ಶೀರೂರು ಶ್ರೀ ಆಸ್ಪತ್ರೆಯಲ್ಲಿದ್ದಾಗ ಮಠಕ್ಕೆ ಬಂದಿದ್ದ ಅಪರಿಚಿತ ಯಾರು?
Recommended Video
ಉಡುಪಿ, ಜುಲೈ 23: ಉಡುಪಿಯ ಶೀರೂರು ಮಠದ ಶ್ರೀ ಲಕ್ಷೀವರ ತೀರ್ಥ ಸ್ವಾಮೀಜಿಗಳು ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದನ್ನು ಇಂದಿಗೂ ಅವರ ಭಕ್ತರಿಗೆ ಅರಗಿಸಿಕೊಳ್ಳುವುದಕ್ಕಾಗುತ್ತಿಲ್ಲ. ಸ್ವಾಮೀಜಿ ಅವರ ನಿಗೂಢ ಅಗಲಿಕೆ ಕುರಿತು ದಿನೇ ದಿನೇ ಹೊಸ ಹೊಸ ಕುತೂಹಲಕರ ಮಾಹಿತಿಗಳು ಹೊರಬೀಳುತ್ತಿವೆ.
ಮಠದ ಸಿಸಿಟಿವಿ ಕ್ಯಾಮರಾದ ಡಿವಿಆರ್ ನಾಪತ್ತೆಯಾಗಿರುವುದು ಇದೀಗ ಮತ್ತಷ್ಟು ಕುತೂಹಲ ಕೆರಳಿಸಿದೆ. ಶ್ರೀಗಳು ಆಸ್ಪತ್ರೆಗೆ ದಾಖಲಾದ ನಂತರ ಅಪರಿಚಿತ ವ್ಯಕ್ತಿಯೊಬ್ಬ ಮಠಕ್ಕೆ ಆಗಮಿಸಿದ್ದು, ಈತನೇ ಡಿವಿಆರ್ ಅನ್ನು ಕದ್ದೊಯ್ದಿರಬಹುದು ಎಂದು ಶಂಕಿಸಲಾಗಿದೆ.
ಶೀರೂರು ಶ್ರೀಗಳ ಸಾವಿನ ಹಿಂದೆ ಮಹಿಳೆಯ ನೆರಳು?: ತನಿಖೆ ಚುರುಕು
ಆದರೆ ಆ ಡಿವಿ ಆರ್ ನಲ್ಲಿ ಅಂಥದ್ದೇನಿತ್ತು. ಅದು ನಾಪತ್ತೆಯಾಗುವಲ್ಲಿ ಆ ಅಪರಿಚಿತ ವ್ಯಕ್ತಿಯ ಕೈವಾಡವಿದೆಯೇ? ಅಷ್ಟಕ್ಕೂ ಆ ಅಪರಿಚಿತ ವ್ಯಕ್ತಿ ಯಾರು ಎಂಬುದು ಇದೀಗ ಪೊಲೀಸರಿಗೆ ಹೊಸ ತಲೆನೋವಾಗಿರುವ ವಿಷಯ.
ಫುಡ್ ಪಾಯ್ಸನ್ ಕಾರಣ ಜುಲೈ 19 ರಂದು ಶೀರೂರು ಶ್ರೀಗಳು ದೈವಾಧೀನರಾಗಿದ್ದರು. ಅವರಿಗೆ 55 ವರ್ಷ ವಯಸ್ಸಾಗಿತ್ತು. ಹಲವು ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿದ್ದ ಶ್ರೀಗಳ ಅಗಲಿಕೆ ನಿಗೂಢತೆ ಸೃಷ್ಟಿಸಿತ್ತು. ಇದು ಸಹಜ ಸಾವಲ್ಲ ಎಂದು ಅವರ ಆಪ್ತರು ಆರೋಪಿಸಿದ್ದರು.
ಆ ವ್ಯಕ್ತಿ ಯಾರು?
