿ ಹಾವು ಏಣಿ ಆಟ ಮುಂದುವರೆದಿದೆ. ದೇವೇಗೌಡ, ಖರ್ಗೆ, ಮುನಿಯಪ್ಪ, ಮೊಯ್ಲಿ ಸೋಲಾಗಿದೆ. ಕಾಂಗ್ರೆಸ್ ನ ನಾಲ್ಕು ಘಟಾನುಘಟಿಗಳಿಗೆ ಸೋಲಾಗಿದೆ ಎಂದು ಹೇಳಿದ ಅವರು, ದೇಶದಲ್ಲಿ ಮಹಾ ಘಟಬಂಧನ್ ಛಿದ್ರವಾಗಿದೆ. ರಾಜ್ಯ ಅಪವಿತ್ರ ಮೈತ್ರಿಗೆ ಎರಡು ಪಕ್ಷ ನಾಶವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಜನವಿರೋಧಿ ಸರ್ಕಾರದ ವಿರುದ್ಧ ಅವರ ಶಾಸಕರೇ ಧಂಗೆ ಎದ್ದಿದ್ದಾರೆ. ಅವರು ಒಂದು ಪಕ್ಷದಲ್ಲಿದ್ದಾಗ ನಾವು ಮಾತನಾಡಿಸಲ್ಲ. ರಾಜೀನಾಮೆ ಕೊಟ್ಟು ಹೊರಬಂದರೆ ಬಿಜೆಪಿ ಸ್ವಾಗತಿಸುತ್ತದೆ ಎಂದು ಅವರು ಹೇಳಿದರು.