ಶೋಭಾ ಕರಂದ್ಲಾಜೆಗೆ ಬೆದರಿಕೆ ಕರೆ: ವಿಡಿಯೋ ಮಾಡಿ ಬೇಸರ ಹಂಚಿಕೊಂಡ ಸಂಸದೆ
ಉಡುಪಿ, ಮೇ 05: ತಮಗೆ ನಿರಂತರ ಬೆದರಿಕೆ ಕರೆ ಬರುತ್ತಿದೆ ಎಂದು ವಿಡಿಯೋ ಮಾಡಿ ಬೇಸರ ತೋಡಿಕೊಂಡಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ. ತಮಗೆ ದುಬೈ, ಮಸ್ಕತ್ ನಿಂದ ನಿರಂತರವಾಗಿ ಬೆದರಿಕೆ ಕರೆಬರುತ್ತಿದೆ. ಇದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ವಿಚಾರಗಳು ಹರಿದಾಡುತ್ತಿವೆ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂಗತಿಗಳನ್ನು ವಿಡಿಯೋ ಮಾಡಿ ಈ ಮೂಲಕ ಹೇಳಿಕೊಂಡಿರುವ ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಇದಕ್ಕೆ ಹಲವು ಕಾರಣಗಳನ್ನೂ ನೀಡಿದ್ದಾರೆ.
ಅವರು ನಮ್ಮ ದೇಶದ ಪ್ರಜೆಗಳಂತೆ ನಡೆದುಕೊಳ್ಳುತ್ತಿಲ್ಲ: ಸಂಸದೆ
"ಘಟನೆ ವಿರುದ್ಧ ಸಿಡಿದಿದ್ದಕ್ಕೆ ಈ ಬೆದರಿಕೆ"
"ಕೇರಳದ ಹಿಂದೂ ಕಾರ್ಯಕರ್ತನೊಬ್ಬನ ಮೇಲೆ ಮಸ್ಕತ್ ನಲ್ಲಿ ಹಲ್ಲೆ ನಡೆದಿತ್ತು. ಈ ಘಟನೆಯ ವಿರುದ್ಧ ನಾನು ಸಿಡಿದೆದ್ದಿದ್ದೆ. ಈ ಕಾರಣಕ್ಕೇ ನನಗೆ ಹೀಗೆ ಬೆದರಿಕೆ ಕರೆಗಳು ಬರುತ್ತಿವೆ" ಎಂದು ಹೇಳಿಕೊಂಡಿದ್ದಾರೆ.
"ಗೃಹ ಸಚಿವರಿಗೆ ಪತ್ರ ಬರೆದಿದ್ದೆ"
ಈ ರೀತಿ ಬೆದರಿಕೆ ಕರೆಗಳು ಹೆಚ್ಚುತ್ತಿದ್ದ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದೆ. ನನಗೆ ದಿನನಿತ್ಯ ನೂರಾರು ಬೆದರಿಕೆ, ಅಶ್ಲೀಲ ಕರೆಗಳು ಬರುತ್ತಿವೆ. ಕೆಲವರಂತೂ ದುರುದ್ದೇಶದಿಂದ ಫೋನಿನ ಮೇಲೆ ಫೋನ್ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
"ಒಂದೂವರೆ ತಿಂಗಳಿಂದ ವಿಶ್ರಾಂತಿ ಇಲ್ಲ"
ಒಂದೂವರೆ ತಿಂಗಳಿಂದ ಒಂದು ದಿನವೂ ನಾನು ವಿಶ್ರಾಂತಿ ಪಡೆದಿಲ್ಲ. ನಾನು ಜನ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಕೊರೊನಾ ಸಂದರ್ಭ ಅಕ್ಕಿ ದವಸ ಧಾನ್ಯಗಳನ್ನು ನಿರಂತರವಾಗಿ ವಿತರಿಸಿದ್ದೇನೆ. ಒಂದು ದಿನವೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ನನ್ನ ವಿರುದ್ಧದ ವಿಚಾರ ಹರಿದಾಡುತ್ತಿದೆ. ಆದರೂ ನನಗೆ ಈ ಬಗ್ಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ.
ಸೋಮವಾರ ಜಿಲ್ಲೆಯ ನಾಗರಿಕರೊಬ್ಬರು ಸಂಸದೆ ಶೋಭಾ ಕರಂದ್ಲಾಜೆ ಜೊತೆಯಲ್ಲಿ ಲಾಕ್ಡೌನ್ ಕುರಿತು ಮಾತನಾಡಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಆಡಿಯೋದಲ್ಲಿ ಉಡುಪಿ ವ್ಯಕ್ತಿ ಲಾಕ್ಡೌನ್ ಸಡಿಲಿಕೆ ವಿಷಯದಲ್ಲಿ ಮಾಹಿತಿ ಕೇಳಿದಾಗ ಲಾಕ್ಡೌನ್ ಸಡಿಲಿಕೆ ಮಾಡಿರುವುದು ನನಗೆ ತಿಳಿದಿಲ್ಲ ಎಂಬಂತೆ ಅವರು ಮಾತನಾಡಿದ್ದಾರೆ ಎನ್ನಲಾಗಿತ್ತು.
"ಜಿಹಾದಿಗಳು ನನ್ನನ್ನು ಟಾರ್ಗೆಟ್ ಮಾಡಿದ್ದಾರೆ"
ದುಬೈ ಮಸ್ಕತ್ ಮಧ್ಯ ಪ್ರಾಚ್ಯ ದೇಶದಿಂದ ನೂರಾರು ಬೆದರಿಕೆ ಕರೆ ಬರುತ್ತಿದೆ. ವಾಯ್ಸ್ ರೆಕಾರ್ಡ್ ಹಿಂದಿರುವ ದುರುದ್ದೇಶವನ್ನು ಕಾರ್ಯಕರ್ತರು ಅರ್ಥ ಮಾಡಿಕೊಳ್ಳಿ. ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಬ್ಲಾಕ್ ಡೌನ್ ಸಂದರ್ಭ ನಾನಂತೂ ವಿಶ್ರಾಂತಿ ತೆಗೆದುಕೊಂಡಿಲ್ಲ. ಜಿಹಾದಿಗಳು ಎರಡು ಮೂರು ವರ್ಷಗಳಿಂದ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಪೊಲೀಸರಿಗೆ ಈ ಬಗ್ಗೆ ಹಲವಾರು ಬಾರಿ ದೂರು ನೀಡಿದ್ದೇನೆ. ಆದರೆ ಕರೆ ಮಾಡಿದ ಆರೋಪಿಗಳನ್ನು ಈವರೆಗೆ ಪತ್ತೆ ಹಚ್ಚಿಲ್ಲ. ದೆಹಲಿ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದೇನೆ ಎಂದು ವಿಡಿಯೋದಲ್ಲಿ ಮಾತನಾಡಿದ್ದಾರೆ.