ಜೆಡಿಎಸ್ ಬಗ್ಗೆ ಶೋಭಾ ಕರಂದ್ಲಾಜೆ ಸಾಫ್ಟ್ ಕಾರ್ನರ್?
ಉಡುಪಿ, ನವೆಂಬರ್ 4: ಎಚ್.ಡಿ. ಕುಮಾರಸ್ವಾಮಿ ಹಾಗೂ ದೇವೇಗೌಡ ಅವರ ಕುರಿತು ಸಂಸದೆ ಶೋಭಾ ಕರಂದ್ಲಾಜೆ ಮೆದು ಧೋರಣೆ ಹೊಂದಿರುವಂತೆ ತೋರುತ್ತಿದೆ. "ದೇವೇಗೌಡ ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಕಳೆದ ಒಂದು ವರ್ಷದ ಕಾಂಗ್ರೆಸ್ ಜೆಡಿಎಸ್ ಅನ್ನು ಹೇಗೆ ನಡೆಸಿಕೊಂಡಿದೆ ಗೊತ್ತಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ, ಜೆಡಿಎಸ್ ನ ಹಲವು ನಾಯಕರೇ ಇದನ್ನು ಹೇಳಿದ್ದಾರೆ. ಅವರಿಬ್ಬರ ಬಗ್ಗೆ ನಾನು ಮಾತನಾಡಲ್ಲ" ಎಂದು ಹೇಳುವ ಮೂಲಕ ಈ ಮಾತಿಗೆ ಪುಷ್ಠಿ ನೀಡಿದ್ದಾರೆ.
ಉಪಚುನಾವಣೆಯಲ್ಲಿ ಸುಮಲತಾ ಬೆಂಬಲ ನೀಡಲೇಬೇಕು; ಶೋಭಾ ಕರಂದ್ಲಾಜೆ
ಉಡುಪಿಯಲ್ಲಿ ಮಾತನಾಡಿದ ಅವರು, ಸಿಎಂ ಆಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಉತ್ತರಿಸಿ, "ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು. ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ, ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ಅನರ್ಹರ ಕಾರಣಕ್ಕಾಗಿ ಬಿಜೆಪಿ ಸರಕಾರ ರಚನೆಯಾಗಿದೆ, ಈ ಅಂಶವನ್ನೇ ಯಡಿಯೂರಪ್ಪ ಮಾತನಾಡಿದ್ದಾರೆ, ಇದರಲ್ಲಿ ತಪ್ಪು, ಅನ್ಯಾಯ ಏನಿದೆ? ಯಡಿಯೂರಪ್ಪ ಹೇಳಿರುವುದರಲ್ಲಿ ತಪ್ಪೇನಿದೆ? ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು" ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರ ಕುರಿತು ಮತ್ತೆ ಸಿಡಿದೆದ್ದ ಸಂಸದೆ, "ಸಿದ್ದರಾಮಯ್ಯನವರು ಡರ್ಟಿ ಗೇಮ್ ಮಾಡ್ತಾನೇ ಇದ್ದಾರೆ. ನಿರಂತರ ಬ್ಲ್ಯಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದವರು ಅವರು. ಜೆಡಿಎಸ್ ಬಿಟ್ಟ ನಂತರ ಕಾಂಗ್ರೆಸ್ಸನ್ನು ಬ್ಲ್ಯಾಕ್ ಮೈಲ್ ಮಾಡುತ್ತಲೇ ಇದ್ದಾರೆ, ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನಾಗಿದ್ದೂ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಇದ್ದಾರೆ. ಅವರಿಂದ ಯಾರೂ ಕಲಿಯುವ ಅಗತ್ಯವಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯೋತ್ಸವದಂದು ಸರಕಾರಕ್ಕೆ 3 ಬೇಡಿಕೆಯಿಟ್ಟ ಶೋಭಾ ಕರಂದ್ಲಾಜೆ
ಕಾಂಗ್ರೆಸ್ ನಾಯಕ ವಿಜಯ ಶಂಕರ್ ಬಿಜೆಪಿಗೆ ಸೇರ್ಪಡೆಗೊಂಡಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ, "ವಿಜಯ ಶಂಕರ್ ಅವರ ಜನಾಂಗದಲ್ಲೇ ಸಜ್ಜನ ವ್ಯಕ್ತಿ. ಸಿದ್ದರಾಮಯ್ಯನ ಸ್ವಂತ ನೆಲದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ, ಇದು ನಮಗೆ ಖುಷಿ ಮತ್ತು ಸಂತೋಷದ ವಿಚಾರ" ಎಂದಿದ್ದಾರೆ.