ಸಿದ್ದರಾಮಯ್ಯ ಹಿಂದಿ ಹೇರಿಕೆ ಮಾತಿಗೆ ಶೋಭಾ ತಿರುಗೇಟು
ಉಡುಪಿ, ಜೂನ್ 03: ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆಯನ್ನು ಹೇರುತ್ತಿದ್ದಾರೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ದ ಸಂಸದೆ ಶೋಭಾ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಯಾರೂ ಆಕ್ರೋಶ ವ್ಯಕ್ತಪಡಿಸುವ ಅಗತ್ಯ ಇಲ್ಲ. ಮೊದಲು ರಾಜ್ಯದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಿ ಎಂದು ತಿರುಗೇಟು ನೀಡಿದ್ದಾರೆ.
ಹಿಂದಿ ಹೇರಿಕೆ ವಿರುದ್ಧ ಸಿದ್ದರಾಮಯ್ಯ ಗರಂ, ಒಗ್ಗೂಡಲು ಕರೆ
ಬೆಂಗಳೂರಲ್ಲಿ ಜನ ಕನ್ನಡವೇ ಮಾತಾಡಲ್ಲ. ರಾಜ್ಯ ಸರ್ಕಾರ ಮೊದಲು ಕನ್ನಡಕ್ಕೆ ಆದ್ಯತೆ ಕೊಡಲಿ. ಕೇವಲ ಹಿಂದಿ ಹೇರಿಕೆ ಮಾಡ್ತಾರೆ ಅಂದುಕೊಂಡರೆ ಕನ್ನಡದ ಅಭಿವೃದ್ದಿ ಆಗಲ್ಲ. ಎಲ್ಲಾ ಭಾಷೆಗಳನ್ನು ನಾವು ಕಲಿಯಬೇಕು, ಭಾಷೆ ಕಲಿಯಲು ವಿರೋಧ ಬೇಡ. ನಾನು ದೆಹಲಿಗೆ ಹೋಗಿ ಕನ್ನಡದಲ್ಲಿ ಮಾತಾಡಿದ್ರೆ ಅಧಿಕಾರಿಗಳಿಗೆ ಅರ್ಥ ಆಗಲ್ಲ. ಲೋಕಸಭೆಯಲ್ಲಿ ಕನ್ನಡ ಮಾತಾಡಿದ್ರೆ ಬೆರೆಯವರಿಗೆ ಅರ್ಥ ಆಗಲ್ಲ ಎಂದರು.
ದಕ್ಷಿಣ ಭಾರತೀಯರು ಉತ್ತರದವರಿಗೂ ಅರ್ಥ ಆಗುವ ಭಾಷೆ ಕಲಿಯಬೇಕು. ಇದನ್ನು ಯಾರು ಬೇಕಾದರೂ ವಿರೋಧಿಸಲಿ. ಎಲ್ಲಾ ಭಾಷೆ ಕಲಿಯೋಣ, ಕನ್ನಡಕ್ಕೆ ಆದ್ಯತೆ ಕೊಡೋಣ ಎಂದು ಹೇಳಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡ ಸಂಸ್ಕೃತಿ ಇಲಾಖೆಗೆ ಕೊಟ್ಟ ಹಣ ಅಮೇರಿಕಾಗೆ ಹೋಗಲು ಖರ್ಚು ಮಾಡಿದ್ರು. ಆದರೆ ಈಗ ಹಿಂದಿ ಹೇರಲಾಗುತ್ತಿದೆ ಎಂದು ಆರೋಪಿಸುತ್ತಾರೆ ಎಂದು ಅವರು ಕಿಡಿಕಾರಿದರು.