ಕಾಂಗ್ರೆಸ್ಸಿಗರಿಗೆ ಕೊನೆಗೂ ಜ್ಞಾನೋದಯ: ಶೋಭಾ ಕರಂದ್ಲಾಜೆ ವಾಗ್ದಾಳಿ
ಉಡುಪಿ, ಅಕ್ಟೋಬರ್ 19: ಕಾಂಗ್ರೆಸ್ ನವರು ವೋಟ್ ಬ್ಯಾಂಕ್ ಗಾಗಿ ಲಿಂಗಾಯತ ವೀರಶೈವರನ್ನು ಒಡೆಯುವ ಷಡ್ಯಂತ್ರ ಮಾಡಿದರು. ಅವರದೇ ಮಂತ್ರಿಗಳನ್ನು ಛೂಬಿಟ್ಟು ಜಾತಿ-ಜಾತಿ ಒಡೆಯುವ ಪ್ರಯತ್ನ ಮಾಡಿದರು. ಸಚಿವ ಡಿ.ಕೆ.ಶಿವಕುಮಾರ್ ಬಾಯಿಯಿಂದ ಈಗ ಸತ್ಯ ಹೊರಬಂದಿದೆ. ಕಾಂಗ್ರೆಸ್ಸಿಗರಿಗೆ ಕೊನೆಯಲ್ಲಾದರೂ ಜ್ಞಾನೋದಯ ಆಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಬೈಂದೂರಿನಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ತಾವು ಮಾಡಿದ್ದು ತಪ್ಪು ಎಂಬ ಮಾತು ಹೇಳಿದ್ದಾರೆ. ಈಗಲಾದರೂ ಅವರಿಗೆ ಜ್ಞಾನೋದಯ ಆಗಿದೆ ಎಂದು ಅವರು ಹೇಳಿದರು.
ಕೈಮುಗಿದು ಸಾರ್ವಜನಿಕವಾಗಿ ಕ್ಷಮಾಪಣೆ ಕೇಳಿದ ಸಚಿವ ಡಿ.ಕೆ.ಶಿವಕುಮಾರ್
70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ನಾಯಕರು ದೇಶದಲ್ಲಿ ಜಾತಿ, ಧರ್ಮ ಒಡೆಯುವುದನ್ನೇ ಮಾಡಿದ್ದಾರೆ.ಧರ್ಮವನ್ನು ಒಡೆದು ಅಧಿಕಾರದಲ್ಲಿ ಉಳಿಯಬೇಕು ಎಂಬ ದುರಾಸೆಯಲ್ಲಿದ್ದಾರೆ. ರಾಜ್ಯದ ಜನಕ್ಕೆ ಇದು ಅರ್ಥ ಆಗಿದೆ. ಕಾಂಗ್ರೆಸ್ಸಿಗರ ಮುಖವಾಡ ಕಳಚಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಜನರು ಕಾಂಗ್ರೆಸ್ ಅನ್ನು 120 ಸ್ಥಾನದಿಂದ 78ಕ್ಕೆ ಇಳಿಸಿದ್ದಾರೆ. ಈಗ 78 ಸ್ಥಾನ 8 ಕ್ಕೆ ಕುಸಿಯುವ ಸೂಚನೆ ರಾಜ್ಯದಲ್ಲಿ ಕಾಣುತ್ತಿದೆ ಎಂದರು.
ಲಿಂಗಾಯತ ಪ್ರತ್ಯೇಕ ಧರ್ಮ ಹೇಳಿಕೆ: ಡಿಕೆಶಿ ಮೇಲೆ ಎಂಬಿ.ಪಾಟೀಲ್ ಕಿಡಿ
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ. ಒಳ ಜಗಳ, ಅಸೂಯೆ, ಕಿತ್ತಾಟ ನಡೆಯುತ್ತಲೇ ಇರುತ್ತದೆ. ಮಂತ್ರಿ ಆಗದವರಿಗೆ, ಆದವರಿಗೂ ಅಸಮಾಧಾನ ಎನ್ನುವ ಪರಿಸ್ಥಿತಿ ಇದೆ. ಎಂ.ಬಿ ಪಾಟೀಲ್, ಕುಲಕರ್ಣಿ ಅವರನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಜಾತಿ ಒಡೆಯುವುದಕ್ಕೆ ಪ್ರಯತ್ನ ಮಾಡಿದರು. ಆದರೆ ಇವತ್ತು ಅದೇ ಎಂ.ಬಿ ಪಾಟೀಲ್ ಅವರನ್ನು ದೂರ ಇಟ್ಟಿದ್ದಾರೆ. ಕಾಂಗ್ರೆಸ್ನದ್ದು ಕೇವಲ ಅವಕಾಶವಾದಿ ರಾಜಕಾರಣ ಎಂದು ಟೀಕಿಸಿದರು.