ಶೀರೂರು ಶ್ರೀಗಳು ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆಯೇ ಅವರ ಮಠಕ್ಕೆ ಅಪರಿಚಿತ ವ್ಯಕ್ತಿಯೊಬ್ಬರು ಆಗಮಿಸಿದ್ದರು ಎಂಬ ಕುರಿತು ಮಾಹಿತಿ ಲಭ್ಯವಾಗಿದೆ. ಆ ದಿನ ಶೀರೂರು ಶ್ರೀ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ಕಾರಣ ಮಠದಲ್ಲಿದ್ದವರೂ ಆ ವ್ಯಕ್ತಿಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ. ಆದರೆ ಇದೀಗ ಸಿಸಿಟಿವಿಯ ಡಿವಿಆರ್ ನಾಪತ್ತೆಯಾದ ಮೇಲೆ ಆ ವ್ಯಕ್ತಿ ಯಾರು ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಪೊಲೀಸರು ಸಹ ಈ ನಿಟ್ಟಿನಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ಏನಿತ್ತು ಡಿವಿಆರ್ ನಲ್ಲಿ?
ಅಕಸ್ಮಾತ್ ಆ ಡಿವಿಆರ್ ಪೊಲೀಸರಿಗೆ ಸಿಕ್ಕಿದ್ದರೆ ಶ್ರೀಗಳ ಸಾವು ಅಸಹಜವೇ ಆಗಿದ್ದರೆ ಅದಕ್ಕೆ ಕಾರಣವೇನು ಎಂಬುದು ತಿಳಿಯುತ್ತಿತ್ತೇನೋ! ಅಥವಾ ಆ ಡಿವಿಆರ್ ನಲ್ಲಿ ಹಲವು ಗೌಪ್ಯ ಮಾಹಿತಿಗಳು ಇದ್ದಿರಬಹುದು. ಅದಕ್ಕೆಂದೇ ಇದನ್ನು ಯಾರೋ ಒಬ್ಬರು ಕದ್ದಿದ್ದಾರೆ. ಶ್ರೀಗಳು ಆಸ್ಪತ್ರೆಗೆ ಸೇರಿದ್ದಾಗಲೇ ಈ ಕೆಲಸ ನಡೆದಿದೆ ಎಂದರೆ ಶ್ರೀಗಳು ಪ್ರಾಣಕ್ಕೆ ಅಪಾಯವಿದೆ ಎಂಬುದು ಯಾರಿಗೋ ಮೊದಲೇ ತಿಳಿದಿತ್ತೇ? ಅಪರಿಚಿತನೊಬ್ಬ ಮಠದ ಒಳಗೆ ಬಂದು ಡಿವಿಆರ್ ಅನ್ನು ಕದ್ದೊಯ್ದಿದ್ದು ಯಾರ ಗಮನಕ್ಕೂ ಬರಲಿಲ್ಲವೇ? ಇತ್ಯಾದಿ ಪ್ರಶ್ನೆಗಳು ಈಗ ಎದ್ದಿವೆ.
ಮಹಿಳೆ ಪೊಲೀಸ್ ವಶಕ್ಕೆ
ಶ್ರೀಗಳಿಗಾಗಿ ಫಲಾಹಾರ ತರುತ್ತಿದ್ದ ಬ್ರಹ್ಮಾವರದ ಮಹಿಳೆಯೊಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಫುಡ್ ಪಾಯ್ಸನ್ ಕಾರಣ ಯತಿಗಳು ಹರಿಪಾದ ಸೇರಿದರು ಎನ್ನಲಾಗುತ್ತಿರುವ ಕಾರಣ ಅವರಿಗೆ ಆಹಾರ ನೀಡುತ್ತಿದ್ದ ಮಹಿಳೆಯ ವಿಚಾರಣೆ ಮಾಡಲಾಗಿದೆ. ಮಠದ ಅಡುಗೆ ಭಟ್ಟರನ್ನೂ ಈಗಾಗಲೇ ವಿಚಾರಣೆ ನಡೆಸಲಾಗಿದೆ.
