ಶಿರೂರು ಶ್ರೀ ಸಾವು : ಬುರ್ಖಾ ಧರಿಸಿ ಪರಾರಿಗೆ ಯತ್ನ, ಮಹಿಳೆ ವಶಕ್ಕೆ
Recommended Video
ಉಡುಪಿ, ಜುಲೈ 24: ಶಿರೂರು ಶ್ರೀ ಅಸಹಜ ಸಾವು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿದ್ದ ಮಹಿಳೆ ಬುರ್ಖಾ ಧರಿಸಿ ಪರಾರಿಯಾಗಲು ಯತ್ನಿಸಿದ್ದರು. ಆದರೆ, ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಆ ಮಹಿಳೆ ಬುರ್ಖಾ ಧರಿಸಿಕೊಂಡು ಮೂವರು ಮಹಿಳೆಯರ ಜತೆ ಎರ್ಟಿಗಾ ಕಾರ್ನಲ್ಲಿ ಪರಾರಿಯಾಗುತ್ತಿದ್ದರು. ಈ ವೇಳೆ ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿ ಶ್ರೀ ಸತ್ಯದೇವತೆ ದೇವಸ್ಥಾನ ಬಳಿ ಕಾರ್ ಪಂಕ್ಚರ್ ಆಗಿದೆ.
ಗ್ಯಾರೇಜ್ ಅಂಗಡಿ ಪಕ್ಕ ನಿಂತಿದ್ದ ಕಾರ್ ಕಂಡು ಅನುಮಾನಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು?
ಉಡುಪಿ ಪೊಲೀಸರ ಸೂಚನೆ ಮೇರೆಗೆ ಅವರ ಕಾರ್ ಹಿಂಬಾಲಿಸಿಕೊಂಡು ಬಂದಿದ್ದ ವೇಣೂರು ಪೊಲೀಸರು ಆ ಮಹಿಳೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಶಿರೂರು ಶ್ರೀ ಅವರಿಗೆ ಆಪ್ತರಾಗಿದ್ದಾರೆನ್ನಲಾದ ಆ ಮಹಿಳೆ ಸೇರಿದಂತೆ ಐವರನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಅವರನ್ನು ಉಡುಪಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ವಾಮೀಜಿ ಪರಮಾಪ್ತೆ
ಶಿರೂರು ಸ್ವಾಮೀಜಿಗಳಿಗೆ ಮಹಿಳೆಯ ನಂಟು ಇರುವುದು ತನಿಖೆ ವೇಳೆ ಬಯಲಾಗಿತ್ತು. ಈ ಸಂಬಂಧ ಪೊಲೀಸರು ಬ್ರಹ್ಮಾವರದ ಅವರನ್ನು ವಿಚಾರಣೆಗೆಂದು ವಶಕ್ಕೆ ತೆಗೆದುಕೊಂಡಿದ್ದರು.
ಪ್ರತಿ ಸೋಮವಾರ ಶ್ರೀಗಳಿಗೆ ಊಟ ತರುತ್ತಿದ್ದ ಅವರು, ಮಠದಲ್ಲಿ ಉಳಿಯುತ್ತಿದ್ದರು. ಅವರ ಜೊತೆ ಅವರ ತಾಯಿ ಕೂಡ ಬರುತ್ತಿದ್ದರು. ಅವರು ಮೂಲತಃ ಸಿರ್ಸಿಯವರಾಗಿದ್ದು, ಹಲವು ಬಾರಿ ರಾತ್ರಿ ಮೂಲಮಠದಲ್ಲಿ ತಂಗಿದ್ದರು ಎಂದು ತಿಳಿದುಬಂದಿದೆ.
ಸ್ವಾಮೀಜಿ ಅವರು ತೊಡುತ್ತಿದ್ದ ಕಡಗ ಹಾಗೂ ಚಿನ್ನಾಭರಣಗಳನ್ನು ಧರಿಸಿ ಫೋಟೊ ಶೂಟ್ ಸಹ ಮಾಡಿಸಿಕೊಂಡಿದ್ದರು. ಈಗ ಅವರು ಪರಾರಿಯಾಗಲು ಯತ್ನಿಸಿದ್ದು ಅನುಮಾನಗಳನ್ನು ಮತ್ತಷ್ಟು ಬಲಗೊಳಿಸಿದೆ.
