ಶಿರ್ವ ಫಾದರ್ ಮಹೇಶ್ ಡಿಸೋಜಾದ್ದು ಆತ್ಮಹತ್ಯೆಯೇ? ಸಂಚಿನ ಕೊಲೆಯೇ?
ಉಡುಪಿ, ನವೆಂಬರ್ 4: ಉಡುಪಿಯ ಶಿರ್ವದಲ್ಲಿ ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿದ್ದ ಸಹಾಯಕ ಧರ್ಮಗುರು ಮಹೇಶ್ ಡಿಸೋಜ ಅವರದ್ದು ನಿಜಕ್ಕೂ ಆತ್ಮಹತ್ಯೆಯೇ ಅಥವಾ ಇದೊಂದು ಸಂಚಿನ ಕೊಲೆಯೇ? ಕಳೆದೆರಡು ದಿನಗಳಿಂದ ಇಲ್ಲಿನ ಕ್ರೈಸ್ತರು ಮಾಡುತ್ತಿರುವ ಸರಣಿ ಪ್ರತಿಭಟನೆ ಈ ಪ್ರಶ್ನೆಯನ್ನು ಮತ್ತೆ ಮತ್ತೆ ಮುಂದೆ ತರುತ್ತಿವೆ.
ಖಿನ್ನತೆಗೆ ಒಳಗಾಗಿ ಉಡುಪಿಯಲ್ಲಿ ಸಹಾಯಕ ಪಾದ್ರಿ ಆತ್ಮಹತ್ಯೆ
ಶನಿವಾರ ರಾತ್ರಿ ದಿಢೀರ್ ಪ್ರತಿಭಟನೆಗೆ ಇಳಿದಿದ್ದ ಫಾದರ್ ಮಹೇಶ್ ಡಿಸೋಜಾ ಅವರ ಬೆಂಬಲಿಗರು ನಿನ್ನೆ ಮತ್ತೆ ಶಿರ್ವ ದೇವಾಲಯದ ವಠಾರದಲ್ಲಿ ಜಮಾಯಿಸಿ ಪ್ರತಿಭಟನೆ ಹಮ್ಮಿಕೊಂಡು ಆಕ್ರೋಶ ಹೊರಹಾಕಿದ್ದಾರೆ. ಸ್ಥಳೀಯ ಪೊಲೀಸರಲ್ಲದೆ ಜಿಲ್ಲಾ ಎಸ್ಪಿ ನಿಶಾ ಜೇಮ್ಸ್ ಮತ್ತು ಬಿಷಪ್ ಅವರೇ ಭೇಟಿ ಕೊಟ್ಟು ಸಮಾಧಾನ ಮಾಡಿದರೂ ಪ್ರತಿಭಟನಾಕಾರರು ಸುಮ್ಮನಾಗಲಿಲ್ಲ.
ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ ಫಾದರ್
ಅಕ್ಟೋಬರ್ ಹನ್ನೊಂದರಂದು ಉಡುಪಿಯ ಶಿರ್ವ ಡೋನ್ ಬಾಸ್ಕೊ ಶಾಲೆಯ ಪ್ರಾಂಶುಪಾಲ ಮಹೇಶ್ ಡಿಸೋಜಾ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿತ್ತು. ತಮ್ಮ ಶಾಲೆಯ ಕ್ಯಾಬಿನ್ ಒಳಗೆ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು. ಸಹಾಯಕ ಪಾದ್ರಿಯೂ ಆಗಿದ್ದ ಮಹೇಶ್ ಅವರಿಗೆ ಮೂವತ್ತಾರು ವರ್ಷ ವಯಸ್ಸಾಗಿತ್ತು. ಉಡುಪಿ ಧರ್ಮಪ್ರಾಂತ್ಯ ಉದಯದ ಬಳಿಕ ಮೊದಲ ಧರ್ಮಗುರು ಆಗಿದ್ದ ಮಹೇಶ್ ಡಿಸೋಜಾ ಮೂಲತಃ ಮೂಡಬೆಳ್ಳೆಯವರು. ಖಿನ್ನತೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದರು. ಫಾದರ್ ಯಾವುದೇ ಡೆತ್ ನೋಟ್ ಅನ್ನೂ ಬರೆದಿರಲಿಲ್ಲ.
ಆರು ವರ್ಷಗಳ ಹಿಂದೆ, ಅಂದರೆ 2013ರಲ್ಲಿ ಅವರು ಗುರು ದೀಕ್ಷೆ ಪಡೆದಿದ್ದರು. ಮಾನಸಿಕ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅವರನ್ನು ಹತ್ತಿರದಿಂದ ಬಲ್ಲವರು ತಿಳಿಸಿದ್ದರು. ಶಿರ್ವದ ಡಾನ್ ಬಾಸ್ಕೊ ಶಾಲೆ ಶಿರ್ವ ಆರೋಗ್ಯ ಮಾತಾ ಇಗರ್ಜಿ ಆಡಳಿತಕ್ಕೆ ಒಳಪಟ್ಟಿದೆ. ಮಹೇಶ್ ಅವರು ಸಾಯುವ ದಿನ ಶುಕ್ರವಾರ ಚರ್ಚ್ನಲ್ಲಿ ವಿಶೇಷ ಪೂಜೆ, ಆರಾಧನೆ ನೆರವೇರಿಸಿದ್ದರು. ಶಿಕ್ಷಕರಿಗೆ ವಿಶೇಷ ತರಬೇತಿ ನೀಡಿದ್ದರು. ತಾನೇ ಮುಂದೆ ನಿಂತು ರೂಪಿಸಿದ್ದ ಶಾಲೆ ಅಂತಸ್ತುಗಳಲ್ಲಿ ಹಲವು ಬಾರಿ ಓಡಾಡಿ ಕಣ್ತುಂಬಿಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಎದ್ದ ವಿವಾದ
ಫಾದರ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದಲೂ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಒಂದು ಗುಂಪು ವಾದಿಸುತ್ತಿದೆ. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣಗಳೂ ಕೆಲಸ ಮಾಡಿವೆ. ಕೆಲವರು ಇದೊಂದು ಕೊಲೆ, ಈ ಪ್ರಕರಣದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಫೇಸ್ ಬುಕ್ ಗಳಲ್ಲಿ ಬರೆದದ್ದೂ ಈ ಪ್ರಶ್ನೆಗಳು ಮತ್ತಷ್ಟು ಜಟಿಲಗೊಳ್ಳುವಂತೆ ಮಾಡಿವೆ.
ಪೊಲೀಸರು ಈಗಾಗಲೇ ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ಸಾವಿನ ಸಂದರ್ಭ, ಸಿಸಿಟಿವಿ ಫುಟೇಜ್, ಸಾಕ್ಷ್ಯಗಳ ಸಂಗ್ರಹ ಮಾಡಿರುವ ಪೊಲೀಸರು ಈತನಕ ಕೊಲೆಯ ಅನುಮಾನ ವ್ಯಕ್ತಪಡಿಸಿಲ್ಲ. ಬದಲಾಗಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೇ ಹೇಳುತ್ತಿದ್ದಾರೆ. ನಿನ್ನೆ ಸ್ಥಳಕ್ಕೆ ಬಂದ ಎಸ್ಪಿ ಕೂಡ ಇದೇ ಮಾತನ್ನು ಹೇಳಿದ್ದಾರೆ. ಪೊಲೀಸರ ತನಿಖೆಯಲ್ಲಿ ಕೊಲೆಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನೂ ಅನುಮಾನಗಳಿದ್ದರೆ ಉನ್ನತ ತನಿಖೆ ಆಗಲಿ ಎಂದು ಎಸ್ಪಿ ನಿಶಾ ಜೇಮ್ಸ್ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದ್ದಾರೆ.
ಸಹಾಯಕ ಧರ್ಮಗುರು ಮಹೇಶ್ ಸಾವು ಪ್ರಕರಣದ ತನಿಖೆಗಾಗಿ ಭಾರೀ ಪ್ರತಿಭಟನೆ
ವೈರಲ್ ಆಗಿರುವ ಫಾದರ್ ತಾಯಿ ಮಾತು
ಯುವ ಧರ್ಮಗುರು ಮತ್ತು ಡಾನ್ ಬಾಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಿನ್ಸಿಪಾಲ್ ಫಾದರ್ ಮಹೇಶ್ ಡಿಸೋಜರ ಆತ್ಮಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಫಾದರ್ ತಾಯಿ ಆಡಿರುವ ಮಾತು ಇದೀಗ ವೈರಲ್ ಆಗಿದೆ. ಪ್ರತಿಭಟನಾಕಾರರೊಬ್ಬರು ಅವರ ತಾಯಿಯೊಂದಿಗೆ ಫೋನ್ ಸಂಭಾಷಣೆ ಮಾಡಿದ ಆಡಿಯೊ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲಾ ಎಸ್ಪಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಫಾ. ಮಹೇಶ್ ಡಿಸೋಜರ ಆತ್ಮಹತ್ಯೆಯ ತನಿಖೆಯ ಬಗ್ಗೆ ಯಾವುದೇ ಸಂಶಯ ಇಲ್ಲ ಮತ್ತು ಕೇಸನ್ನು ಮುಂದುವರಿಸಲು ತಮಗೆ ಇಷ್ಟವಿಲ್ಲ ಎಂದು ಫಾ. ಮಹೇಶ್ ಡಿಸೋಜ ಅವರ ಮನೆಯವರು ಹೇಳಿದ್ದರೆ೦ದು ಪ್ರತಿಭಟನಾಕಾರರಿಗೆ ತಿಳಿಸಿದರು. ಆದರೆ ಪ್ರತಿಭಟನಾಕಾರರಲ್ಲಿ ಒಬ್ಬರು ಫಾದರ್ ತಾಯಿಗೆ ಸಂಪರ್ಕ ಮಾಡಿದ್ದು ಎನ್ನಲಾದ ಫೋನ್ ಸಂಭಾಷಣೆಯ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.
ಪ್ರತಿಭಟನಾಕಾರರು ಫಾ. ಮಹೇಶ್ ಡಿಸೋಜ ಅವರ ತಾಯಿಗೆ ಫೋನ್ ಸ೦ಪರ್ಕ ಮಾಡುತ್ತಾ, "ನಿಮ್ಮ ಮಗನ ಸಾವಿನ ಬಗ್ಗೆ ಪ್ರತಿಭಟನೆ ಮಾಡುತ್ತಿದ್ದೇವೆ. ನೀವು ಈಗಾಗಲೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದೀರ? ಎಂದು ಕೇಳಿದ್ದು, ಅವರ ತಾಯಿ ಉತ್ತರಿಸುತ್ತಾ, "ನಾವು ನಮ್ಮ ಮಗನನ್ನು ಉಡುಪಿ ಧರ್ಮ ಪ್ರಾಂತ್ಯಕ್ಕೆ ಸಮರ್ಪಿಸಿದ್ದೇವೆ. ನಾವು ಮುಂದಕ್ಕೆ ಹೋಗುವುದಿಲ್ಲ. ಬದಲಾಗಿ ನೀವೇ ಮುಂದಕ್ಕೆ ಹೋಗಿ. ಆ ವೇಳೆ ನಮ್ಮ ಮಗನಿಗೆ ಏನಾಯಿತೋ ಗೊತ್ತಿಲ್ಲ. ನಿಮ್ಮ ವ್ಯವಸ್ಥೆಯಲ್ಲಿ ನಮಗೆ ನ್ಯಾಯ ದೊರಕಿಸಿಕೊಡಿ ಎಂದು ಧರ್ಮಾಧ್ಯಕ್ಷ ರಲ್ಲಿ ಹೇಳಿದ್ದೇವೆ" ಎಂದು ಹೇಳಿದ್ದಾರೆ. ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸುತ್ತೀರಾ ಎಂಬ ಮಾತಿಗೆ, "ನಾವು ನಿಮಗೆ ಬೆಂಬಲ ಕೊಡುತ್ತೇವೆ. ಆದರೆ ಯಾವುದಕ್ಕೂ ಸಹಿ ಮಾಡುವುದಿಲ್ಲ. ನಾವು ದೈಹಿಕವಾಗಿ ಬಹಳಷ್ಟು ನೊಂದಿದ್ದೇವೆ. ಧರ್ಮಕ್ಷೇತ್ರದಿಂದ ನಮಗೆ ನ್ಯಾಯ ಬೇಕು. ಅಷ್ಟು ಮಾತ್ರ ಹೇಳಬಲ್ಲೆ. ಬೇರೇನನ್ನೂ ಹೇಳಲು ಸಾಧ್ಯವಿಲ್ಲ" ಎಂದು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಸೂಕ್ತ ತನಿಖೆಗೆ ಒತ್ತಾಯ
ಬಿಷಪ್ ಮನವೊಲಿಕೆಗೂ ಕ್ರೈಸ್ತರು ಬಗ್ಗಲಿಲ್ಲ. ನಿನ್ನೆ ನಿಗದಿಯಂತೆ ಚರ್ಚ್ ವಠಾರದಲ್ಲಿ ಸಭೆ ನಡೆದು ಬಳಿಕ ಅದು ಪ್ರತಿಭಟನೆಯಾಗಿ ಮಾರ್ಪಟ್ಟು ಬಿಷಪ್ ಅವರು ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಹರಸಾಹಸಪಡಬೇಕಾಯಿತು. "ಫಾ. ಮಹೇಶ್ ಡಿಸೋಜಾರವರ ಸಾವಿನಲ್ಲಿ ಯಾವುದೇ ಸಂಶಯವಿಲ್ಲ. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ಗೊತ್ತಾಗಿದೆ" ಎಂದಿದ್ದರು. ಇದಕ್ಕೂ ಒಪ್ಪದ ಪ್ರತಿಭಟನಾಕಾರರು ಮಹೇಶ್ ಡಿಸೋಜ ಆತ್ಮಹತ್ಯೆ ಮಾಡುವಂತಹ ವ್ಯಕ್ತಿಯಲ್ಲ, ಇದೊಂದು ಕೊಲೆ. ಹೀಗಾಗಿ ಸೂಕ್ತ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
"ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಇರಲಿಲ್ಲ"
ಶಾಲೆಯ ಬಗ್ಗೆ ಅಪಾರ ಪ್ರೀತಿ ಹೊಂದಿದ್ದ ಮಹೇಶ್ ಡಿಸೋಜಾ ತಮ್ಮ ಶಿಸ್ತಿನ ಜೀವನದಿಂದ ವಿದ್ಯಾರ್ಥಿಗಳ ಮತ್ತು ಊರವರ ಮನಸ್ಸನ್ನು ಗೆದ್ದಿದ್ದರು. ಫಾದರ್ ಬಹಳ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದು ಅವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣಗಳೇ ಇಲ್ಲ. ಅವರ ಸಾವಿನ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ. ಹೀಗಾಗಿ ಈ ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ಆಗಬೇಕು ಎಂಬುದು ಒಂದು ವರ್ಗದ ಕ್ರೈಸ್ತರ ಆಗ್ರಹ. ಪೊಲೀಸರ ಮೇಲೂ ದಿನೇ ದಿನೇ ಒತ್ತಡ ಜಾಸ್ತಿಯಾಗುತ್ತಿದ್ದು, ಉನ್ನತ ಮಟ್ಟದ ತನಿಖೆ ಮಾಡಿದರೆ ಸತ್ಯಾಂಶ ಹೊರಬರಬಹುದು.