ಶೀರೂರು ಶ್ರೀಗಳ ಮನೆಯಲ್ಲಿ ತಂಗುತ್ತಿದ್ದ ಆ ಮಹಿಳೆ ಯಾರು?
ಕುತೂಹಲ ಕೆರಳಿಸಿದ ಆಡಿಯೋ
ಶೀರೂರು ಶ್ರೀಗಳ ಧ್ವನಿ ಎಂದು ಹೇಳಲಾಗುತ್ತಿರುವ ಆಡಿಯೋವೊಂದು ಹೊರಬಿದ್ದಿದ್ದು ಅದು ಮತ್ತಷ್ಟು ವಿವಾದ ಸೃಷ್ಟಿಸಿದೆ. ಅಷ್ಟಮಠಗಳ ಕೆಲವು ಸ್ವಾಮೀಜಿಗಳಿಗೆ ಮಾನಿನಿಯರ ಸಂಗವಿತ್ತು, ಮಕ್ಕಳಿದ್ದಾರೆ ಎಂದೆಲ್ಲ ಅವರು ಮಾತನಾಡಿರುವ ಆಡಿಯೋ ಇದು. ಇದು ನಿಜಕ್ಕೂ ಅವರದೇ ಧ್ವನಿಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ದೊರೆತಿಲ್ಲ. ಪೊಲೀಸರು ಈ ಕುರಿತು ಸಹ ತನಿಖೆ ನಡೆಸುತ್ತಿದ್ದಾರೆ.
ಶೀರೂರು ಶ್ರೀ ಸಾವು: ಕೃಷ್ಣ.. ಕೃಷ್ಣಾ.. ಮತ್ತೊಂದು ಆಡಿಯೋ ವೈರಲ್
ಕಾವಿ ಮೇಲೆ ಆರೋಪವೋ ಆರೋಪ
ಶೀರೂರು ಶ್ರೀ ಬದುಕಿದ್ದಾಗಲೂ ಅಷ್ಟಮಠದ ಹಲವು ಸ್ವಾಮೀಜಿಗಳ ಮೇಲೆ ಆರೋಪ ಮಾಡಿದ್ದರು. ಸ್ವಾಮೀಜಿಗಳಿಗೆ ಮಕ್ಕಳಿದ್ದಾರೆ, ಮಾನಿನಿಯರ ಸಂಗವಿದೆ ಎಂದಿದ್ದರು. ಅಷ್ಟ ಮಠಗಳಲ್ಲಿ ಪುತ್ತಿಗೆ ಮಠವನ್ನೊಂದು ಬಿಟ್ಟು ಉಳಿದೆಲ್ಲ ಮಠದ ಸ್ವಾಮೀಜಿಗಳೂ ಶೀರೂರು ಅವರನ್ನು ದೂರ ಮಾಡುವುದಕ್ಕೂ ಇದು ಕಾರಣ. ಆದರೆ ಅವರು ವಿಧಿವಶರಾದ ಮೇಲೆ ಪೇಜಾವರದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಗಳಿಂದ ಹಿಡಿದು ಹಲವರು, ಶೀರೂರು ಶ್ರೀಗಳ ಸಾವಿಗೆ ಮದ್ಯ ಕಾರಣವಾಯತೋ, ಮಾನಿನಿಯರು ಕಾರಣರಾದರೋ ಎಂದು ಕೇಳಿದ್ದು ಉಲ್ಲೇಖನೀಯ. ಕಾವಿಯ ಮೇಲೆ ಇದೀಗ ಒಂದಿಲ್ಲೊಂದು ಆರೋಪ ಕೇಳಿಬರುತ್ತಲೇ ಇದ್ದು ಮಠದ ಭಕ್ತರಲ್ಲಿ ಇರಿಸುಮುರಿಸುಂಟು ಮಾಡಿದೆ.