ಶೀರೂರು ಶ್ರೀ ಲಕ್ಷ್ಮೀವರತೀರ್ಥ ಸ್ವಾಮೀಜಿ ವಿಧಿವಶ
Recommended Video
ಉಡುಪಿ, ಜು.19: ಉಡುಪಿಯ ಅಷ್ಠಮಠಾಧೀಶರಲ್ಲೊಬ್ಬರಾದ ಶೀರೂರು ಲಕ್ಷ್ಮೀವರ ತೀರ್ಥ ಶ್ರೀಗಳು(55) ಇಂದು(ಗುರುವಾರ)ಇಹಲೋಕ ತ್ಯಜಿಸಿದರು. ಬುಧವಾರ ಫುಡ್ ಪಾಯ್ಸನ್ ಹಿನ್ನೆಲೆಯಲ್ಲಿ ಮಣಿಪಾಲದ ಕೆಎಂಸಿಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶ್ರೀಗಳ ಆರೋಗ್ಯ ತೀರಾ ಹದಗೆಟ್ಟಿತ್ತು. ಚಿಕಿತ್ಸೆಗೆ ಅವರ ದೇಹ ಸ್ಪಂದಿಸುತ್ತಿರಲಿಲ್ಲ. ಅವರನ್ನು ವೆಂಟಿಲೇಟರ್ ನಲ್ಲಿ ಇಡಲಾಗಿತ್ತು ಎಂದು ತಿಳಿದುಬಂದಿದೆ.
ಸನ್ಯಾಸಿಯಾಗಿ ರಾಜಕಾರಣಕ್ಕೆ ಬರಬಾರದೆಂಬ ಉಲ್ಲೇಖವಿದೆಯೇ?: ಶೀರೂರು ಶ್ರೀ ಸಂದರ್ಶನ
ಕಳೆದ ಕೆಲ ತಿಂಗಳುಗಳಿಂದ ಶ್ರೀಗಳಿಗೆ ಆಗಾಗ ಆರೋಗ್ಯ ಸಮಸ್ಯೆ ಎದುರಾಗುತ್ತಲೇ ಇತ್ತು.ಈ ಹಿಂದೆ ಥೈರಾಯ್ಡ್ ಸಮಸ್ಯೆ ಇದ್ದಿದ್ದರಿಂದ ಶೀರೂರು ಶ್ರೀಗಳಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ನಂತರದ ದಿನಗಳಲ್ಲಿ ಪದೇ ಪದೇ ಆಸ್ಪತ್ರೆಗಳಿಗೆ ತಪಾಸಣೆಗೆ ತೆರಳುತ್ತಿದ್ದ ಶ್ರೀಗಳು ಒಮ್ಮೆ ಗುಣಮುಖರಾದರೆ ಮತ್ತೊಮ್ಮೆ ಅನಾರೋಗ್ಯಕ್ಕೆ ಈಡಾಗುತ್ತಲೇ ಇದ್ದರು.
ಬುಧವಾರ ಬೆಳಿಗ್ಗೆ ಶ್ರೀಗಳನ್ನು ಕೆಎಂಸಿಗೆ ದಾಖಲಿಸಲಾಗಿತ್ತು. ಅವರು ರಕ್ತವಾಂತಿ ಮಾಡಿದ್ದರಿಂದ ಸಂಜೆಯಿಂದಲೇ ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
8ನೇ ವಯಸ್ಸಿಗೆ ಸನ್ಯಾಸತ್ವ ಸ್ವೀಕರಿಸಿದ ಶ್ರೀಗಳು ಮಠದ 30ನೇ ಯತಿಯಾಗಿ ನೇಮಕಗೊಂಡಿದ್ದರು. ತಂದೆ ವಿಠಲ ಆಚಾರ್ಯ, ತಾಯಿ ಕುಸುಮಾ ಆಚಾರ್ಯ.ಹೆಬ್ರಿ ತಾಲೂಕಿನ ಮಡಮಕ್ಕಿ ಮೂಲ ಮನೆಯಾಗಿದ್ದರೆ, ಹರೀಶ್ ಆಚಾರ್ಯ ಮೂಲ ನಾಮವಾಗಿತ್ತು.
ಶೀರೂರು ಸ್ವಾಮೀಜಿ ಅಂತ್ಯಸಂಸ್ಕಾರದ ಕುರಿತು ಸೋದೆಮಠದ ತೀರ್ಥರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಸದ್ಯಕ್ಕೆ ಶೀರೂರು ಮಠದ ಜವಾಬ್ದಾರಿಯನ್ನು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯದ್ದಾಗಿರುತ್ತದೆ.
ಮೂಲಮಠದಲ್ಲಿ ಶೀರೂರು ಶ್ರೀಗಳ ಬೃಂದಾವನ ನಿರ್ಮಾಣ ಮಾಡಲಾಗುತ್ತದೆ, ಅಷ್ಠ ಮಠಗಳ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಉಪ್ಪು. ಹತ್ತಿ, ಕರ್ಪೂರ ತುಂಬಿ ಶ್ರೀ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಶ್ರೀಗಳ ಶರೀರಕ್ಕೆ ಮಧ್ವ ಸರೋವರದಲ್ಲಿ ಸ್ನಾನ ಮಾಡಿಸಲಾಗುತ್ತದೆ.