ಒಂದು ಡಿವಿಆರ್ ಪತ್ತೆ
ಮಠದ ಆವರಣದಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿನ ಡಿವಿಆರ್ ನಾಪತ್ತೆಯಾಗಿರುವುದು ವರದಿಯಾಗಿತ್ತು. ಆದರೆ ಎರಡು ಡಿವಿಆರ್ಗಳು ನಾಪತ್ತೆ ಆಗಿರುವುದು ಬೆಳಕಿಗೆ ಬಂದಿದ್ದು, ಅವುಗಳ ಪೈಕಿ ಒಂದು ಡಿವಿಆರ್ ಪತ್ತೆಯಾಗಿದೆ ಎನ್ನಲಾಗಿದೆ.
ಆದರೆ, ಆ ಡಿವಿಆರ್ ಕುರಿತು ಪೊಲೀಸರು ಯಾವುದೇ ಮಾಹಿತಿ ನೀಡಿಲ್ಲ.
ಶೀರೂರು ಶ್ರೀ ಆಸ್ಪತ್ರೆಯಲ್ಲಿದ್ದಾಗ ಮಠಕ್ಕೆ ಬಂದಿದ್ದ ಅಪರಿಚಿತ ಯಾರು?
ಬಾವಿಯಿಂದ ವಸ್ತುಗಳು ಹೊರಕ್ಕೆ
ಶಿರೂರು ಸ್ವಾಮಿಗಳ ಅಸಹಜ ಸಾವಿನ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಪೊಲೀಸರು, ಮಠದ ಸುತ್ತಮುತ್ತ ತೀವ್ರ ಪರಿಶೀಲನೆ ನಡೆಸುತ್ತಿದ್ದಾರೆ.
ಶಿರೂರು ಮಠ ಮತ್ತು ಕೃಷ್ಣಮಠದ ಪಕ್ಕದಲ್ಲಿರುವ ಬಾವಿಯಲ್ಲಿ ಶೋಧನೆ ನಡೆಸಿದ್ದು, ಅಲ್ಲಿ ಮದ್ಯದ ಬಾಟಲಿಗಳು ಸೇರಿದಂತೆ ವಿವಿಧ ವಸ್ತುಗಳು ದೊರೆತಿವೆ ಎನ್ನಲಾಗಿದೆ. ಅವುಗಳನ್ನು ಚೀಲದಲ್ಲಿರಿಸಿ ಪೊಲೀಸರು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ನಿಂದನೆ
ಶಿರೂರು ಶ್ರೀಗಳ ಸಾವಿನ ಸಮಗ್ರ ತನಿಖೆಗೆ ಆಗ್ರಹಿಸಿರುವ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾರ್ಹ ಬರಹಗಳನ್ನು ಪ್ರಕಟಿಸಲಾಗಿದೆ.
ಅಲ್ಲದೆ, ತಮಗೆ ಸಾಮಾಜಿಕ ಜಾಲತಾಣಗಳಲ್ಲಿ ಬೆದರಿಕೆಗಳು ಸಹ ಬರುತ್ತಿವೆ ಎಂದು ಸ್ವಾಮೀಜಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಶಿರೂರು ಶ್ರೀಗಳ ತನಿಖೆಯ ಭಾಗವಾಗಿಯೇ ತಮಗೆ ಬಂದಿರುವ ಬೆದರಿಕೆ ಹಾಗೂ ನಿಂದನಾತ್ಮಕ ಬರಹಗಳನ್ನು ಪರಿಗಣಿಸುವಂತೆ ಅವರು ಮನವಿ ಮಾಡಿದ್ದಾರೆ.