ಕಾಂಗ್ರೆಸ್ನವರದ್ದು ಯೂಸ್ ಆಂಡ್ ಥ್ರೋ ಪಾಲಿಸಿ. ಉಪಯೋಗಿಸು ಮತ್ತು ಬಿಸಾಡು ಎಂಬ ನೀತಿಯನ್ನು ಕಾಂಗ್ರೆಸ್ ಹಿರಿಯ ನಾಯಕರು ಈ ಹಿಂದಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಕರ್ನಾಟಕದಲ್ಲಿ ಅದನ್ನೇ ಕಾಂಗ್ರೆಸ್ ನಾಯಕರು ಪಾಲನೆ ಮಾಡಿದ್ದಾರೆ. ಮುಂದಿನ ದಿನದಲ್ಲಿ ಕಾಂಗ್ರೆಸ್ ಅನ್ನು ರಾಜ್ಯದ ಜನ ಕಸದ ಬುಟ್ಟಿಗೆ ಹಾಕ್ತಾರೆ ಎಂದು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ಮತ್ತೆ ಮುನ್ನೆಲೆಗೆ: ಸಿಎಂ ಹೇಳಿದ್ದು ಏನು?
ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಬಾರದು ಎನ್ನುವ ನಿಲುವಿಗೆ ಬಿ.ಜೆ.ಪಿ ಬದ್ಧವಾಗಿದೆ. ರಾಜ್ಯ ಸರಕಾರ ಆಚರಣೆ ಮಾಡಿದರೆ ನಾವು ವಿರೋಧ ಮಾಡ್ತೇವೆ. ಸಿದ್ದರಾಮಯ್ಯ ಸರ್ಕಾರ ಮಾಡಿದ ತಪ್ಪನ್ನು ಕುಮಾರಸ್ವಾಮಿ ಮಾಡಬಾರದು.
ಟಿಪ್ಪು ಜಯಂತಿಯಿಂದ ಯಾರು ಉದ್ಧಾರ ಆಗಿಲ್ಲ. ಯಾರಿಗೂ ಲಾಭ ಆಗಿಲ್ಲ. ಕೇವಲ ಸಮಾಜವನ್ನು ಒಡೆದಿದೆ, ಸಂಘರ್ಷ ಉಂಟು ಮಾಡಿದೆ. ಹಲವಾರು ಜನರ ಮೇಲೆ ಕೇಸ್ ಇದೆ. ಜೈಲಿಗೆ ಹೋಗಿದ್ದಾರೆ. ಮತಾಂಧ ಟಿಪ್ಪುವಿನ ಜಯಂತಿ ಯಾವ ಕಾರಣಕ್ಕೂ ಆಚರಿಸಬಾರದು ಎಂದು ಅವರು ಒತ್ತಾಯಿಸಿದರು.
ಮೈಸೂರಿನಲ್ಲಿ ಕಿತ್ತಾಟದ ರಾಜಕೀಯ ನಡೆಯುತ್ತದೆ. ಸಾ.ರಾ. ಮಹೇಶ್, ಜಿ.ಟಿ. ದೇವೆಗೌಡ ಕಿತ್ತಾಡಿಕೊಳ್ಳುತ್ತಿದ್ದಾರೆ. ಜೆ.ಡಿ.ಎಸ್ ನ ಒಳಗೆಯೇ ಕಿತ್ತಾಟ ಶುರುವಾಗಿದೆ. ಕಾಂಗ್ರೆಸ್ ನ ಯಾವುದೇ ಶಾಸಕರು ದಸರಾದಲ್ಲಿ ಭಾಗವಹಿಸಿಲ್ಲ. ಕಾಂಗ್ರೆಸ್ ನಾಯಕರು ದಸರಾ ಕಾರ್ಯಕ್ರಮ ವನ್ನೇ ಬಹಿಷ್ಕಾರ ಮಾಡಿದ್ದಾರೆ.
ಕಾಂಗ್ರೆಸ್ ನ ಒಬ್ಬನೇ ಒಬ್ವ ಕಾರ್ಯಕರ್ತನು ದಸರಾ ಕಮಿಟಿಗೆ ಹೋಗಿಲ್ಲ. ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರೀ ದಸರಾ ಕಮಿಟಿಯೇ ರಚನೆ ಆಗಿಲ್ಲ ಎಂದರು.
ಸ್ಟ್ರೀಟ್ ಫೆಸ್ಟಿವಲ್ ನಲ್ಲಿ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಆಗಿದೆ. 150 ಜನ ಹೆಣ್ಣುಮಕ್ಕಳು ನಮ್ಮಮೇಲೆ ದೌರ್ಜನ್ಯ ಆಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಇವತ್ತಿನವರೆಗೂ ಒಂದೇ ಒಂದು ಕೇಸ್ ಪತ್ತೆ ಮಾಡಿಲ್ಲ. ಮೊದಲ ಬಾರಿ ತಾಯಿ ಚಾಮುಂಡೇಶ್ವರಿಯ ದಸರಾದಲ್ಲಿ ಈ ರೀತಿ ಹೆಣ್ಮಕ್ಕಳ ಮೇಲೆ ಕೈ ಮಾಡುವಂತದ್ದು ನಡೆದಿದೆ. ಇದಕ್ಕೆ ಈ ಸರ್ಕಾರನೇ ಜವಾಬ್ದಾರಿ ಹೊರಬೇಕು. ಸರ್ಕಾರ ಇದೆಯಾ ಸತ್ತಿದೆಯಾ ಎಂಬ ಪ್ರಶ್ನೆಯನ್ನು ಕೇಳಬೇಕಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.