ವದಂತಿ ಹಬ್ಬಿಸಬೇಡಿ: ಪೊಲೀಸರ ಮನವಿ
ಶಿರೂರು ಶ್ರೀಗಳ ಅಸಹಜ ಸಾವಿಗೆ ಸಂಬಂಧಿಸಿದಂತೆ ಪರಿಶೀಲಿಸದೆಯೇ ಯಾವುದೇ ವರದಿ ಬಿತ್ತರಿಸದಂತೆ ಮಾಧ್ಯಮಗಳಿಗೆ ಪೊಲೀಸರು ಮನವಿ ಮಾಡಿದ್ದಾರೆ.
ಶ್ರೀಗಳಿಗೆ ಆಪ್ತರಾಗಿದ್ದ ಮಹಿಳೆ ಅವರಿಗೆ ವಿಷ ಬೆರೆಸಿದ ಜ್ಯೂಸ್ ನೀಡಿ ಕೊಂದಿದ್ದಾರೆ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಇದು ವದಂತಿ. ಈ ರೀತಿಯ ವರದಿಗಳನ್ನು ಪರಿಶೀಲಿಸದೆ ಪ್ರಸಾರ ಮಾಡಬೇಡಿ. ಇದರಿಂದ ತನಿಖೆಗೆ ಅಡ್ಡಿಯಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಶೀರೂರು ಶ್ರೀಗಳ ಅಸಹಜ ಸಾವು: ಉಡುಪಿ ಪೊಲೀಸರು ಮುಂಬೈಗೆ ತೆರಳಿದ್ದೇಕೆ?
ಮಠದ ಮಾಜಿ ಮ್ಯಾನೇಜರ್ ವಿಚಾರಣೆ
ಶಿರೂರು ಮಠದ ಮಾಜಿ ಮ್ಯಾನೇಜರ್ ಸುನಿಲ್ ಸಂಪಿಗೆತ್ತಾಯ ಹಾಗೂ ಸ್ವಾಮೀಜಿಗಳ ಜತೆ ಸಂಪರ್ಕ ಇರಿಸಿಕೊಂಡಿದ್ದ ಆಟೊ ಚಾಲಕನೊಬ್ಬನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಸ್ವಾಮೀಜಿ ಅವರ ಭೇಟಿಗೆ ನಿರಂತರವಾಗಿ ಬರುತ್ತಿದ್ದ ಮಹಿಳೆಯೊಬ್ಬರನ್ನು ಸಹ ವಿಚಾರಣೆಗೆ ಒಳಪಡಿಸಲಾಗಿದೆ. ಮಣಿಪಾಲದ ದುಗಲಿಪಡುವಿನ ಆಟೊ ಚಾಲಕನಿಗೆ ಸ್ವಾಮೀಜಿ ಆಟೊ ಖರೀದಿಗೆ ಹಣಕಾಸಿನ ನೆರವು ನೀಡಿದ್ದರು.
ಜ್ಯೂಸಿನ ಬಾಟಲಿಯಲ್ಲಿ ವಿಷ?
ಶಿರೂರು ಸ್ವಾಮೀಜಿಗಳು ಕುಡಿದ ಜ್ಯೂಸಿನ ಬಾಟಲಿಯಲ್ಲಿ ವಿಷಕಾರಕ ಅಂಶ ಪತ್ತೆಯಾಗಿದೆ ಎನ್ನಲಾಗಿದೆ. ಮಠದಲ್ಲಿ ಜ್ಯೂಸಿನ ಬಾಟಲಿ ಪತ್ತೆಯಾಗಿದ್ದು, ವಿಧಿವಿಜ್ಞಾನ ಪ್ರಯೋಗಾಲಯದ ವರದಿಗೆ ಕಾಯುತ್ತಿರುವುದಾಗಿ ಉಡುಪಿ ಪೊಲೀಸರು ತಿಳಿಸಿದ್ದಾರೆ.
ಜ್ಯೂಸಿನ ಬಾಟಲಿಯಲ್ಲಿ ಪತ್ತೆಯಾದ ವಿಷಕಾರಿ ಅಂಶದ ಕುರಿತು ಒಂದೆರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ.